ಬಂಟ್ವಾಳ

ಮಾರ್ನಬೈಲು ಶ್ರೀ ಅಯ್ಯಪ್ಪ ಸ್ವಾಮಿಮಂದಿರ ವರ್ಧಂತ್ಯುತ್ಸವ, ದೀಪೋತ್ಸವ

ಶ್ರದ್ಧಾಭಕ್ತಿಯಿಂದ ಭಗವಂತನ ದರ್ಶನ ಮಾಡಿದಾಗ ಜನ್ಮ ಸಾರ್ಥಕ್ಯಗೊಳ್ಳುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಒಡಿಯೂರು ಶ್ರೀಗಳು ಸಂದೇಶ ನೀಡಿದರು.

ಮಾರ್ನಬೈಲು ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ 9ನೇ ಪ್ರತಿಷ್ಠಾ ವರ್ಧಂತ್ಯುತ್ಸವ ಹಾಗೂ ೫೧ನೇ ವರ್ಷದ ದೀಪೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಭೂದಾನ ಸಂಕಲ್ಪದ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿ, ಆಶೀರ್ವಚನ ನೀಡಿದರು.

ಜಾಹೀರಾತು

ಶ್ರದ್ಧೆ ಭಕ್ತಿಯಿಂದ ಭಗವಂತನ ದರ್ಶನ ಮಾಡಿದಾಗ ಮಾತ್ರ ಮನುಕುಲದ ನಮ್ಮ ಜನ್ಮ ಸಾರ್ಥಕ್ಯಗೊಳ್ಳುತ್ತದೆ. ಎಲ್ಲರೂ ಸಾನ್ನಿಧ್ಯದ ಅಭಿವೃದ್ಧಿಯ ಕಾರ್ಯದಲ್ಲಿ ತೊಡಗಿಸಿಕೊಂಡಾಗ ಸ್ವಾಮಿಯ ಅನುಗ್ರಹ ನಮಗೆ ಪ್ರಾಪ್ತಿಯಾಗುತ್ತದೆ ಎಂದರು.

ಕಾರ್ಯಕ್ರಮ ಸಂಜೀವ ಗುರುಸ್ವಾಮಿಯವರ ನೇತೃತ್ವದಲ್ಲಿ ವೇದಮೂರ್ತಿ ಶಿವಾನಂದ ಐತಾಳರ ವೈದಿಕತ್ವದಲ್ಲಿ ನೆರವೇರಿತು. ಬೆಳಿಗ್ಗೆ ಗಣಪತಿ ಹೋಮ, ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ, ಮಹಾಪೂಜೆಯೊಂದಿಗೆ ನೆರವೇರಿತು. ಶಿವರಂಜಿನಿ ಕಲಾಕೇಂದ್ರ ಪೊಳಲಿ ಬೊಕ್ಕಸ ಇವರಿಂದ ಗಾನಾಮೃತ ಹಾಗೂ ನೃತ್ಯ ವೈಭವ ನಡೆಯಿತು. ಶ್ರೀ ಕೃಷ್ಣ ಗುರುಸ್ವಾಮಿಯವರ ನೇತೃತ್ವದ ತಂಡ ಪಾದಯಾತ್ರೆ ಮೂಲಕ ಶಬರಿಮಲೆಗೆ ತೆರಳಿದರು.

ಪ್ರಧಾನ ಅತಿಥಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರೂ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಅಭಿವೃದ್ಧಿ ಸಮಿತಿ ಗೌರವ ಮಾರ್ಗದರ್ಶಕರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ ಪ್ರತಿ ಹಿಂದು ಜಾಗೃತರಾದಾಗ ಮಾತ್ರ ನಮ್ಮ ಭೂಮಿ, ನಮ್ಮ ಸಾನ್ನಿಧ್ಯಗಳು ಉಳಿಯಲು ಸಾಧ್ಯ. ಇಂತಹ ಪುಣ್ಯ ಕ್ಷೇತ್ರಗಳಲ್ಲಿ ಭೇಟಿ ನೀಡುವುದರ ಮೂಲಕ ನಮ್ಮ ಮಕ್ಕಳಲ್ಲಿ ಧಾರ್ಮಿಕ ಚಿಂತನೆ, ಧರ್ಮದ ಬಗೆಗಿನ ಗೌರವ, ಸಂಸ್ಕಾರ ಉಳಿಯುವಿಕೆ ಆಗುವುದರೊಂದಿಗೆ ಅಯ್ಯಪ್ಪ ಮಂದಿರದ ಭೂಮಿ ಖರೀದಿಗೆ ಎಲ್ಲರೂ ಸಹಾಯ ಸಹಕಾರ ನೀಡಿದಾಗ ಮಾತ್ರ ಸಾಧ್ಯ ಎಂದರು.

