ಕಲ್ಲಡ್ಕ

Bantwal: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ: ನರಹರಿ ಪರ್ವತ ಸಮೀಪ ಕಾಂಕ್ರೀಟ್ ರಸ್ತೆ ಸಂಚಾರಕ್ಕೆ ಮುಕ್ತ

Mangalore ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡ್ ನಿಂದ ಅಡ್ಡಹೊಳೆ ಚತುಷ್ಪಥ ಕಾಮಗಾರಿ ಭರದಿಂದ ಸಾಗುತ್ತಿದ್ದು, ಇದೀಗ ನರಹರಿ ಪರ್ವತದ ಸಮೀಪ ಕಾಂಕ್ರೀಟ್ ರಸ್ತೆ ಸಂಚಾರಕ್ಕೆ ಮುಕ್ತಗೊಂಡಿದೆ.

ಜಾಹೀರಾತು

The construction of the four-lane highway from B.C. Road on the Mangalore-Bangalore National Highway is progressing rapidly, and now the concrete road near Narahari mountain has been opened to traffic.

ನರಹರಿ ಪರ್ವತ ಏರುರಸ್ತೆಯಲ್ಲಿ ವಾಹನಗಳು ಇದುವರೆಗೆ ಸಾಗುತ್ತಿತ್ತು. ಇದೀಗ ತಗ್ಗು ಪ್ರದೇಶದಲ್ಲಿ ನಿರ್ಮಿಸಿದ ಕಾಂಕ್ರೀಟ್ ರಸ್ತೆ ಕ್ಯೂರಿಂಗ್ ಬಳಿಕ ಸಂಚಾರಕ್ಕೆ ಮುಕ್ತಗೊಂಡಿದೆ. ಇದಲ್ಲದೆ, ಕಲ್ಲಡ್ಕದ ಫ್ಲೈಓವರ್ ನ ಕೆಳಗೆ ಸರ್ವೀಸ್ ರಸ್ತೆ ಅಭಿವೃದ್ಧಿಯಾಗುತ್ತಿದ್ದು, ಈ ರಸ್ತೆ  ಸಂಚಾರಕ್ಕೆ ಮುಕ್ತಗೊಂಡ ಬಳಿಕ ವಾಹನದಟ್ಟಣೆಯ ಸಮಸ್ಯೆಗೆ ಕಡಿವಾಣ ಬೀಳಲಿದೆ.

ಅಪಘಾತ ತಾಣವಾಗಿತ್ತು:

ನರಹರಿ ಪರ್ವತ ಏರುರಸ್ತೆ ಅಪಘಾತ ತಾಣವಾಗಿದ್ದು, ಘನ ವಾಹನಗಳ ಓಡಾಟಕ್ಕೆ ಕಡಿದಾದ ರಸ್ತೆ ಎನಿಸಿಕೊಂಡಿತ್ತು. ಹೀಗಾಗಿ ರಸ್ತೆ ಟ್ರಾಫಿಕ್ ಜಾಮ್ ಗಳಿಂದ ಕುಖ್ಯಾತಿ ಪಡೆದಿತ್ತು. ಹೆದ್ದಾರಿ ಕಾಮಗಾರಿ ಆರಂಭಗೊಂಡು ಬಹುತೇಕ ಭಾಗದ ಕಾಮಗಾರಿ ಪೂರ್ಣಗೊಂಡರೂ ನರಹರಿ ಪರ್ವತ ಭಾಗದ ರಸ್ತೆಯ ಕಾಮಗಾರಿ ಮುಗಿಯದೆ, ಅಗೆದು ಹಾಕಿರುವುದರಿಂದ ಟ್ರಾಫಿಕ್ ಜಾಮ್ ಗೆ ಕಾರಣವಾಗುತ್ತಿತ್ತು.

ಸರ್ವೀಸ್ ರಸ್ತೆಗಳನ್ನು ಹೊರತುಪಡಿಸಿ ಕಲ್ಲಡ್ಕ ಫ್ಲೈಓವರ್ ಸೇರಿದಂತೆ ಬಿ.ಸಿ.ರೋಡಿನಿಂದ ಉಪ್ಪಿನಂಗಡಿವರೆಗಿನ ಬಹುತೇಕ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಂಡರೂ ನರಹರಿ ಪರ್ವತ ಭಾಗದ ಕಾಮಗಾರಿ ಯಾವಾಗ ಪೂರ್ಣಗೊಳ್ಳುತ್ತದೆ ಎಂಬ ಪ್ರಶ್ನೆ ಹುಟ್ಟಿಕೊಂಡಿತ್ತು. ಈ ಕುರಿತು ಸಾಕಷ್ಟು ಟ್ರೋಲ್ ಗಳೂ ಆಗಿದ್ದವು.

