ಪ್ರಮುಖ ಸುದ್ದಿಗಳು

ಬಂಟ್ವಾಳ: ಕುಡಿಯುವ ನೀರು ಮಿತಬಳಕೆಗೆ ಸೂಚನೆ, ದುರ್ಬಳಕೆಯಾದರೆ ಕಠಿಣ ಕ್ರಮ

ಜಾಹೀರಾತು

ಕುಡಿಯುವ ನೀರಿನ ದುರುಪಯೋಗ ಮಾಡುವುದು ಕಂಡರೆ ನಿರ್ದಾಕ್ಷಿಣ್ಯವಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

ಈ ಕುರಿತು ಅವರು ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ. ಬಂಟ್ವಾಳ ಪುರಸಭೆಯ ಕುಡಿಯುವ ನೀರಿಗಾಗಿ ನೇತ್ರಾವತಿ ನದಿಯನ್ನು ಅವಲಂಭಿಸಿದ್ದು, ಪ್ರಸ್ತುತ ಬೇಸಿಗೆ ಕಾಲದಲ್ಲಿ ನೇತ್ರಾವಲ್ಲಿ ನದಿಯಲ್ಲಿ ನೀರಿನ ಒಳ ಹರಿವು ಕಡಿಮೆ ಆಗಿರುವುದರಿಂದ ಸಾರ್ವಜನಿಕರಿಗೆ ನೀರಿನ ಪೂರೈಕೆ ಮಾಡುತ್ತಿದ್ದರೂ, ಮುಂದಕ್ಕೆ ಮಳೆ ಬಾರದೇ ಇದ್ದಲ್ಲಿ ಸೂಕ್ತ ಸಮಯಕ್ಕೆ ನೀರಿನ ಪೂರೈಕೆಗೆ ಅನಾನುಕೂಲವಾಗುವ ಸಂಭವವಿರುತ್ತದೆ. ಸಾರ್ವಜನಿಕರು ಈ ನಿಟ್ಟಿನಲ್ಲಿ ಕುಡಿಯುವ ನೀರನ್ನು ಕೃಷಿ, ಕೈಗಾರಿಕೆ, ವಾಣಿಜ್ಯ ಉದ್ದೇಶಕ್ಕೆ ಬಳಸದೆ ಅವಶ್ಯಕತೆಗೆ ತಕ್ಕಂತೆ ಮಿತವಾಗಿ ಬಳಸಲು ಸೂಚಿಸಲಾಗಿದೆ. ನೀರಿನ ದುರುಪಯೋಗ ಕಂಡು ಬಂದಲ್ಲಿ ನಿರ್ದಾಕ್ಷಿಣ್ಯ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭಾ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಪಮಾನ ಏರಿಕೆ ಪರಿಣಾಮ ಬಿಸಿಲ ಝಳಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ಎನ್ನಲಾಗಿರುವ ನೇತ್ರಾವತಿ ನದಿಯಲ್ಲಿ ಒಳಹರಿವು ಹೆಚ್ಚುಕಮ್ಮಿ ನಿಂತುಹೋಗಿದೆ.

ಬಂಟ್ವಾಳ ಪುರಸಭಾ ವ್ಯಾಪ್ತಿಗೆ ಜಕ್ರಿಬೆಟ್ಟು ಜಾಕ್ವೆಲ್ ಮೂಲಕ ಪ್ರತಿದಿನ 5.6 ಎಂ.ಎಲ್.ಡಿ. ನೀರನ್ನು ಎತ್ತಲಾಗುತ್ತಿದೆ. ಸದ್ಯಕ್ಕೆ ಜಕ್ರಿಬೆಟ್ಟುವಿನಲ್ಲಿ ನೀರಿನ ಶೇಖರಣೆ ಇದೆ. ಕಳೆದ ವರ್ಷ ಹೊಂಡಗಳಲ್ಲಿ ತುಂಬಿದ್ದ ನೀರನ್ನು ಜಾಕ್ ವೆಲ್ ಗೆ ಹರಿಸಲಾಗಿತ್ತು. ಬಂಟ್ವಾಳದ ಐದು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಪೈಕಿ, ನರಿಕೊಂಬು, ಕರೋಪಾಡಿ, ಮಾಣಿ ಮತ್ತು ಸರಪಾಡಿ ಯೋಜನೆಗಳಿಗೆ ನೇತ್ರಾವತಿ ನದಿಯೇ ಬಂಡವಾಳ. ಕಳೆದ ವರ್ಷ ನದಿಯಲ್ಲಿ ನೀರಿನ ಪ್ರಮಾಣ ಕುಸಿದ ಪರಿಣಾಮ, ತೊಂದರೆ ಆಗಿತ್ತು. ಈ ವರ್ಷ ಬಹುಗ್ರಾಮ ವ್ಯಾಪ್ತಿ ಹೆಚ್ಚಿನ ಕಡೆಗಳಲ್ಲಿ ಎರಡು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ.

ಶಂಭೂರು ಡ್ಯಾಮ್ ನಿಂದ ನೀರು ಬಿಟ್ಟಿರುವ ಪರಿಣಾಮ, ಬಂಟ್ವಾಳ ತಾಲೂಕಿನ ಕಡೇಶಿವಾಲಯ, ಬರಿಮಾರು, ಅಜಿಲಮೊಗರು, ಸರಪಾಡಿ ಭಾಗಗಳಲ್ಲಿ ನದಿ ನೀರು ಖಾಲಿಯಾಗಿ ಮರಳು ಕಾಣಿಸುತ್ತಿದೆ. ಮಾಣಿ ಮತ್ತು ಸರಪಾಡಿ ಬಹುಗ್ರಾಮ ಕುಡಿಯುವ ನೀರಿನ ಜಾಕ್ ವೆಲ್ ಗಳಿಗೆ ನೀರು ಲಿಫ್ಟ್ ಮಾಡಲು ಕಷ್ಟಸಾಧ್ಯವಾಗುವ ಆತಂಕವೂ ಎದುರಾಗಿದೆ. ಜಕ್ರಿಬೆಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆ ಡ್ಯಾಂ ನಿರ್ಮಾಣಗೊಳ್ಳುತ್ತಿದ್ದು, ಮುಂದಿನವರ್ಷ ನೀರು ಸಂಗ್ರಹಿಸಬಹುದಷ್ಟೇ. ಅದುವರೆಗೆ ಶಂಭೂರಿನಿಂದ ತುಂಬೆವರೆಗೆ ಇರುವ ಸಂಗ್ರಹಿತ ನೀರು, ಸೂರ್ಯನ ಶಾಖ ಎಷ್ಟರವರೆಗೆ ನೀರು ಸಂಗ್ರಹವಾಗುತ್ತದೆ ಎಂಬ ಆತಂಕವೀಗ ಬಂಟ್ವಾಳದ ಜನತೆಗೆ ಎದುರಾಗಿದೆ.

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಎಲ್ಲರಿಗೂ, ಎಲ್ಲೆಡೆಯೂ ಆರೋಗ್ಯ, ಜಾಗೃತಿಗೆ ಬೀದಿನಾಟಕ

ಬಂಟ್ವಾಳದ ಹಲವೆಡೆ ಸಂಸಾರ ಜೋಡುಮಾರ್ಗ ತಂಡದಿಂದ ಕಾರ್ಯಕ್ರಮ, ಸಾರ್ವಜನಿಕರಿಗೆ ಮಾಹಿತಿ (more…)

11 hours ago