ಪ್ರಮುಖ ಸುದ್ದಿಗಳು

ಚುನಾವಣೆ 2024: ಮಾದರಿ ನೀತಿ ಸಂಹಿತೆ ಪಾಲನೆಗೆ ಕಟ್ಟುನಿಟ್ಟಿನ ಸೂಚನೆ

 ಮುಕ್ತ, ಪಾರದರ್ಶಕ, ನಿಷ್ಪಕ್ಷಪಾತ ಹಾಗೂ ಶಾಂತಿಯುತ ಚುನಾವಣೆ ನಡೆಸಲು ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಚುನಾವಣಾ ಆಯೋಗವು ಪ್ರಕಟಿಸಿರುವ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು 17-ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾ ಸಾಮಾನ್ಯ ವೀಕ್ಷಕರಾದ ಆಕಾಂಕ್ಷ ರಂಜನ್ ಅವರು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಅಭ್ಯರ್ಥಿಗಳಿಗೆ ಸಲಹೆ ನೀಡಿದರು.

ಸೋಮವಾರ ಮಂಗಳೂರಿನ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಚುನಾವಣಾ ಖರ್ಚು ವೆಚ್ಚಗಳಿಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಅಭ್ಯರ್ಥಿಗಳೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಸಲಹೆ ಸೂಚನೆಗಳನ್ನು ನೀಡಿದರು.

ಈ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಪಾಲಿಸಬೇಕಾದ ಕರ್ತವ್ಯಗಳು, ವಿವಿಧ ಕಾರ್ಯಕ್ರಮಗಳಿಗೆ ಪಡೆಯಬೇಕಾದ ಪೂರ್ವಾನುಮತಿಗಳ ಬಗ್ಗೆ ತಿಳಿಸಿದ ಅವರು, ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಅವಕಾಶವಿರುವುದಿಲ್ಲ, ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದಲ್ಲೀ 1950ಗೆ ಕರೆ ಮಾಡಿ ತಿಳಿಸುವಂತೆ ಹಾಗೂ ಅಹವಾಲುಗಳಿದ್ದರೆ ತಮ್ಮ ಮೊಬೈಲ್ ನಂಬರ್ 9482698817 ಗೆ ಕರೆ ಮಾಡುವಂತೆ ತಿಳಿಸಿದ ಅವರು, ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಚುನಾವಣಾ ಸಂಬಂಧಿತ ಕೆಲಸ ಕಾರ್ಯಗಳಿಗೆ ಸುವಿಧಾ ಆ್ಯಪ್ ಮೂಲಕ ಅನುಮತಿ ಪಡೆಯಬಹುದೆಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು, ಲೋಕಸಭಾ ಅಭ್ಯರ್ಥಿಗಳ ಚುನಾವಣೆಯ ಖರ್ಚು ವೆಚ್ಚಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಪ್ರಕಟಿಸಿರುವ ಪುಸ್ತಕವನ್ನು ಈಗಾಗಲೇ ನೀಡಲಾಗಿದೆ, ಅದರನ್ವಯ ಕ್ರಮವಹಿಸಬೇಕು ಎಂದರು.

ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಲು ಸಂಬಂಧಿಸಿದ ಸಂಬಂಧಿತ ಕಂಪೆಂಡಿಯಂ ಅನ್ನು ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳಿಗೆ ನೀಡಲಾಗಿದೆ, ಅಭ್ಯರ್ಥಿ ಅಥವಾ ಪಕ್ಷದವರು ಯಾವುದೇ ಕಾರಣಕ್ಕೂ ಅದನ್ನು ಉಲ್ಲಂಘಿಸಬಾರದು, ಉಲ್ಲಂಘನೆಯಾದಲ್ಲಿ ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಕ್ರಮಕೈಗೊಳ್ಳಲಾಗುವುದು, ಚುನಾವಣಾ ಕಾರ್ಯಕ್ಕೆ ಬಳಸಲಾಗುವ ವಸ್ತುಗಳ ಬಗ್ಗೆ ಕಡ್ಡಾಯವಾಗಿ ಅನುಮತಿಯನ್ನು ಪಡೆಯಬೇಕು ಹಾಗೂ ಅನುಮತಿಯೊಂದಿಗೆ ನೀಡಲಾಗುವ ಷರತ್ತುಗಳನ್ನು ಪಾಲಿಸಬೇಕು ಎಂದು ಹೇಳಿದರು.

