ಬಂಟ್ವಾಳ

ಲೊರೆಟ್ಟೊ ಶಿಕ್ಷಣ ಸಂಸ್ಥೆಗಳ ನೂತನ ಕಟ್ಟಡ ಉದ್ಘಾಟನೆ

ಲೊರೆಟ್ಟೊ ಮಾತಾ ಚರ್ಚ್ ಮತ್ತು ಲೊರೆಟ್ಟೊ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಚರ್ಚ್ ಆವರಣದಲ್ಲಿರುವ ಶಿಕ್ಷಣ ಸಂಸ್ಥೆಗಳ ವಠಾರದಲ್ಲಿ ನಡೆಯಿತು.

ಜಾಹೀರಾತು

ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಎಮಿರಿಟಸ್ ಅತಿವಂದನೀಯ ರೆವರೆಂಡ್ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಉದ್ಘಾಟಿಸಿ ಮಾತನಾಡಿ, ಶಾಲೆಯಲ್ಲಿ ಕಟ್ಟಡವಷ್ಟೇ ಅಲ್ಲ, ವಿದ್ಯಾರ್ಥಿಗಳೂ ಮುಖ್ಯವಾಗಿದ್ದಾರೆ. ಹಾಗೆಯೇ ವಿದ್ಯಾರ್ಥಿಗಳ ಬೆಳವಣಿಗೆಯೂ ಮುಖ್ಯವಾಗಿದ್ದು, ಶಾಲೆಯನ್ನು ನಿರ್ಮಿಸಲು ಹಲವಾರು ಕೊಡುಗೈ ದಾನಿಗಳು ನೆರವಾಗುತ್ತಾರೆ. ವಿದ್ಯಾರ್ಥಿಗಳೂ ಉತ್ತಮ ಅಂಕ ಗಳಿಸಿ ಜೀವನದಲ್ಲಿ ಪ್ರಗತಿ ಸಾಧಿಸಿದರೆ ಅದು ಸಾರ್ಥಕಗೊಳ್ಳುತ್ತದೆ. ನಾವು ಕನಸು ಕಾಣಬೇಕು, ಅದು ನನಸಾಗುವವರೆಗೆ ಚಿಂತಿಸಬೇಕು. ಜೀವನದಲ್ಲಿ ಮುಖ್ಯ ಸ್ಥಾನಮಾನ ಗಳಿಸುವ ಕನಸನ್ನು ವಿದ್ಯಾರ್ಥಿಗಳು ಹೊಂದಿರಬೇಕು. ಪ್ರತಿಯೊಬ್ಬರು ಎಷ್ಟರಮಟ್ಟಿಗೆ ಪ್ರಯತ್ನಪಡುತ್ತಾರೋ ಅದರ ಪರವಾಗಿ ಅಂಕ ಲಭಿಸುತ್ತದೆ. ಸಾಧಕರಾಗಿ ಜೀವಿಸಿ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ಕೆಥೊಲಿಕ್ ಬೋರ್ಡ್ ಆಫ್ ಎಜುಕೇಶನ್ ಕಾರ್ಯದರ್ಶಿ ವಂದನೀಯ ಫಾ.ಆಂಟೊನಿ ಎಂ.ಶೇರಾ ಮಾತನಾಡಿ, ಹೆತ್ತವರು ಹಾಗೂ ಊರ ವಿದ್ಯಾಭಿಮಾನಿಗಳು ಶಾಲೆ ಅಭಿವೃದ್ಧಿಪಥದತ್ತ ಸಾಗುತ್ತಿದೆ ಎಂದರು. ಬಂಟ್ವಾಳ ವಲಯದ ವಿಕಾರ್ ಜರಲ್, ಮೊಡಂಕಾಪು ಚರ್ಚ್ ಧರ್ಮಗುರು ಅತಿವಂದನೀಯ ಫಾದರ್ ವಲೇರಿಯನ್ ಡಿಸೋಜ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ಮೂಲಕ ಕಟ್ಟಡ ಜ್ಞಾನದಿಂದ ಕಂಗೊಳಿಸುತ್ತಿದೆ ಎಂದರು. ಪಾಲಡ್ಕ್ ಚರ್ಚ್ ಧರ್ಮಗುರು ರೆ.ಫಾ. ಎಲಿಯಾಸ್ ಡಿಸೋಜಾ ಶುಭ ಹಾರೈಸಿದರು. ಈ ಸಂದರ್ಭ ಶಾಲಾ ವೆಬ್ ಸೈಟ್ ಬಿಡುಗಡೆಗೊಳಿಸಲಾಯಿತು.