ನರಹರಿ ಪರ್ವತ ಭಾಗದಲ್ಲಿ ಏರುರಸ್ತೆಯನ್ನು ತಗ್ಗು ಮಾಡಿ ರಸ್ತೆ ನಿರ್ಮಿಸಬೇಕಿದ್ದ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿದ್ದು, ಜತೆಗೆ ಕಾಮಗಾರಿ ವೇಳೆ ಬೃಹತ್ ಬಂಡೆಗಳನ್ನು ಸ್ಪೋಟಿಸುವ ಸವಾಲು ಕೂಡ ಗುತ್ತಿಗೆ ಕಂಪೆನಿಗೆ ಎದುರಾಗಿತ್ತು. ಹೀಗಾಗಿ ನರಹರಿ ಪರ್ವತದ ಭಾಗದಲ್ಲಿ ವಿಳಂಬಗತಿಯಲ್ಲಿ ಸಾಗಿದ ಕಾಮಗಾರಿಗೆ ವೇಗ ದೊರಕಿತ್ತು. ಹೆದ್ದಾರಿಯ ಪಾಣೆಮಂಗಳೂರಿನಿಂದ ಕಲ್ಲಡ್ಕ ಪೂರ್ಲಿಪ್ಪಾಡಿವರೆಗಿನ ಸರ್ವೀಸ್ ರಸ್ತೆ ಹಾಗೂ ಮಾಣಿಯ ಒಂದು ಬದಿಯ ಸರ್ವೀಸ್ ರಸ್ತೆಯ ಕಾಂಕ್ರೀಟ್ ಕಾಮಗಾರಿ ಬಾಕಿಯಿದ್ದು, ಅದನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುತ್ತಿದೆ. ಸದ್ಯಕ್ಕೆ ಮುಖ್ಯ ಹೆದ್ದಾರಿಯ ಬಹುತೇಕ ಭಾಗದ ಕಾಮಗಾರಿ ಪೂರ್ಣಗೊಂಡಿರುವುದರಿಂದ ಸಂಚಾರ ಹೆಚ್ಚಿನ ತೊಂದರೆ ಇಲ್ಲದಂತಾಗಿದೆ.

ನರಹರಿ ಪರ್ವತ ದೇವಸ್ಥಾನಕ್ಕೆ ಹೇಗೆ ಸಂಪರ್ಕ?

ನರಹರಿ ಪರ್ವತದ ಏರು ರಸ್ತೆಯು ಹೆದ್ದಾರಿಯಿಂದ ಮುಕ್ತಗೊಂಡರೂ ಇಲ್ಲಿನ ದೇವಸ್ಥಾನವನ್ನು ಸಂಪರ್ಕಿಸುವ ದೃಷ್ಟಿಯಿಂದ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕಿದೆ. ತಗ್ಗು ಪ್ರದೇಶದಿಂದಲೇ ದೇವಸ್ಥಾನ ಸಂಪರ್ಕ ರಸ್ತೆ ನಿರ್ಮಿಸುವುದು ಅಸಾಧ್ಯವಾಗಿದ್ದು, ಹಿಂದಿನ ಏರುರಸ್ತೆಯ ಮೂಲಕ ಸಾಗಿ ದೇವಸ್ಥಾನ ಸಂಪರ್ಕಿಸಬೇಕಿದೆ. ಹೀಗಾಗಿ ಯಾವ ರೀತಿ ಸಂಪರ್ಕ ರಸ್ತೆಯನ್ನು ನಿರ್ಮಿಸಲಾಗುತ್ತದೆ ಎಂಬ ಸ್ಪಷ್ಟ ಚಿತ್ರಣ ಕಾಮಗಾರಿ ಮುಗಿದ ಬಳಿಕವಷ್ಟೇ ಗೊತ್ತಾಗಬಹುದು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts