ಜಿಲ್ಲಾ ಸುದ್ದಿ

ಕೊರೊನಾ ಆತಂಕ: ಮುನ್ನೆಚ್ಚರಿಕೆ ಕುರಿತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೈಗೊಂಡ ಕ್ರಮಗಳೇನು?

ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗಗಳಲ್ಲಿ ಕೊರೊನಾ ಹೆಚ್ಚಳ ಹಿನ್ನೆಲೆಯಲ್ಲಿ ಗಡಿ ನಿರ್ಬಂಧ ಸದ್ಯಕ್ಕಿಲ್ಲ. ಶಬರಿಮಲೆ ಯಾತ್ರಿಕರ ತಪಾಸಣೆ ಮಾಡುವ ವಿಚಾರವೂ ಸದ್ಯಕ್ಕಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಹೇಳಿದ್ದಾರೆ.

ಜಾಹೀರಾತು

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಬರಿಮಲೆಗೆ ಹೋದವರು ಮತ್ತೆ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವ ಸಂದರ್ಭ, ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸುವ ಚಿಂತನೆ ಸದ್ಯಕ್ಕಿಲ್ಲ. ಒಂದು ವೇಳೆ ಅವರಲ್ಲಿ ಕೋವಿಡ್ ಲಕ್ಷಣ ಕಂಡುಬಂದಲ್ಲಿ, ತಪಾಸಣೆಗೆ ಒಳಪಡಬೇಕು ಕಾಸರಗೋಡಿನಲ್ಲಿ ಸದ್ಯ 27 ಪ್ರಕರಣಗಳು ಸಕ್ರಿಯವಾಗಿವೆ. ಈ ಪೈಕಿ 25 ಮಂದಿ ಹೋಂ ಐಸೋಲೇಶನ್ ನಲ್ಲಿದ್ದಾರೆ. ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ದಕ್ಷಿಣ ಕನನಡ ಜಿಲ್ಲೆಯಲ್ಲಿ ಸದ್ಯ ಅಂಥ ಆತಂಕ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಕುರಿತು ಆತಂಕ ಬೇಡ ಎಂದು ಆರೋಗ್ಯಾಧಿಕಾರಿ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಜಾಗೃತಿ ಕುರಿತು ಪ್ರಚಾರವನ್ನು ಮಾಡಲು ಕ್ರಮ ಕೈಗೊಳ್ಳುತ್ತಿದ್ದೇವೆ. ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ತಾಲೂಕುವಾರು ಆರೋಗ್ಯ ಇಲಾಖಾಧಿಕಾರಿಗಳ ಸಭೆ ಕರೆಯಲಾಗಿದೆ. ಆಕ್ಸಿಜನ್ ಬೆಡ್, ಐಸಿಯು ಲಭ್ಯತೆ, ಆಕ್ಸಿಜನ್ ಘಟಕ ಸನ್ನದ್ಧವಾಗಿಡಲು ಸೂಚನೆ ನೀಡಲಾಗಿದೆ. ಜಿಲ್ಲಾ ವೈರಾಲಜಿ ಪ್ರಯೋಗಾಲಯದಲ್ಲಿ ಕೋವಿಡ್ ಪರೀಕ್ಷೆಗೆ ಎಲ್ಲ ರೀತಿಯ ಸಿದ್ಧತೆ ನಡೆಸಲಾಗಿದೆ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ. ಕೇರಳ ಭಾಗದಿಂದ ದಿನವಹಿ ಆಗಮಿಸುವ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಕೋವಿಡ್ ಲಕ್ಷಣ, ಐಎಲ್.ಐ, ಸಾರಿ ಪ್ರಕರಣ ಕಂಡುಬಂದರೆ, ಅವರನ್ನು ಐಸೋಲೇಶನ್ ಗೆ ಒಳಪಡಿಸಿ, ಕೋವಿಡ್ ತಪಾಸಣೆ ನಡೆಸಬೇಕು ಎಂದು ಎಲ್ಲ ವಿದ್ಯಾಸಂಸ್ಥೆಗಳಿಗೆ ಆರೋಗ್ಯ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಸದ್ಯದಲ್ಲೇ 1 ಸಾವಿರ ವಿಟಿಎಂ ಕಿಟ್ ಗಳು ದಕ್ಷಿಣ ಕನ್ನಡ ಜಿಲ್ಲೆಗೆ ಬರಲಿವೆ. ಈಗಾಗಲೇ 300 ಕಿಟ್ ಗಳಿವೆ. ಆರ್.ಟಿ.ಪಿ.ಸಿ.ಆರ್. ಒಂದು ಲಕ್ಷ ಕಿಟ್ ಗಳಿವೆ. ಪರೀಕ್ಷೆ ನಡೆಸಲು ಸಮಸ್ಯೆ ಇರುವುದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಆಸ್ಪತ್ರೆಗಳಲ್ಲಿ 10,986 ಬೆಡ್ ಗಳು, 1,376 ಆಕ್ಸಿಜನ್ ಬೆಡ್, 722 ಐಸಿಯು ಬೆಡ್ ಮತ್ತು 336 ವೆಂಟಿಲೇಟರ್ ಗಳು ಇವೆ. ಜಿಲ್ಲೆಯಲ್ಲಿ ಪ್ರತಿದಿನ 321 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದರಲ್ಲಿ 100 ರಾಪಿಡ್ ಟೆಸ್ಟ್ ಮತ್ತು 221 ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ನಡೆಸಲಾಗುತ್ತದೆ. ಸಾರಿ ಪ್ರಕರಣಗಳು ಹಾಗೂ ಐಎಲ್.ಐ. ಪ್ರಕರಣಗಳ ಪೈಕಿ 1 ಐಎಲ್ ಐ ಪ್ರಕರಣವನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಐ.ಎಲ್.ಐ. ಲಕ್ಷಣಗಳಿದ್ದರೆ, ಹತ್ತಿರದ ಆರೋಗ್ಯ ಕೇಂದ್ರ ಸಂಪರ್ಕಿಸಿ, ಅಗತ್ಯ ಪರೀಕ್ಷೆ ಮಾಡಬೇಕು. 60 ವರ್ಷಕ್ಕೆ ಮೇಲ್ಪಟ್ಟವರು ಮಾಸ್ಕ್ ಧರಿಸುವುದು ಉತ್ತಮ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ. ಇದೀಗ ತಲಪಾಡಿ, ಸಾರಡ್ಕ, ಸ್ವರ್ಗ, ಸುಳ್ಯಪದವು, ಜಾಲ್ಸೂರು ಚೆಕ್ ಪೋಸ್ಟ್ ಗಳಲ್ಲಿ , ರೈಲು ನಿಲ್ದಾಣಗಳಲ್ಲಿ ಕೋವಿಡ್ ಜಾಗೃತಿ ಕುರಿತು ಪ್ರಚಾರ ಮಾಡಲಾಗುತ್ತಿದೆ. ಸದ್ಯಕ್ಕೆ ಆತಂಕ ಬೇಡ ಎಂದು ಡಾ. ತಿಮ್ಮಯ್ಯ ಹೇಳಿದರು

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.