ಶುಕ್ರವಾರ ರಾತ್ರಿ ನಡೆದ ಘಟನೆಯಲ್ಲಿ ಬಂಟ್ವಾಳ ತಾಲೂಕಿನ ಪಾಣೆಮಂಗಳೂರಿನ ಅಕ್ಕರಂಗಡಿ ನಿವಾಸಿ ಹಮೀದ್ ಎಂಬವರಿಗೆ ಇರಿದ ಪ್ರಕರಣಕ್ಕೆ ಸಂಬಂಸಿದಂತೆ ಬಂಟ್ವಾಳ ಪೊಲೀಸರು ಹಲವರ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಆರೋಪಿಗಳ ಸುಳಿವು ಪತ್ತೆಯಾಗಿಲ್ಲ.
ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಬಂಟ್ವಾಳ ಡಿ.ವೈ.ಎಸ್.ಪಿ.ವಿಜಯ ಪ್ರಸಾದ್ ಮಾರ್ಗದರ್ಶನದಲ್ಲಿ ಬಂಟ್ವಾಳ ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ಆನಂತಪದ್ಮನಾಭ ಅವರ ನೇತೃತ್ವದಲ್ಲಿ ನಾಲ್ಕು ತಂಡಗಳು ಪ್ರಕರಣದ ತನಿಖೆ ಆರಂಭಿಸಿತ್ತು. ಅಬ್ದುಲ್ ಹಮೀದ್ ಶುಕ್ರವಾರ ರಾತ್ರಿ ಸಮಯ ಸುಮಾರು ೭.೪೫ ಗಂಟೆಗೆ ಕ್ಯಾಂಟೀನೊಂದಕ್ಕೆ ಬಂದು ತಂಪು ಪಾನೀಯವನ್ನು ಕುಡಿದು ಪೋನಿನಲ್ಲಿ ಮಾತನಾಡಿಕೊಂಡಿದ್ದಾಗ, ಅಲ್ಲಿಗೆ ಇಬ್ಬರು ಅಪರಿಚಿತರು ಬೈಕಿನಲ್ಲಿ ಬಂದಿದ್ದು, ಅವರುಗಳ ಪೈಕಿ ಓರ್ವ ತಾನು ತಂದಿದ್ದ ತಲವಾರಿನಿಂದ ಅಬ್ದುಲ್ ಹಮೀದ್ ಅವರಿಗೆ ಹಲ್ಲೆ ನಡೆಸಿರುತ್ತಾನೆ. ತಲವಾರಿನಿಂದ ಕಡಿದ ಪರಿಣಾಮ ಎಡಕೈಗೆ ಗಾಯವಾಗಿರುತ್ತದೆ. ಗಾಯಗೊಂಡ ಅಬ್ದುಲ್ ಹಮೀದ್ ಬೊಬ್ಬೆ ಹಾಕಿ ಓಡಿದಾಗ ಆರೋಪಿಗಳು ಅದೇ ಬೈಕಿನಲ್ಲಿ ಹೋಗಿದ್ದರು.