ವಿಶೇಷ ವರದಿ

ಬಂಟ್ವಾಳ ಪುರಸಭಾ ವ್ಯಾಪ್ತಿಯ ಸ್ಮಶಾನಗಳು ಎಲ್ಲಿವೆ? ವಿವರ ಇಲ್ಲಿದೆ

ಬಡ್ಡಕಟ್ಟೆ ಸ್ಮಶಾನ

ಕೈಕುಂಜೆ ರುದ್ರಭೂಮಿಯ ಸಮೀಪ ಯಾರೋ ಹೊರಗಿನಿಂದ ಬಂದು ತ್ಯಾಜ್ಯ ಬಿಸಾಡಿ ಹೋಗುತ್ತಿರುವುದು.

;ಪಾಣೆಮಂಗಳೂರು ರುದ್ರಭೂಮಿ

ಕೈಕುಂಜ ರುದ್ರಭೂಮಿ

ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಬಂಟ್ವಾಳದ ಬಡ್ಡಕಟ್ಟೆ, ಬಿ.ಸಿ.ರೋಡಿನ ಕೈಕುಂಜೆ ಹಾಗೂ ಪಾಣೆಮಂಗಳೂರು ಪೇಟೆಯ ನೇತ್ರಾವತಿ ನದಿ ತಟದಲ್ಲಿ ಎಲ್ಲ ವ್ಯವಸ್ಥೆಗಳಿರುವ ಸ್ಮಶಾನಗಳಿವೆ. ಬಂಟ್ವಾಳ ಹಾಗು ಪಾಣೆಮಂಗಳೂರು ಸ್ಮಶಾನಗಳಿಗೆ ರಸ್ತೆಯ ಕೊರತೆ, ವಾಹನ ಪಾರ್ಕಿಂಗ್ ಇತ್ಯಾದಿ ಸಮಸ್ಯೆಗಳು ಇಲ್ಲ. ಆದರೆ ಕೈಕುಂಜೆ ರುದ್ರಭೂಮಿಗೆ ತೆರಳಬೇಕಾದರೆ ರೈಲ್ವೆ ಜಾಗದಲ್ಲಿ ಸಾಗಬೇಕು. ಭವಿಷ್ಯದಲ್ಲಿ ಕಟ್ಟಿಗೆ ಕೊರತೆ ಸಹಿತ ದಹನಕ್ರಿಯೆಗೆ ಪೂರಕ ವ್ಯವಸ್ಥೆಗಳು ದೊರಕದೇ ಇದ್ದರೆ, ಪರ್ಯಾಯ ವ್ಯವಸ್ಥೆಯಾದ ವಿದ್ಯುತ್ ಚಿತಾಗಾರವನ್ನು ನಿರ್ಮಿಸಬೇಕು ಎಂಬ ಒತ್ತಾಯವೂ ಸ್ಥಳೀಯರದ್ದು.

ಜಾಹೀರಾತು

ಪಾಣೆಮಂಗಳೂರು ಹೇಗಿದೆ:

ಪಾಣೆಮಂಗಳೂರು ಪೇಟೆಯಲ್ಲಿ ನೇತ್ರಾವತಿ ನದಿಯ ಸನಿಹ ಇರುವ ರುದ್ರಭೂಮಿಯನ್ನು ಹಿಂದು ಸ್ಮಶಾನ ಸಮಿತಿ ನಿರ್ವಹಿಸುತ್ತಿದೆ. ಇಲ್ಲಿಗೆ ಸಾಗುವ ರಸ್ತೆ ಅಭಿವೃದ್ದಿ ಹಾಗೂ ಸ್ಮಶಾನಕ್ಕೆ ಬೇಕಾದ ಪರಿಕರಗಳನ್ನು ಒದಗಿಸಲು ಹಿಂದು ಧಾರ್ಮಿಕ ದತ್ತಿ ಇಲಾಖೆ, ಪುರಸಭೆ, ಧರ್ಮಸ್ಥಳ ಯೋಜನೆ, ಸತ್ಯದೇವತಾ ಟ್ರಸ್ಟ್ ಸಹಿತ ಹಲವು ಸಂಘ, ಸಂಸ್ಥೆ, ಸರಕಾರಿ ಇಲಾಖೆಗಳು ನೆರವಾಗಿವೆ. ಸಮಿತಿಯ ಅಧ್ಯಕ್ಷರಾದ ಐ.ಗಣೇಶ್ ಪೈ, ಹಾಗೂ ಪ್ರಮುಖರಾದ ಸುರೇಶ್ ಪೈ, ವೈಕುಂಠ ಕುಡ್ವ ನಿರ್ವಹಣೆಯ ಮುಂಚೂಣಿಯಲ್ಲಿದ್ದು, ಇತರ ಸದಸ್ಯರು ಸಾಥ್ ನೀಡುತ್ತಾರೆ. ಇಲ್ಲಿ ಸಿಲಿಕಾನ್ ಚೇಂಬರ್ ಸಹಿತ ಮೂಲಸೌಕರ್ಯಗಳಿದ್ದು, ಒಂದು ಹೊತ್ತಿಗೆ ಮೂರರಿಂದ ಐದು ಶವದಹನ ಮಾಡಲೂ ಅವಕಾಶವಿದೆ. ನೀರು, ಕಟ್ಟಿಗೆಯಂಥ ಮೂಲಸೌಕರ್ಯಗಳ ಸಹಿತ ಎಲ್ಲ ವ್ಯವಸ್ಥೆಗಳೂ ಇರುವ ಕಾರಣ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮರಣವಾದರೆ ಇಲ್ಲಿಗೇ ತರಲಾಗುತ್ತದೆ. ಅಲ್ಲದೆ, ಸಮೀಪದಲ್ಲೇ ಸ್ನಾನಘಟ್ಟವಿರುವ ಕಾರಣ ಕ್ರಿಯಾಕರ್ಮಗಳನ್ನೂ ನಡೆಸಲು ಸುಲಭ. ಇಲ್ಲಿಗೆ ಬರುವ ರಸ್ತೆ ಹಾಗೂ ಆಸುಪಾಸನ್ನು ತ್ಯಾಜ್ಯಮುಕ್ತವಾಗಿಸಿದರೆ ಸ್ಮಶಾನಕ್ಕೆ ಆಗಮಿಸುವ ಮೃತರ ಬಂಧುಗಳಿಗೂ ಅನುಕೂಲ.

 ಬಡ್ಡಕಟ್ಟೆ ಸ್ಮಶಾನ:

ಬಡ್ಡಕಟ್ಟೆಯಲ್ಲಿರುವ ಹಿಂದು ಶವದಹನ ಸಂಸ್ಕಾರ ಸಂಘ ವತಿಯಿಂದ ನಿರ್ವಹಿಸಲ್ಪಡುವ ರುದ್ರಭೂಮಿಯ ಸಮಿತಿ ಅಧ್ಯಕ್ಷರು ಡಾ. ವಸಂತ ಬಾಳಿಗಾ. ಇಲ್ಲಿ ಏಕಕಾಲದಲ್ಲಿ ಆರು ದಹನ ಪ್ರಕ್ರಿಯೆ ನೆರವೇರಿಸಲು ಅವಕಾಶವಿದೆ, ಫರಂಗಿಪೇಟೆಯಿಂದ ಮಡಂತ್ಯಾರುವರೆಗಿನ ಪ್ರದೇಶಗಳಿಂದ ಇಲ್ಲಿ ದಹನಕ್ರಿಯೆಗೆಂದು ಬರುತ್ತಾರೆ ಎನ್ನುತ್ತಾರೆ ಕಾರ್ಯದರ್ಶಿ ಯು.ಸತೀಶ್ ನಾಯಕ್.

