ಬಂಟ್ವಾಳ

ಡಿ.20ರಿಂದ ಜ.26ರವರೆಗೆ ಕರಾವಳಿ ಕಲೋತ್ಸವ, ಬಹುಸಂಸ್ಕೃತಿ ಸಂಭ್ರಮ — ವಿವರಗಳು ಇಲ್ಲಿವೆ

ಪತ್ರಿಕಾಗೋಷ್ಠಿ

ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಚಿಣ್ಣರಲೋಕ ಮೋಕೆದ ಕಲಾವಿದೆರ್ ನೇವಾ ಟ್ರಸ್ಟ್ (ರಿ) ಬಂಟ್ವಾಳ, ಚಿಣ್ಣರ ಸೇವಾಬಂಧು ಸಂಯುಕ್ತ ಆಶ್ರಯದಲ್ಲಿ ಕರಾವಳಿ ಕಲೋತ್ಸವ 2024-25 ಮತ್ತು ಬಹುಸಂಸ್ಕೃತಿ ಸಂಭ್ರಮ ಬಂಟ್ವಾಳ ಬಿ.ಸಿ.ರೋಡ್ ನ ಗೋಲ್ಡನ್ ಪಾರ್ಕ್ ಅಸೋಸಿಯೇಟ್ಸ್ ಮೈದಾನದಲ್ಲಿ ಡಿಸೆಂಬರ್ 20ರಿಂದ ಜನವರಿ 26ರವರೆಗೆ ನಡೆಯಲಿದೆ. ದಿಯಾ ರಾವ್ ಚಿಣ್ಣರ ಅಧ್ಯಕ್ಷರಾಗಿ ಭಾಗವಹಿಸುವರು.  

ಕರಾವಳಿ ಕಲೋತ್ಸವದ ಅಧ್ಯಕ್ಷ ಸುದರ್ಶನ ಜೈನ್ ಹಾಗೂ ಸ್ಥಾಪಕರು ಹಾಗೂ ಪ್ರಧಾನ ಸಂಚಾಲಕರಾದ ಮೋಹನದಾಸ ಕೊಟ್ಟಾರಿ ಮುನ್ನೂರು ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜಾಹೀರಾತು

20ರಂದು ಸಂಜೆ ಉದ್ಘಾಟನಾ ಸಮಾರಂಭಗಳು ನಡೆಯಲಿದ್ದು, ಅಮ್ಯೂಸ್ ಮೆಂಟ್ ಪಾರ್ಕ್ ಸಹಿತ ಹಲವು ಆಕರ್ಷಣೆಗಳು ಇರಲಿವೆ. ಸಮಾರಂಭವನ್ನು ಶಾಸಕ ರಾಜೇಶ್ ನಾಯ್ಕ್, ಸಭಾಂಗಣವನ್ನು ಸ್ಪೀಕರ್ ಯು.ಟಿ.ಖಾದರ್, ಅಮ್ಯೂಸ್ಮೆಂಟ್ ಪಾರ್ಕ್ ಅನ್ನು ಸಂಸದ ಬ್ರಿಜೇಶ್ ಚೌಟ, ವಸ್ತುಮಳಿಗೆಯನ್ನು ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹಾಗೂ ಕಲೋತ್ಸವವನ್ನು ಮಾಜಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸುವರು. ದಿ.ಉದಯ ಚೌಟ ನೆನಪಿನ ಕಬಡ್ಡಿ ಕ್ರೀಡಾಪಟುವಿಗೆ ನೀಡುವ ಉದಯ ಚೌಟ ಸಾಧನಾ ಪ್ರಶಸ್ತಿಯನ್ನು ಅಂತಾರಾಷ್ಟ್ರೀಯ ಕಬಡ್ಡಿ ಪಟು ಸಚಿನ್ ಸುವರ್ಣ ಅವರಿಗೆ ನೀಡಲಾಗುವುದು. ಚಿಣ್ಣರ ಸೌರಭ ರಾಜ್ಯಪ್ರಶಸ್ತಿಯನ್ನು ಬಹುಮುಖ ಪ್ರತಿಭೆ ಆಶಿಕ್ ಎಂ.ರಾವ್ ಅವರಿಗೆ ನೀಡಲಾಗುವುದು ಎಂದರು. 21ರಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕರಾವಳಿ ಸೌರಭ ರಾಜ್ಯಪ್ರಶಸ್ತಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಅವರಿಗೆ ನೀಡಲಾಗುವುದು. 22ರಂದು ಕರಾವಳಿ ಸರಿಗಮಪ ಮೆಗಾ ಆಡಿಶನ್ ನಡೆಯಲಿದೆ. 24ರಂದು ಬ್ಯಾರಿ ಮಲಯಾಳ ಸಂಗೀತ ರಸಮಂಜರಿ, 25ರಂದು ಗಾನ ನೃತ್ಯ ವೈಭವ, 26ರಂದು ನೃತ್ಯಸಿಂಚನ, 28ರಂದು ಕರಾವಳಿ ಸರಿಗಮನ ಸೆಮಿಫೈನಲ್ ಮತ್ತು ಫೈನಲ್ ನಡೆಯಲಿದೆ.29ರಂದು ಸುವರ್ಣ ಸರಪಾಡಿ ಎಂಬ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿಯವರ ಯಕ್ಷಪಯಣದ 50ರ ಸಂಭ್ರಮ ಪುಸ್ತಕ ಬಿಡುಗಡೆ ನಡೆಯಲಿದೆ. 30ರಂದು ಬಹುಭಾಷಾ ಕವಿಸಂಗಮ ಮತ್ತು ಬಹುಸಂಸ್ಕೃತಿ ಸಂಭ್ರಮ ವಿವಿಧ ಅಕಾಡೆಮಿಗಳ ಸಹಯೋಗದೊಂದಿಗೆ ನಡೆಯಲಿದೆ ಎಂದರು.

ಈ ಸಂದರ್ಭ ಸ್ಥಾಪಕರು ಹಾಗೂ ಪ್ರಧಾನ ಸಂಚಾಲಕರಾದ ಮೋಹನದಾಸ ಕೊಟ್ಟಾರಿ ಮುನ್ನೂರು ಮಾಹಿತಿ ನೀಡಿ, 20ರಂದು ಸಂಜೆ 5 ಗಂಟೆಗೆ ನಡೆಯುವ ಸಾಂಸ್ಕೃತಿಕ ದಿಬ್ಬಣದಲ್ಲಿ ಸುಮಾರು 250 ವಿವಿಧ ಪ್ರಕಾರದ ಕಲಾತಂಡಗಳು ಭಾಗವಹಿಸಲಿವೆ ಎಂದು ಹೇಳಿದರು. ಅಮ್ಯೂಸ್ಮೆಂಟ್ ಪಾರ್ಕ್ ನಲ್ಲಿ ವಿಶೇಷ ಆಕರ್ಷಣೆಗಳಿದ್ದು, ಸಂಪೂರ್ಣ ಸುರಕ್ಷತೆಯಿಂದ ಕೂಡಿದೆ ಎಂದವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ತೇವು ತಾರಾನಾಥ ಕೊಟ್ಟಾರಿ, ಉಪಾಧ್ಯಕ್ಷೆ ಫೌಝಿಯಾ, ಗೌರವ ಸಲಹೆಗಾರರಾದ ಸರಪಾಡಿ ಅಶೋಕ ಶೆಟ್ಟಿ, ನಿರ್ದೇಶಕರಾದ ಶಿವಪ್ರಸಾದ್ ಬಂಟ್ವಾಳ, ಇಬ್ರಾಹಿಂ ಕೈಲಾರ್ ಉಪಸ್ಥಿತರಿದ್ದರು. ವಿವರಗಳಿಗೆ ಆಹ್ವಾನಪತ್ರಿಕೆ ಇಲ್ಲಿದೆ ನೋಡಿರಿ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.