ಪಾಣೆಮಂಗಳೂರು ಜೈನರ ಪೇಟೆಯ ಪುರಾತನ ಭ.೧೦೦೮ ಶ್ರೀ ಅನಂತನಾಥ ತೀರ್ಥಂಕರ, ಭ.೧೦೦೮ ಶ್ರೀ ಚಂದ್ರನಾಥ ತೀರ್ಥಂಕರ, ಮಹಾ ಮಾತೆ ಪದ್ಮಾವತಿ ದೇವಿ ಜಿನ ಚೈತ್ಯಾಲಯದಲ್ಲಿ ಸುಮಾರು 2.5 ಕೋಟಿ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ತ್ಯಾಗಿ ನಿವಾಸ,ಸಭಾ ಭವನ, ಭೋಜನ ಶಾಲೆ ಮತ್ತು ತಡೆಗೋಡೆ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ, ವಾಸ್ತುತಜ್ಞ ಸುದರ್ಶನ ಇಂದ್ರ ಮತ್ತು ಪುರೋಹಿತರ ನೇತೃತ್ವದಲ್ಲಿ ವಿಧಿ ಪ್ರಕಾರ ನಡೆಯಿತು.
ನಂತರ ನಡೆದ ಸಭಾ ಕಾರ್ಯಕ್ರಮವನ್ನು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ,ದಾನಿಗಳ ಸಮ್ಮುಖದಲ್ಲಿ ಸಹಕಾರ ರತ್ನ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ನಾವೆಲ್ಲರೂ ನಮ್ಮ ದೈನಂದಿನ ಸಂಪಾದನೆಯಲ್ಲಿ ಒಂದು ಪಾಲು ದಾನಕ್ಕಾಗಿ ಮೀಸಲಿಟ್ಟು, ಅದನ್ನು ಇಂತಹ ಉತ್ತಮ ಕಾರ್ಯಗಳಿಗೆ ದಾನ ನೀಡಿದಲ್ಲಿ ಆ ಪುಣ್ಯ ನಮ್ಮನ್ನು ಕಾಪಾಡುತ್ತದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಬೆಂಗಳೂರಿನ ಬ್ರಹ್ಮದೇವಯ್ಯ ರವರು ವಹಿಸಿದ್ದರು. ಕಟ್ಟಡದ ನಿರ್ಮಾಣ ಮಾಡಲು ದಾನ ನೀಡಿದ ಸಮಾಜದ ಮಹನೀಯರಿಗೆ ಸ್ವಾಗತಿಸಿ ಗೌರವಿಸಲಾಯಿತು. ಡಾ. ಎಮ್ ಎನ್ ರಾಜೇಂದ್ರ ಕುಮಾರ್ ರವರಿಗೆ ಜೀರ್ಣೋದ್ಧಾರ ಸಮಿತಿಯ ಸರ್ವ ಸದಸ್ಯರು, ಉಪಸ್ಥಿತ ಗಣ್ಯರು ಸೇರಿ ಗೌರವಿಸಿದರು. ರತ್ನಾಕರ್ ಜೈನ್, ಮಂಗಳೂರು ಮಾತನಾಡಿ ಪಾಣೆಮಂಗಳೂರು ಬಸದಿಯ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು. ನ್ಯಾಯವಾದಿ ಜಿನೇಂದ್ರ ಕುಮಾರ್ ದಾನದ ಮಹತ್ವ ಉಲ್ಲೇಖಿಸಿ ಮಾತನಾಡಿದರು.ಹರ್ಷರಾಜ ಬಳ್ಳಾಲ್ ಸ್ವಾಗತಿಸಿದರು, ದೀಪಕ್ ಕುಮಾರ್ ಇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಭಾಸ್ ಚಂದ್ರ ಜೈನ್ ಕಾರ್ಯಕ್ರಮ ನಿರ್ವಹಣೆ ಮಾಡಿ ಧನ್ಯವಾದ ಸಮರ್ಪಿಸಿದರು.