ಕವರ್ ಸ್ಟೋರಿ

ಬಂಟ್ವಾಳ ರೈಲ್ವೆ ಸ್ಟೇಶನ್ ಗೆ ಹೊಸರೂಪ

ಅಮೃತ ಭಾರತ್ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ರೈಲ್ವೆ ನಿಲ್ದಾಣಕ್ಕೆ ಅಭಿವೃದ್ಧಿಯ ಅವಕಾಶ ದೊರಕಿದ್ದು, ಕಳೆದ ಜನವರಿಯಿಂದೀಚೆಗೆ ಕಾಮಗಾರಿ ವೇಗ ಪಡೆದುಕೊಂಡಿದೆ. ಅಮೃತ್ ಭಾರತ ನಿಲ್ದಾಣ ಯೋಜನೆಯಡಿ ೨೮.೪೯ ಕೋಟಿ ರೂಪಾಯಿಯಲ್ಲಿ ಈ ನಿಲ್ದಾಣ ಸಂಪೂರ್ಣ ಬದಲಾಗುತ್ತಿದೆ.

ಜಾಹೀರಾತು

೨೦೨೪ರ ಫೆಬ್ರವರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಇದರ ಶಂಕುಸ್ಥಾಪನೆ ನೆರವೇರಿಸಿದ್ದು, ಆಗಿನ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ರಾಜೇಶ್ ನಾಯ್ಕ್ ಅವರು ಈ ಸಂದರ್ಭ ರೈಲ್ವೆ ನಿಲ್ದಾಣದಲ್ಲಿದ್ದರು. ಅದಾಗಿ ವರ್ಷ ಒಂದು ಕಳೆದು ನಾಲ್ಕು ತಿಂಗಳಾಯಿತು. ಆದರೆ ಇನ್ನೂ ಹಲವು ಕೆಲಸಗಳು ಬಾಕಿ ಉಳಿದಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.ಬಂಟ್ವಾಳ ಸಹಿತ ಅಮೃತ ಭಾರತ ಯೋಜನೆಯಡಿ ಕೆಲಸ ಆರಂಭಗೊಂಡ ರೈಲ್ವೆ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಆದಷ್ಟು ಶೀಘ್ರ ಮುಗಿಸುವ ಭರವಸೆ ಇದೆ ಎಂದಿದ್ದಾರೆ ಸಂಸದ  ಕ್ಯಾ. ಬ್ರಿಜೇಶ್ ಚೌಟ,

೨೮.೪೯ ಕೋಟಿ ರೂಗಳಲ್ಲಿ ಏನೇನಾಗುತ್ತಿದೆ?