ಚುನಾವಣಾ ಸಂಬಂಧಿತ ಅನುಮತಿಗಳನ್ನು ಆಯಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಸಹಾಯಕ ಚುನಾವಣಾಧಿಕಾರಿಯವರ ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಏಕಗವಾಕ್ಷಿ ಪದ್ದತಿ ಕೇಂದ್ರದಲ್ಲಿ ಪಡೆಯಬಹುದು, ಮುಖ್ಯವಾಗಿ ಮತದಾನಕ್ಕೆ ಮುನ್ನ 72 ಹಾಗೂ 48 ಗಂಟೆಗಳ ಅವಧಿಯಲ್ಲಿ ಅನ್ವಯವಾಗುವ ನಿರ್ಬಂಧಗಳನ್ನು ಪಾಲಿಸಲೇಬೇಕು, ಅಭ್ಯರ್ಥಿಗಳ ಸ್ವಂತ ವಾಹನ ಇದ್ದಾಗ್ಯೂ ಕೂಡ ಅದನ್ನು ಚುನಾವಣೆಯಲ್ಲಿ ಬಳಸಲು ಅನುಮತಿ ಪಡೆಯಲೇಬೇಕು. ಪಡೆಯದದಿದ್ದರೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂದವರು ಎಚ್ಚರಿಕೆ ನೀಡಿದರು.

ಇವಿಎಂ ಯಂತ್ರಗಳನ್ನು ಈಗಾಗಲೇ ಒಂದು ಬಾರಿ ರ್ಯಾಂಡಮೈಜೇಷನ್ ಮಾಡಲಾಗಿದೆ, ಮತದಾನದ ನಂತರ ಸುರತ್ಕಲ್ ನ ಎನ್.ಐ.ಟಿ.ಕೆಯ ಸ್ಟ್ರಾಂಗ್ ರೂಮ್‍ನಲ್ಲಿರಿಸಲಾಗುವುದು ಎಂದರು.

85ಕ್ಕೂ ಹೆಚ್ಚು ವಯಸ್ಸಾದ ಹಾಗೂ ವಿಕಲಚೇತನ ಮತದಾರರ ಹೋಮ್ ವೊಟಿಂಗ್‍ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು 8,010 ಮಂದಿ ನೋಂದಾಯಿಸಿಕೊಂಡಿದ್ದಾರೆ, ಈ ತಿಂಗಳ 13 ರಿಂದ 18 ರವರೆಗೆ ಅವರ ಮನೆಗಳಿಗೆ ಹೋಗಿ ಮತದಾನ ಮಾಡಿಸಿಕೊಳ್ಳಲಾಗುವುದು, ಅದಕ್ಕಾಗಿ ಯಾವ ಮತಗಟ್ಟೆ ಅಧಿಕಾರಿಗಳು ಯಾರ ಮನೆಗೆ ಹೋಗುತ್ತಾರೆ ಎಂದು ಮೊದಲೇ ತಿಳಿಸಲಾಗುವುದು. ಹೋಮ್ ವೊಟಿಂಗ್ ದಿನ ಮೈಕ್ರೋ ಅಬ್ಸರ್‍ವರ್, ಪೋಲಿಂಗ್ ಪಾರ್ಟಿ ಹಾಗೂ ಚುನಾವಣಾ ಸಿಬ್ಬಂದಿ ಅವರ ಮನೆಗೆ ಹೋಗಿ ಗುಪ್ತವಾಗಿ ಮತದಾನ ಮಾಡಿಸಿಕೊಂಡು ಬರಲಿದ್ದಾರೆ, ಹೋಮ್ ವೋಟಿಂಗ್ ಬಗ್ಗೆ ಈಗಾಗಲೇ ಮಾರ್ಗ ಸಿದ್ಧಗೊಂಡಿದೆ ಎಂದು ತಿಳಿಸಿದರು.
ಮತದಾರರ ಮಾಹಿತಿ ಪಟ್ಟಿಯನ್ನು ಮುದ್ರಿಸಿ ಬಿಎಲ್‍ಓಗಳ ಮೂಲಕ ಮನೆಮನೆಗೆ ತಲುಪಿಸಲಾಗುವುದು, ಜಿಲ್ಲೆಯಲ್ಲಿ 171 ಕ್ರಿಟಿಕಲ್ ಮತಗಟ್ಟೆಗಳನ್ನು ಗುರುತಿಸಲಾಗಿದೆ, ಅಲ್ಲಿ ಶೇ 100 ರಷ್ಟು ವೆಬ್ ಕಾಸ್ಟಿಂಗ್ ವ್ಯವಸ್ಥೆ ಅಳವಡಿಸಲಾಗುವುದು ಎಂದರು.
ಚುನಾವಣಾ ವೆಚ್ಚ ವೀಕ್ಷಕ ಮೆರುಗು ಸುರೇಶ್, ಐಎಎಸ್ ಪ್ರೊಬೇಷನರಿ ಮುಕೇಶ್ ಜೈನ್,
ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಚುನಾವಣಾ ವೆಚ್ಚ ತಂಡದ ನೋಡಲ್ ಅಧಿಕಾರಿ ಮೀರಾ ಪಂಡಿತ್, ಏಕಗವಾಕ್ಷಿ ಪದ್ದತಿ ಕೇಂದ್ರದ ನೋಡಲ್ ಅಧಿಕಾರಿ ಗೋಕುಲ್ ದಾಸ್ ನಾಯಕ್,
ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಅಭ್ಯರ್ಥಿಗಳು ಉಪಸ್ಥಿತರಿದ್ದರು

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