ಕೈಕುಂಜೆ ರುದ್ರಭೂಮಿಗೆ ಮಾರ್ಗದ ಸಮಸ್ಯೆ:

ಬಿ.ಸಿ.ರೋಡಿನ ರೈಲ್ವೆ ಸೇತುವೆಯ ಪಕ್ಕ ಕೈಕುಂಜೆ ಎಂಬಲ್ಲಿ ಸ್ಮಶಾನವಿದ್ದು, ಇಲ್ಲಿ ನಿರ್ವಹಣಾ ಸಮಿತಿಯೊಂದನ್ನು ರಚಿಸಲಾಗಿದೆ. ಸಾಕಷ್ಟು ಸ್ಥಳಾವಕಾಶ ಇಲ್ಲಿದ್ದು, ಪೂರಕ ವ್ಯವಸ್ಥೆಗಳನ್ನೂ ಕಲ್ಪಿಸಲಾಗಿದೆ. ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಈಗಾಗಲೇ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಲಾಗಿದ್ದು, ಇಲ್ಲಿಗೊಂದು ಸಂಪರ್ಕ ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕಾಗಿದೆ. ಈಗಾಗಲೇ ಈ ಕುರಿತು ರೈಲ್ವೆ ಇಲಾಖೆಗೆ ಸೂಚಿಸಬೇಕು ಎಂದು ಸಂಸದ ಬೃಜೇಶ್ ಚೌಟ ಬಳಿ ಮನವಿ ಸಲ್ಲಿಸಿದ್ದೇವೆ ಎಂದು ನಿರ್ವಹಣಾ ಸಮಿತಿ ಅಧ್ಯಕ್ಷ ದುರ್ಗಾದಾಸ್ ಶೆಣೈ. ಮೂರು ಸಿಲಿಕಾನ್ ಚೇಂಬರ್ ಇಲ್ಲಿದ್ದು, ನಿರ್ವಹಣೆಗೆಂದು ವ್ಯಕ್ತಿಗಳನ್ನು ನೇಮಿಸಲಾಗಿದೆ. ಬಿ.ಸಿ.ರೋಡ್ ಆಸುಪಾಸಿನ ಜನರಿಗೆ ಇದು ಹತ್ತಿರವಾಗುತ್ತದೆ. ಮನೆ ಮನೆ ಸಂಪರ್ಕ ಅಭಿಯಾನ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕಸದ ರಾಶಿ ಸಮಸ್ಯೆ

ಬಡ್ಡಕಟ್ಟೆ ಸ್ಮಶಾನದ ಬಳಿ, ಪಾಣೆಮಂಗಳೂರು ಸೇತುವೆಯಿಂದ ಪೇಟೆಗೆ ತೆರಳುವ ಜಾಗ ಹಾಗೂ ಕೈಕುಂಜೆ ಸ್ಮಶಾನದ ಪಕ್ಕ ಹೊರಗಿನಿಂದ ಜನರು ಕಸ ಎಸೆಯುವ ಪ್ರವೃತ್ತಿ ಇದ್ದು, ಇದರಿಂದಾಗಿ ಇಲ್ಲಿಗೆ ಆಗಮಿಸುವ ಮೃತಪಟ್ಟವರ ಬಂಧು, ಬಳಗಕ್ಕೆ ಸಾಕಷ್ಟು ಸಮಸ್ಯೆಗಳೂ ಉಂಟಾಗುತ್ತದೆ. ಸ್ಮಶಾನವನ್ನು ಅಚ್ಚುಕಟ್ಟಾಗಿಟ್ಟರೂ ಹೊರಗೆ ಕಿಡಿಗೇಡಿಗಳು ತಂದು ಸುರಿಯುವ ತ್ಯಾಜ್ಯ ಸಮಸ್ಯೆಗೂ ಕಡಿವಾಣ ಹಾಕಬೇಕಿದೆ.

 

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.