ಧರ್ಮಗುರು ಹಾಗೂ ಲೊರೆಟ್ಟೊ ಶಿಕ್ಷಣ ಸಂಸ್ಥೆ ಸಂಚಾಲಕ ರೆ.ಫಾ. ಫ್ರಾನ್ಸಿಸ್ ಕ್ರಾಸ್ತಾ, ಮುಖ್ಯೋಪಾಧ್ಯಾಯ ರೆ.ಫಾ.ಜೇಸನ್ ಮೊನಿಸ್, ಪಾಲನಾ ಸಮಿತಿ ಉಪಾಧ್ಯಕ್ಷ ಸಿಪ್ರಿಯನ್ ಡಿಸೋಜ, ಕನ್ನಡ ಮಾಧ್ಯಮ ಶಾಲೆ ಮುಖ್ಯೋಪಾಧ್ಯಾಯಿನಿ ಭಗಿನಿ ಇಡೋಲಿನ್ ರೋಡ್ರಿಗಸ್, ಲೊರೆಟ್ಟೊ ಧರ್ಮಕ್ಷೇತ್ರದಲ್ಲಿ ಧರ್ಮಗುರುಗಳಾಗಿದ್ದ ರೆ.ಫಾ. ಓಸ್ವಲ್ಡ್ ಲಸ್ರಾದೋ, ಪಾಲನಾ ಮಂಡಳಿ ಕಾರ್ಯದರ್ಶಿ ಶೈಲಾ ಬಾರ್ಬೋಝಾ, ಕಮೀಷನ್ಸ್ ಕೋಅರ್ಡಿನೇಟರ್ ಪ್ರಕಾಶ್ ವಾಝ್ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು. ಅತಿವಂದನೀಯ ಲಿಯೋ ಲಸ್ರಾದೊ ಉಪಸ್ಥಿತರಿದ್ದರು. ಇದಕ್ಕೂ ಮುಂಚೆ ಬಲಿಪೂಜೆಯನ್ನು ಧರ್ಮಾಧ್ಯಕ್ಷರು, ಇತರ ಧರ್ಮಗುರುಗಳೊಂದಿಗೆ ಅರ್ಪಿಸಿದರು. ಬಹುಮಾನಿತರ, ಸನ್ಮಾನಿತರ ಪಟ್ಟಿಯನ್ನು ಆಲ್ವಿನ್ ಪಿಂಟೊ, ರೇಷ್ಮಾ ಮಿನೇಜಸ್, ಮರಿಯಾ ನೊರೊನ್ಹಾ ಮತ್ತಿತರರು ವಾಚಿಸಿದರು. ಶಿಕ್ಷಕಿಯರಾದ ಮೇರಿ ಪಿಂಟೊ ಮತ್ತು ಅನಿತಾ ಪಾಯ್ಸ್ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಸಂಚಾಲಕ ರೆ.ಫಾ.ಫ್ರಾನ್ಸಿಸ್ ಕ್ರಾಸ್ತಾ ಸ್ವಾಗತಿಸಿದರು. ಪಾಲನಾ ಸಮಿತಿ ಉಪಾಧ್ಯಕ್ಷ ಸಿಪ್ರಿಯನ್ ಡಿಸೋಜ ವಂದಿಸಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.