ಈ ಸಂದರ್ಭ ಮಂದಿರದ ಸಮಗ್ರ ಅಭಿವೃದ್ಧಿಗಾಗಿ ಹೊಸದಾಗಿ ರಚನೆಗೊಂಡ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಅಭಿವೃದ್ಧಿ ಸಮಿತಿ ಹಾಗೂ ಶಬರಿ ಮಾತೃ ಮಂಡಳಿಗೆ ಡಾ. ಕಮಲಾ ಪ್ರಭಾಕರ ಭಟ್ ಚಾಲನೆ ನೀಡಿದರು. ಮಂದಿರದ ನೂತನ ಕಚೇರಿಯನ್ನು ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಮಂದಿರದ ಲಾಂಛನವನ್ನು ಸಜೀಪಮುನ್ನೂರು ಮೂರ್ತೆದಾರರ ಸಹಕಾರಿ ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಬಿಡುಗಡೆಗೊಳಿಸಿದರು. ಬಝಾರ್ ಸಂಸ್ಥೆಯ ಆಡಳಿತ ನಿರ್ದೇಶಕರೂ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಅಭಿವೃದ್ಧಿ ಸಮಿತಿ ಸಹ ಗೌರವ ಅಧ್ಯಕ್ಷರಾದ ಸುಧಾಕರ ಆಚಾರ್ಯ ಇವರು ನಿಧಿಸಂಚಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಆಡಳಿತ ಟ್ರಸ್ಟ್ ಗೌರವಾಧ್ಯಕ್ಷ ಸಂಜೀವ ಗುರುಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.

ಸಭಾ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿರುವ ಕರ್ನಾಟಕ ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಕೆ. ರವೀಂದ್ರ ಕಂಬಳಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಸಂಜೀವ ಪೂಜಾರಿ ಮತ್ತು ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ನಾಲ್ಕನೇ ಬಾರಿಗೆ ಅಧಿಕಾರ ವಹಿಸಿಕೊಂಡ ಜಯಶಂಕರ ಬಾಸ್ರಿತ್ತಾಯ ಅವರನ್ನು ಸ್ವಾಮೀಜಿಯವರು ಗೌರವಿಸಿ, ಮಂತ್ರಾಕ್ಷತೆ ನೀಡಿ, ಅಭಿನಂದನಾ ಪ್ರಸಾದ ಸಮರ್ಪಿಸಿ ಸನ್ಮಾನಿಸಲಾಯಿತು.

ಅಭ್ಯಾಗತರಾಗಿ ಟ್ರಸ್ಟ್ ಗೌರವಾಧ್ಯಕ್ಷ ಕೃಷ್ಣ ಗುರುಸ್ವಾಮಿ, ಅಧ್ಯಕ್ಷ ಎನ್. ಪುರುಷೋತ್ತಮ ಪೂಜಾರಿ, ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಅಭಿವೃದ್ಧಿ ಸಮಿತಿ ಅಧ್ಯಕ್ಷ ದಾಮೋದರ ಬಿ.ಎಂ. ಮಾರ್ನಬೈಲು, ಕಾರ್ಯಾಧ್ಯಕ್ಷ ಡಿ. ಶಶಿಧರ ಆಳ್ವ ದಾಸರಗುಡ್ಡೆ, ಶಬರಿ ಮಾತೃ ಮಂಡಳಿ ಅಧ್ಯಕ್ಷೆ ಗಾಯತ್ರಿ ಆರ್. ಕಂಬಳಿ ಭಾಗವಹಿಸಿದ್ದರು. ಟ್ರಸ್ಟ್ ಗೌರವ ಸಲಹೆಗಾರ ಯಾದವ ಬಂಗೇರ ಕಂಚಿಲ, ಕಾರ್ಯದರ್ಶಿಗಳಾದ ಯಶವಂತ ಕೆ. ಆಚಾರ್ಯ ಮತ್ತು ಅಶೋಕ್ ಗಟ್ಟಿ ನಂದಾವರ, ತಾರಾ ಭಾಸ್ಕರ್, ಕೋಶಾಧಿಕಾರಿಗಳಾದ ಗಣೇಶ್ ಗುಡ್ಡೆಯಂಗಡಿ ಮತ್ತು ರಂಜಿತ್ ರಾವ್ ಬಟ್ಟಡ್ಕ, ಪ್ರಮುಖರಾದ ಯಶವಂತ ಡಿ. ದೇರಾಜೆಗುತ್ತು, ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ಪ್ರವೀಣ್ ಗಟ್ಟಿ ಮಾರ್ನಬೈಲು, ವಿಶ್ವನಾಥ ಬೆಳ್ಚಾಡ ಕೂಡೂರು, ಸಂದೀಪ್ ಕುಮಾರ್, ಆನಂದ ಕುಲಾಲ್, ವಿಶ್ವನಾಥ ಆಚಾರ್ಯ, ಸೋಮನಾಥ ಬಿ.ಎಂ. ಭಜನಾ ಸಮಿತಿ ಅಧ್ಯಕ್ಷರಾದ ಪ್ರಸನ್ನ ಆಚಾರ್ಯ, ಪ್ರಶಾಂತ್ ಆಚಾರ್ಯ ಉಪಸ್ಥಿತರಿದ್ದರು.

ಕೇಶವ ಮಾಸ್ತರ್ ಮಾರ್ನಬೈಲು ಸ್ವಾಗತಿಸಿ, ಕೃಷ್ಣಪ್ಪ ಬಂಗೇರ ಕಂಚಿಲ ವಂದನಾರ್ಪಣೆಗೈದರು. ದಾಮೋದರ ಬಿ.ಎಂ. ಮಾರ್ನಬೈಲು ಪ್ರಸ್ತಾವನೆ ನೀಡಿದರು. ಪುಷ್ಪರಾಜ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.

MARNABAIL

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.