ಬಂಟ್ವಾಳ

ಎರಡು ದಿನಗಳ ಎಐಸಿಸಿಟಿಯು ಪ್ರಥಮ ಕರ್ನಾಟಕ ರಾಜ್ಯ ಸಮ್ಮೇಳನ ಮುಕ್ತಾಯ

ಕೇಂದ್ರ ಸರಕಾರ ಹೊರಡಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು, ಕರ್ನಾಟಕ ಸರಕಾರವು ಕಾರ್ಮಿಕ ಕಾನೂನುಗಳಿಗೆ ತಂದಿರುವ ತಿದ್ದುಪಡಿಗಳನ್ನು ಹಿಂಪಡೆಯಬೇಕು, ಗುತ್ತಿಗೆ ಪದ್ಧತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಹಾಗೂ ಎಲ್ಲ ಕಾರ್ಮಿಕರಿಗೂ ಉತ್ತಮವಾದ ಮತ್ತು ಘನತೆಯುಕ್ತ ಕೆಲಸದ ವಾತಾವರನ ಕಲ್ಪಿಸಬೇಕು ಸಹಿತ ಹಲವು ಉದ್ದೇಶಗಳನ್ನಿಟ್ಟುಕೊಂಡು ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು) ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಮೊದಲ ರಾಜ್ಯ ಸಮ್ಮೇಳನವನ್ನು ಆಯೋಜಿಸಿತ್ತು. ಎರಡು ದಿನಗಳ ಕಾಲ ನಡೆದ ಈ ಸಮ್ಮೇಳನ ಭಾನುವಾರ ಬೆಳಗ್ಗೆ ಶ್ರಮಜೀವಿಗಳು ಅಧಿಕಾರದತ್ತ ಎಂಬ ಘೋಷವಾಕ್ಯದೊಂದಿಗೆ ಕಾರ್ಮಿಕರ ಜಾಥಾವನ್ನು ಬಿ.ಸಿ.ರೋಡಿನ ಕೈಕಂಬದಿಂದ ಸಮ್ಮೇಳನ ನಡೆಯುವ ಬಿ.ಸಿ.ರೋಡಿನ ಅಂಬೇಡ್ಕರ್ ಭವನದವರೆಗೆ ಆಯೋಜಿಸುವ ಮೂಲಕ ಚಾಲನೆ ನೀಡಲಾಯಿತು. ಎರಡು ದಿನಗಳ ಕಾಲ ಪ್ರತಿನಿಧಿ ಸಮ್ಮೇಳನ ನಡೆಯಿತು.

ಜಾಹೀರಾತು

29 ಸದಸ್ಯರ ರಾಜ್ಯ ಸಮಿತಿಯನ್ನು ಪ್ರತಿನಿಧಿಗಳು ಚುನಾಯಿಸಿದರು. ಪಿ.ಪಿ. ಅಪ್ಪಣ್ಣ ಅವರನ್ನು ಅಧ್ಯಕ್ಷರಾಗಿ ಹಾಗೂ ಮೈತ್ರೇಯಿ ಅವರನ್ನು ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಕರ್ನಾಟಕದಲ್ಲಿ ಕ್ರಾಂತಿಕಾರಿ ಕಾರ್ಮಿಕರ ಸಂಘವಾಗಿ ಬೆಳೆಸಲಾಗುವುದು ಎಂದು ಈ ಸಂದರ್ಭ ಘೋಷಿಸಲಾಯಿತು.

ಎರಡನೇ ದಿನದಂದು ಸಂಘಟನೆಯ ದಸ್ತಾವೇಜಿನ ಕುರಿತು ಸುದೀರ್ಘ ಚರ್ಚೆಯನ್ನು ನಡೆಸಿದ್ದು, ಸುಮಾರು 40 ಪ್ರತಿನಿಧಿಗಳು ತಮ್ಮ ಸಲಹೆ ಮತ್ತು ಅಭಿಪ್ರಾಯಗಳನ್ನು ಪ್ರತಿನಿಧಿ ಅಧಿವೇಶನದಲ್ಲಿ ಮುಂದಿಟ್ಟರು. ಸಂಘಟನೆಯ ದಸ್ತಾವೇಜನ್ನು ಅಧಿವೇಶನದಲ್ಲಿ ಮಂಡಿಸಿ, ಅನುಮೋದಿಸಲಾಯಿತು.“ಕ್ರಾಂತಿಕಾರಿ ಕಾರ್ಮಿಕರ ಸಂಘಟನೆಯನ್ನು ಬೆಳೆಸಲು ಕಾರ್ಮಿಕರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವುದಲ್ಲದೆ, ತಮ್ಮ ಆರ್ಥಿಕ ಕಲ್ಯಾಣಕ್ಕಲ್ಲದೆ ವಸತಿ ಹಕ್ಕು, ಮಕ್ಕಳ ಶಿಕ್ಷಣ, ಅರೋಗ್ಯ ಭದ್ರತೆ, ಘನತೆಗಾಗಿ ನಾವು ಹೋರಾಟಗಳನ್ನು ರೂಪಿಸಬೇಕು ಎಂದು ರಾಷ್ಟ್ರಾಧ್ಯಕ್ಷ ವಿ. ಶಂಕರ್ ಹೇಳಿದರು.

ಎಐಸಿಸಿಟಿಯು ಪ್ರಧಾನ ಕಾರ್ಯದರ್ಶಿ ರಾಜೀವ್ ಡಿಮ್ರಿ ಮಾತನಾಡಿ, ಕರ್ನಾಟಕದ ರಾಜಕೀಯ ಪರಿಸ್ಥಿತಿಯಲ್ಲಿ ನಾವು ಕಾರ್ಮಿಕರ ಮಧ್ಯೆ ಪರ್ಯಾಯವಾಗಿ ಬೆಳೆಯುವುದಲ್ಲದೆ, ವಿಸ್ತಾರವಾದ ಕೆಲಸಗಳನ್ನು ಪ್ರಾರಂಭಿಸಬೇಕು. ಫ್ಯಾಸಿಸಂ ವಿರುದ್ಧ ಸಂಘಟಿತರಾಗಲು ಮತ್ತು ಕಾರ್ಪೊರೇಟ್ ಪರ ಸರ್ಕಾರಗಳ ನೀತಿಗಳ ವಿರುದ್ಧ ಹೆಚ್ಚೆಚ್ಚು ಕಾರ್ಮಿಕರನ್ನು ನಾವು ಸಂಘಟಿಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಹೇಳಿದರು. ಮೊದಲ ದಿನ ಕೇಂದ್ರ ಸರ್ಕಾರ ಹೊರಡಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಲು, ಕರ್ನಾಟಕ ಸರ್ಕಾರ ಕಾರ್ಮಿಕ ಕಾನೂನುಗಳಿಗೆ ತಂದಿರುವ ತಿದ್ದುಪಡಿಗಳನ್ನು ಹಿಂಪಡೆಯಲು, ಗುತ್ತಿಗೆ ಪದ್ಧತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಲು, ಎಲ್ಲಾ ಕಾರ್ಮಿಕರಿಗೂ ಉತ್ತಮವಾದ ಮತ್ತು ಘನತೆಯುಕ್ತ ಕೆಲಸದ ವಾತಾವರಣ ಕಲ್ಪಿಸಲು ಎಐಸಿಸಿಟಿಯು ಸಜ್ಜಾಗುತ್ತಿದೆ ಎಂಬ ಘೋಷಣೆಯೊಂದಿಗೆ ಪ್ರಥಮ ರಾಜ್ಯ ಸಮ್ಮೇಳನ ಮುಕ್ತಾಯಗೊಂಡಿತು. ಮೊದಲ ದಿನ ಶ್ರಮಜೀವಿಗಳು ಅಧಿಕಾರದತ್ತ ಎಂಬ ಘೋಷವಾಕ್ಯದೊಂದಿಗೆ ಮೆರವಣಿಗೆ ನಡೆಯಿತು.  ಜಾಥಾ ಮತ್ತು ಬಹಿರಂಗ ಸಭೆಗಳಲ್ಲಿ ವಿವಿಧ ಕೇಂದ್ರ ಕಾರ್ಮಿಕ ಸಂಘಟನೆಗಳು, ರೈತ, ದಲಿತ, ಮಹಿಳಾ ಮತ್ತು ಪ್ರಗತಿಪರ ಸಂಘಟನೆಗಳ ಪ್ರತಿನಿಗಳು ಹಾಗೂ ಎಐಸಿಸಿಟಿಯು ಸದಸ್ಯರಾದ ಪೌರಕಾರ್ಮಿಕರು, ಬೀದಿ ವ್ಯಾಪಾರಿಗಳು, ಆಸ್ಪತ್ರೆ ಕಾರ್ಮಿಕರು, ಬಿಸಿ ಊಟ ಕಾರ್ಮಿಕರು, ಆಟೋ ಚಾಲಕರು, ಬೀಡಿ ಕಾರ್ಮಿಕರು, ಫ್ಯಾಕ್ಟರಿ ಕಾರ್ಮಿಕರು, ಹಾಗೂ ವಿವಿಧ ರಂಗದ ಕಾರ್ಯಕರ್ತರು ಭಾಗವಹಿಸಿದರು.