ರೈಲ್ವೆ ನಿಲ್ದಾಣದ ಕೆಲಸಗಳು ಎಲ್ಲವೂ ಅಂದುಕೊಂಡಂತೆ ಆದರೆ, ಪ್ರಯಾಣಿಕರಿಗೆ ಈಗಿರುವ ಸೌಲಭ್ಯಗಳು ದುಪ್ಪಟ್ಟಾಗುತ್ತವೆ. ಮುಂಗಡ ಬುಕ್ಕಿಂಗ್ ಸಹಿತ ಟಿಕೆಟ್ ಕೌಂಟರ್ ಸಾಕಷ್ಟು ಜಾಗದೊಂದಿಗೆ ನಿರ್ಮಾಣವಾಗುತ್ತಿದೆ. ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ವೈಟಿಂಗ್ ರೂಮ್ ಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಒಂದು ಕೆಫೆಟೀರಿಯಾ. ನಾಲ್ಕು ಕ್ಯಾಟರಿಂಗ್ ಸ್ಟಾಲ್ ಗಳು ಇರಲಿದ್ದು, ಪ್ರತಿಯೊಂದು ಪ್ಲಾಟ್ ಫಾರ್ಮ್ ಗಳಲ್ಲಿ ಸುಸಜ್ಜಿತ ಶೌಚಾಲಯ ವ್ಯವಸ್ಥೆ, ಸ್ಟೇಶನ್ ಕಟ್ಟಡಕ್ಕೆ ಗ್ರಾನೈಟ್ ನೆಲಹಾಸು. ಇತರ ಭಾಗಕ್ಕೆ ಕಾಂಕ್ರೀಟ್. ಮತ್ತು ಟೈಲ್ಸ್ ಅಳವಡಿಕೆಯಾಗುತ್ತಿದೆ., ಪ್ಲಾಟ್ ಫಾರ್ಮ್ ಉದ್ದಕ್ಕೂ ಶೆಲ್ಟರ್ ನಿರ್ಮಾಣವಾಗುತ್ತಿದ್ದು, ಸಂಪೂರ್ಣವಾಗಬೇಕಷ್ಟೇ. ಇಡೀ ರೈಲ್ವೆ ನಿಲ್ದಾಣಕ್ಕೆ ಸಿಸಿಟಿವಿ ಅಳವಡಿಕೆ, ವೈಫೈ ಸೌಲಭ್ಯ ಒದಗಿಸುವುದು ಯೋಜನೆಯಲ್ಲಿದೆ. ಎಲ್.ಇ.ಡಿ. ಡಿಸ್ಲ ಪ್ಲೇ ಮೂಲಕ ರೈಲುಗಳು ಬಂದು, ಹೋಗುವ ಕುರಿತ ಮಾಹಿತಿ, ಕೋಚ್ ಎಲ್ಲಿ ನಿಲ್ಲುತ್ತದೆ ಎಂಬ ಕುರಿತು ಡಿಸ ಪ್ಲೇ ಬೋರ್ಡ್ ಅಳವಡಿಕೆ ಇರಲಿದೆ ಸ್ಟೇಶನ್ ನ ಮುಖದ್ವಾರವನ್ನು ಅಂದಗೊಳಿಸುವುದು ಈ ಅಭಿವೃದ್ಧಿಯ ಪಟ್ಟಿಯಲ್ಲಿವೆ. ಈಗಾಗಲೇ ರೈಲ್ವೆ ನಿಲ್ದಾಣದ ವಿದ್ಯುದೀಕರಣಕ್ಕೆ ಬೇಕಾದ ವ್ಯವಸ್ಥೆಗಳನ್ನೂ ಕಲ್ಪಿಸಲಾಗಿದೆ. ವಿದ್ಯುತ್ ರೈಲು ಓಡಾಟ ಆರಂಭಗೊಂಡರೆ, ಈ ರೈಲ್ವೆ ನಿಲ್ದಾಣದಲ್ಲಿ ಪೂರಕವಾದ ವ್ಯವಸ್ಥೆಗಳು ದೊರಕುತ್ತವೆ.

ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾರ್ಯ ಕಳೆದ ವರ್ಷ ಡಿಸೆಂಬರ್ ವರೆಗೆ ಪ್ಯಾಸೆಂಜರ್ ರೈಲಿನಂತಿತ್ತು. ಈಗ ಸೂಪರ್ ಫಾಸ್ಟ್ ರೈಲಿನಂತಾಗಿದೆ. ಕಾಮಗಾರಿ ದಿಢೀರನೆ ಇಷ್ಟೊಂದು ಕ್ಷಿಪ್ರಗತಿಯಲ್ಲಿ ನಡೆಯುವ ಸಂದರ್ಭ, ಎಲ್ಲವನ್ನೂ ಮುಗಿಸಬೇಕಾದರೆ, ಗುಣಮಟ್ಟವನ್ನು ಖಾತ್ರಿಯಾಗಿಟ್ಟುಕೊಳ್ಳುತ್ತಾರೆಯೇ ಎಂಬ ಅನುಮಾನ ಸ್ಥಳೀಯರಿಗಿದೆ. ಈ ಕುರಿತು ರೈಲ್ವೆ ಕೆಲಸ ಮಾಡುತ್ತಿರುವ ಸಿವಿಲ್ ಇಂಜಿನಿಯರುಗಳನ್ನು ಸಂಪರ್ಕಿಸಿದಾಗ ನಾವು ಮಾಡುವ ಕೆಲಸದ ಕುರಿತು ಕಣ್ಗಾವಲು ಏಜನ್ಸಿ ಗಮನಿಸುತ್ತದೆ ಎಂದಿದ್ದಾರೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts