ಬಂಟ್ವಾಳ: ಕೊಳ್ನಾಡು ಗ್ರಾಮದ ಮಂಚಿ ಹೈಸ್ಕೂಲಿನಲ್ಲಿ ಆಯೋಜಿಸಲುದ್ದೇಶಿಸಿರುವ ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನ ದ ನಿಮಿತ್ತ ಪೂರ್ವಭಾವಿಯಾಗಿ ಬಂಟ್ವಾಳ ತಾಲೂಕು ಮಟ್ಟದ ಮುಕ್ತ ಕಥಾ ಸ್ಪರ್ಧೆ ಮತ್ತು ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸ್ಮರಣ ಸಂಚಿಕೆ ಸಮಿತಿ ಮತ್ತು ಆರ್ಥಿಕ ಸಮಿತಿಯ ಸಭೆಯಲ್ಲಿ ಬಂಟ್ವಾಳ ತಾಲೂಕು ಮಟ್ಟದ ಮುಕ್ತ ಕಥಾ ಸ್ಪರ್ಧೆ ಮತ್ತು ಕವನ ಸ್ಪರ್ಧೆಯ ಮಾಹಿತಿ ಪತ್ರವನ್ನು ಅನಾವರಣಗೊಳಿಸಿ ಮಾತನಾಡಿದ, ನಿವೃತ್ತ ಶಿಕ್ಷಕಿ ಹಾಗೂ ಬರಹಗಾರರಾದ ಅನುಸೂಯ ರಾವ್, “ಬಂಟ್ವಾಳ ತಾಲೂಕಿನ ಅನುಭವಿ ಹಾಗೂ ಯುವ ಬರಹಗಾರರಿಗೆ ಇದೊಂದು ಉತ್ತಮ ವೇದಿಕೆ ಆಗಲಿದೆ. ಆಯೋಜನೆಯಾಗುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮೂಲಕ ಇನ್ನಷ್ಟು ಹೊಸ ಪ್ರತಿಭೆಗಳು ಮೂಡಿಬರಲು ಸಾಧ್ಯವಿದೆ” ಎಂದರು.
“23ನೇ ಕನ್ನಡ ಸಾಹಿತ್ಯ ಸಮ್ಮೇಳನ ದ ನಿಮಿತ್ತ ಪೂರ್ವಭಾವಿಯಾಗಿ ಆಯೋಜನೆಯಾಗಿರುವ ಈ ಸ್ಪರ್ಧೆಯು ಸ್ಮರಣ ಸಂಚಿಕೆ ಸಮಿತಿಯ ಮೊದಲ ಹೆಜ್ಜೆಯಾಗಿದೆ. ಈ ರೀತಿಯ ವೇಗ ಹಾಗೂ ಸೃಜನಾತ್ಮಕ ಪ್ರಯತ್ನಗಳು ಎಲ್ಲ ಸಮಿತಿಗಳಿಗೆ ಪ್ರೇರಣೆ ಹಾಗೂ ಸಮ್ಮೇಳನದ ಯಶಸ್ಸಿಗೆ ಕಾರಣವಾಗುತ್ತದೆ” ಎಂದು ಸಮ್ಮೇಳನ ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕರು ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಮ್ ಪ್ರಸಾದ್ ರೈ ತಿರುವಾಜೆ ತಿಳಿಸಿದರು.
ಆರ್ಥಿಕ ಸಮಿತಿಯ ಮುಖ್ಯ ಸಂಚಾಲಕ ಪ್ರಗತಿಪರ ಕೃಷಿಕರಾದ ನಿಶ್ಚಲ್ ಶೆಟ್ಟಿ, ಆರ್ಥಿಕ ಸಮಿತಿಯ ಸಹ ಸಂಚಾಲಕರಾದ ಉದ್ಯಮಿ ಹಾಗೂ ಶಾಲಾ ಹಿರಿಯ ವಿದ್ಯಾರ್ಥಿ ಚಂದ್ರಹಾಸ ರೈ ಬಾಲಾಜಿಬೈಲು ಶುಭಾಶಯದ ಮಾತುಗಳನ್ನಾಡಿದರು.
ಸಭೆಯಲ್ಲಿ ಉಪಾಧ್ಯಕ್ಷರಾದ ಗಣೇಶ್ ಪ್ರಭು, ಕೋಶಾಧಿಕಾರಿಯಾದ ಸುಲೈಮಾನ್ ಸುರಿಬೈಲು, ಮ್ಯಾಕ್ಸಿಮ್ ಫರ್ನಾಂಡಿಸ್, ವಿಜಯಾ ಬಿ ಶೆಟ್ಟಿ, ರಶ್ಮಿತಾ ಸುರೇಶ್, ವಿಜಯಲಕ್ಷ್ಮಿ ಕಟೀಲು, ಮಹಮ್ಮದ್ ಮನ್ಸೂರ್ ಕುಕ್ಕಾಜೆ ಉಪಸ್ಥಿತರಿದ್ದರು. ಸ್ಮರಣ ಸಂಚಿಕೆ ಸಮಿತಿಯ ಸಂಚಾಲಕರಾದ ಹಮೀದ್ ಡಿ ಸ್ವಾಗತಿಸಿದರು. ಜಯ ಪ್ರಕಾಶ್ ರೈ ಮೇರಾವು ವಂದಿಸಿದರು. ಪ್ರಧಾನ ಕಾರ್ಯದರ್ಶಿ ಎಮ್ ಡಿ ಮಂಚಿ ಕಾರ್ಯಕ್ರಮ ನಿರ್ವಹಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…