ಜಿಲ್ಲಾ ಸುದ್ದಿ

ಬಿಜೆಪಿ ಕಾರ್ಯಕರ್ತನಿಗೆ ದೇಶದ ಹಿತಾಸಕ್ತಿಯೇ ಮುಖ್ಯ: ಕ್ಯಾ.ಬ್ರಿಜೇಶ್ ಚೌಟ

ಜಾಹೀರಾತು

ಬಿಜೆಪಿ ಕಾರ್ಯಕರ್ತ ಮತ್ತು ಸೈನಿಕನ ಮಾನಸಿಕತೆ ಒಂದೇ ರೀತಿ ಇರುತ್ತದೆ. ಸೇನೆಯಲ್ಲಿದ್ದವರಿಗೆ ದೇಶವೇ ಮುಖ್ಯ. ಕರೆ ಬಂದ ಕೂಡಲೇ ಓಡಬೇಕು. ಬಿಜೆಪಿ ಕಾರ್ಯಕರ್ತರಿಗೂ ದೇಶದ ಹಿತಾಸಕ್ತಿಯೇ ಮುಖ್ಯವಾಗಿರುತ್ತದೆ.  ದೇಶದಲ್ಲಿ 18ರಿಂದ 40 ವರ್ಷದ ಒಳಗಿನ ಯುವಜನರು 65 ಶೇಕಡಾದಷ್ಟಿದ್ದು ಅವರನ್ನು ಹೆಚ್ಚೆಚ್ಚು ಪ್ರಜಾಪ್ರಭುತ್ವದಲ್ಲಿ ತೊಡಗಿಸಿದರೆ, ಪ್ರಜಾತಂತ್ರ ಉತ್ತಮಗೊಳ್ಳುತ್ತದೆ ಎಂದು ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಹೇಳಿದ್ದಾರೆ.