ಬಳಿಕ ಕರ್ನಾಟಕದಲ್ಲಿ ಕ್ರಾಂತಿಕಾರಿ ದುಡಿಯುವ ವರ್ಗದ ಹೋರಾಟದ ಮುಂದಿನ ದಾರಿ ಎಂಬ ವಿಷಯವನ್ನಿಟ್ಟುಕೊಂಡು ಬಹಿರಂಗ ಸಭೆ ನಡೆಯಿತು.
ಎಐಸಿಟಿಟಿಯು ರಾಷ್ಟ್ರೀಯ ಅಧ್ಯಕ್ಷರಾದ ಶಂಕರ್ ತಮಟೆ ಬಾರಿಸುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಿದರು. ರಾಷ್ಟೀಯ ಕಾರ್ಯದರ್ಶಿ ರಾಜೀವ್ ದಿಮ್ರಿ ಸಂದೇಶ ನೀಡಿದರು. ಎಐಸಿಸಿಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಪಿ.ಅಪ್ಪಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನೆಯ ರಾಜ್ಯ ಉಪಾಧ್ಯಕ್ಷ ಕೆ.ವಿ.ಭಟ್, ದ.ಕ ಜಿಲ್ಲಾ ಅಧ್ಯಕ್ಷರಾದ ರಾಮಣ್ಣ ವಿಟ್ಲ, ರಾಜ್ಯ ರೈತಸಂಘ ಕಾರ್ಯದರ್ಶಿ ರವಿಕಿರಣ್ ಪುಣಚ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭ, ರಾಜ್ಯ ಸಮಿತಿ ಪ್ರಮುಖರಾದ ಕ್ಲಿಪ್ಟನ್ ಡಿ ರೊಜಾರಿಯೋ, ನಾಗರಾಜ್ ಪೂಜಾರ್, ಮೈತ್ರೇಯಿ ಕೃಷ್ಣನ್, ಕೆ.ಇ ಮೋಹನ್, ನಾನಾ ಸಂಘಟನೆಗಳ ಪ್ರಮುಖರಾದ ನಿರ್ಮಲಾ, ವಿನಯ್ ಶ್ರೀನಿವಾಸ್, ಬಿ.ಕೆ ಸೇಸಪ್ಪ ಬೆದ್ರಕಾಡು, ರಾಜಾ ಚೆಂಡ್ತಿಮಾರ್, ಬಿ.ವಿಷ್ಣುಮೂರ್ತಿ, ಶಂಕರಮ್ಮ, ತುಳಸೀದಾಸ್ ವಿಟ್ಲ ಸಹಿತ ಪ್ರಮುಖರು ಉಪಸ್ಥಿತರಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.