ಬಂಟ್ವಾಳ:ಜೇಸಿ ಜೋಡುಮಾರ್ಗ ನೇತ್ರಾವತಿಯ ನೂತನ ತಂಡದ ಪದಗ್ರಹಣ ಬಿ.ಸಿ.ರೋಡಿನ ರೋಟರಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆಯಿತು. ಈ ಸಂದರ್ಭ ಜೇಸಿ ವಲಯ 15ರ ಅಧ್ಯಕ್ಷ ಅಭಿಲಾಷ್ ಬಿ.ಎ. ಮಾತನಾಡಿ, ಜೇಸಿ ಆಂದೋಲನವು ಸಾಮಾಜಿಕವಾಗಿ ತೊಡಗಿಸಿಕೊಂಡಿದ್ದು, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ. ಜೋಡುಮಾರ್ಗ ನೇತ್ರಾವತಿಗೆ ಯುವ ತಂಡ ದೊರಕಿದ್ದು, ಹಿರಿಯರ ಮಾರ್ಗದರ್ಶನದೊಂದಿಗೆ ಮುನ್ನಡೆಯಲಿರುವುದು ಸಂತೋಷದ ಸಂಗತಿ ಎಂದರು.
ಮುಖ್ಯ ಅತಿಥಿಯಾಗಿ ಯೆನೆಪೊಯ ಮೆಡಿಕಲ್ ಕಾಲೇಜಿನ ಅನಾಟಮಿ ವಿಭಾಗದ ಉಪನ್ಯಾಸಕಿ ಪ್ರಿಯಾ ಮಿನೇಜಸ್ ಮಾತನಾಡಿ, ನಮ್ಮ ವ್ಯಕ್ತಿತ್ವವನ್ನು ರೂಪುಗೊಳಿಸಲು ಇಂಥ ಸಂಸ್ಥೆಗಳು ಸಹಕಾರಿಯಾಗುತ್ತದೆ. ನಮ್ಮ ಬದುಕು ಪೆನ್ಸಿಲ್ ಇದ್ದಂತೆ. ಸ್ಪಷ್ಟವಾಗಿ ಬರೆಯಬೇಕೆಂದರೆ, ಅದು ಹೆಚ್ಚು ಚೂಪಾಗಬೇಕು, ಹಾಗೆಯೇ ನಮ್ಮ ಕುರಿತು ಇರುವ ಹೊಗಳಿಕೆ ಹಾಗೂ ಟೀಕೆ, ವಿಮರ್ಶೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿಕೊಂಡು ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು.
ಗೌರವ ಅತಿಥಿಯಾಗಿ ಭಾಗವಹಿಸಿದ ಜೇಸಿ ವಲಯ 15ರ ರೀಜ್ ಎ ಉಪಾಧ್ಯಕ್ಷೆ ಅಶ್ವಿನಿ ಐತಾಳ್ ಮಾತನಾಡಿ, ಜೋಡುಮಾರ್ಗ ಜೇಸಿಯ ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡರು.ಇದೇ ವೇಳೆ ಕೊಯಿಲ ಸರಕಾರಿ ಹೈಸ್ಕೂಲ್ ಗೆ ನೀಡಿದ ಕೊಡುಗೆಯನ್ನು ಶಾಲಾ ಅಧ್ಯಾಪಕರು ಸ್ವೀಕರಿಸಿದರು. ಪ್ರಗತಿಪರ ಕೃಷಿಕ ನಿರಂಜನ ಸೇಮಿತ ಬಡಗಬೆಳ್ಳೂರು ಅವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ನೂತನ ಅಧ್ಯಕ್ಷರಾಗಿ ತೃಪ್ತಿ. ಪಿ. ಹಾಗೂ ಕಾರ್ಯದರ್ಶಿಯಾಗಿ ಪ್ರಗತಿ ಕೆ. ಅಧಿಕಾರ ಸ್ವೀಕರಿಸಿದರು. ನಿರ್ಗಮನ ಅಧ್ಯಕ್ಷ ಸುಬ್ರಹ್ಮಣ್ಯ ಪೈ ಹಾಗೂ ಕಾರ್ಯದರ್ಶಿ ಡಾ. ಧೀರಜ್ ಹೆಬ್ರಿ ಜವಾಬ್ದಾರಿ ಹಸ್ತಾಂತರ ಮಾಡಿದರು. ನಿಕಟಪೂರ್ವ ಅಧ್ಯಕ್ಷೆ ಗಾಯತ್ರಿ ಲೋಕೇಶ್ ಶುಭ ಹಾರೈಸಿದರು. ನೂತನ ಅಧ್ಯಕ್ಷ ತೃಪ್ತಿ. ಪಿ. ಎಲ್ಲರ ಸಹಕಾರ ಯಾಚಿಸಿದರು. ಜ್ಯೂನಿಯರ್ ಜೇಸಿ ಅಧ್ಯಕ್ಷರಾಗಿ ಪ್ರಜ್ವಲ್ ಕುವೆಲ್ಲೊ ಅಧಿಕಾರ ಸ್ವೀಕರಿಸಿದರು. ಪೂರ್ವಾಧ್ಯಕ್ಷ ಬಿ. ರಾಮಚಂದ್ರ ರಾವ್ ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಂಡರು. ಹೊಸ ಸದಸ್ಯರ ಸೇರ್ಪಡೆ ನಡೆಯಿತು. ನೂತನ ಕಾರ್ಯದರ್ಶಿ ಪ್ರಗತಿ ಕೆ ವಂದಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…