ಸುಳ್ಯದ ಕೆವಿಜಿ ಕ್ಯಾಂಪಸ್ ನಲ್ಲಿ ಸೇರಿದ ಬೋಧಕ ಮತ್ತು ಬೋಧಕೇತರ ಸಿಬಂದಿಯನ್ನು ಉದ್ದೇಶಿಸಿ ಮಾತನಾಡಿದರು. ಕೆವಿಜಿ ಸಂಸ್ಥೆಯ ಪ್ರವರ್ತಕರಾದ ಕೆವಿ ಚಿದಾನಂದ್ ದಂಪತಿ, ಕ್ಟಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಶಾಲು ಹೊದಿಸಿ ಬರಮಾಡಿಕೊಂಡರು. ದೇಶದ ಬೇರೆ ಬೇರೆ ಕಡೆ ಓಡಾಡಿದ್ದೇನೆ. ಎಲ್ಲ ಕಡೆಯ ಸಂಸ್ಕೃತಿ, ಸಂಪನ್ಮೂಲ ನೋಡಿದ್ದೇನೆ. ಆದರೆ ನಮ್ಮಲ್ಲಿ ದೇಶದ ಎಲ್ಲ ಕಡೆ ಇರುವ ಸಂಸ್ಕೃತಿ ಮತ್ತು ಸಂಪನ್ಮೂಲ ಇದೆ. ಹಿಮ ಬೀಳುವುದಿಲ್ಲ ಎನ್ನುವುದು ಬಿಟ್ಟರೆ ಬೇರೆಲ್ಲ ಇದೆ. ನಮ್ಮ ಜನರಲ್ಲಿ ಬುದ್ಧಿವಂತಿಕೆ, ಸಾಮರ್ಥ್ಯ ಇದೆ. ಯುವಜನರ ಆಕಾಂಕ್ಷೆ ಏನಿದೆ ಎನ್ನುವ ಅರಿವು ಹೊಂದಿದ್ದೇನೆ. ಯುವಜನರ ಆಕಾಂಕ್ಷೆ ತಿಳಿದುಕೊಂಡು ದೇಶದ ಅಭಿವೃದ್ಧಿಯಲ್ಲಿ ಜೋಡಿಸಿಕೊಳ್ಳಲು ತಯಾರಿದ್ದೇನೆ. ಸಂಸದನಾದ ಕೂಡಲೇ ಯುವ ಮನಸ್ಸುಗಳು ಯಾವ ರೀತಿ ಯೋಚನೆ ಮಾಡುತ್ತಾರೆ, ಅಭಿವೃದ್ಧಿಯ ದಿಸೆಯಲ್ಲಿ ಆಕಾಂಕ್ಷೆಗಳು ಏನಿವೆ ಎಂದು ತಿಳಿಯಲು ನಿಮ್ಮ ಜೊತೆ ಸಂವಾದ ಮಾಡುತ್ತೇನೆ. ಮೂರನೇ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನಿ ಆಗುತ್ತಿದ್ದಾರೆ. ದೇಶದ ಭವಿಷ್ಯದ ದೃಷ್ಟಿಯಿಂದ ಮೋದಿ ಮೂರನೇ ಟರ್ಮ್ ಅತಿ ಮುಖ್ಯವಾಗಿದೆ. ಅತಿ ಹೆಚ್ಚು ಮತದಾನದ ಮೂಲಕ ಮೋದಿಯವರನ್ನು ನಾವು ಗೆಲ್ಲಿಸಬೇಕಿದೆ. ಸಾಮಾನ್ಯ ಬಡ ಮಧ್ಯಮ ವರ್ಗದಿಂದ ಬಂದಿದ್ದೇನೆ. ಹೆತ್ತವರು ಉತ್ತಮ ಶಿಕ್ಷಣ ಕೊಟ್ಟಿದ್ದೇ ನನ್ನ ಶ್ರೀಮಂತಿಕೆ. ಸೇನೆಯಲ್ಲಿ ಕೆಲಸ ಮಾಡಿದ್ದೇನೆ ಎಂಬ ನೆಲೆಯಲ್ಲಿ ಬಿಜೆಪಿಯಿಂದ ಸಾರ್ವಜನಿಕ ಸೇವೆಗೆ ಅವಕಾಶ ಕೊಟ್ಟಿದ್ದಾರೆ. ಬಿಜೆಪಿ, ಮೋದಿಯವರು ಸಾಮಾನ್ಯ ಸೈನಿಕ ಹಿನ್ನೆಲೆಯವರಿಗೆ ಈ ಅವಕಾಶ ಕೊಟ್ಟು ರಾಜಕೀಯದಲ್ಲಿ ಮೇಲ್ಪಂಕ್ತಿ ಹಾಕಿದ್ದಾರೆ. ಕಾಂಗ್ರೆಸಿನವರು ರಾಜ್ಯದಲ್ಲಿ 15 ಮಂದಿಗೆ ಸಿರಿವಂತರಿಗೆ, ರಾಜಕೀಯ ಹಿನ್ನೆಲೆಯಿದ್ದವರಿಗೆ ಟಿಕೆಟ್ ಕೊಟ್ಟಿದ್ದಾರೆ. ಸಾಮಾನ್ಯ ವ್ಯಕ್ತಿಯೊಬ್ಬನ ಗೆಲುವು ಬಿಜೆಪಿ ಮೂಲಕ ರಾಜಕೀಯದಲ್ಲಿ ಮೇಲ್ಪಂಕ್ತಿ ಆಗಬೇಕಾಗಿದೆ. ಆಮೂಲಕ ಆಡಳಿತದಲ್ಲಿ ಮೌಲ್ಯಗಳು ಬರುತ್ತವೆ ಅನ್ನುವುದು ನನ್ನ ಅನಿಸಿಕೆ ಎಂದು ಹೇಳಿದರು.

ಸಭೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ವಿನಯ ಕುಮಾರ್ ಕಂದಡ್ಕ, ಪ್ರದೀಪ್ ರೈ ಮನವಳಿಕೆ, ವಿನಯ್ ಮುಳುಗಾಡು, ರವೀಂದ್ರ ಶೆಟ್ಟಿ ಉಳಿದೊಟ್ಟು, ಅಪ್ಪಯ್ಯ ಮಣಿಯಾಣಿ, ಹರೀಶ್ ಕಂಜಿಪಿಲಿ, ಎಸ್.ಎನ್.ಮನ್ಮಥ ಉಪಸ್ಥಿತರಿದ್ದರು.

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.