ಪ್ರಮುಖ ಸುದ್ದಿಗಳು

ಕೈರಂಗಳ ಪುಣ್ಯಕೋಟಿ ನಗರದಲ್ಲಿ ಬಂಟ್ವಾಳ ತಾಲೂಕು ಅ.ಭಾ.ಸಾ.ಪ. ಸಾಹಿತ್ಯ ಸಮಾವೇಶ

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ವತಿಯಿಂದ ಶಾರದಾ ಗಣಪತಿ ವಿದ್ಯಾ ಕೇಂದ್ರ ಕೈರಗಂಗಳದಲ್ಲಿ ಸಾಹಿತ್ಯ ಸಮಾವೇಶ ೨೦೨೩ ದಶಂಬರ ೧ ರಂದು ನಡೆಯಲಿದೆ. ಉದ್ಘಾಟನೆಯ ಬಳಿಕ ಅಭಿರುಚಿ ಗೋಷ್ಠಿ , ಸಾಹಿತ್ಯ ಸೌರಭ ಗೋಷ್ಠಿಗಳು  ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಯೋಜಿಸಲಾಗಿದೆ.  ದ.ಕ. ಜಿಲ್ಲಾ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್ ಎಸ್ ನಾಯಕ್ ಮಂಗಳೂರು ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಅ.ಭಾ.ಸಾ.ಪ. ಜಿಲ್ಲಾಧ್ಯಕ್ಷ ಹಿರಿಯ ಪತ್ರಕರ್ತ ಪಿ.ಬಿ. ಹರೀಶ್ ರೈ ಆಶಯ ಭಾಷಣ ಮಾಡಲಿದ್ದಾರೆ. ಜಿಲ್ಲಾ ಚುಟುಕು ಸಾಹಿತ್ಯ ಪರಿತ್ತಿನ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ ಮುಖ್ಯ ಅತಿಥಿಯಾಗಿರುತ್ತಾರೆ. ಅಭ್ಯಾಗತರಾಗಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಮ್ ಭಾಗವಹಿಸಲಿದ್ದು, ಹಿರಿಯ ಸಾಹಿತಿ ಶ್ರೀನಿವಾಸ ಭಟ್ ಸೇರಾಜೆ  ಇವರ ಸರ್ವಾಧ್ಯಕ್ಷತೆಯಲ್ಲಿ  ಸಮಾವೇಶ ನಡೆಯಲಿದೆ.  ಸ್ವಾಗತ ಸಮಿತಿ ಅಧ್ಯಕ್ಷ ಟಿ.ಜಿ. ರಾಜಾರಾಮಭಟ್  ಶುಭ ಹಾರೈಸಲಿದ್ದಾರೆ ಎಂದು ಅ.ಭಾ.ಸಾ.ಪರಿಷತ್ ಬಂಟ್ವಾಳ ಸಮಿತಿ ಅಧ್ಯಕ್ಷ ಡಾ.ಸುರೇಶ ನೆಗಳಗುಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಕೈರಂಗಳದಲ್ಲಿ ದ.೧ ರಂದು ನಡೆಯಲಿರುವ ಸಾಹಿತ್ಯ ಸಮಾವೇಶ ೨೦೨೩ ರ ಸರ್ವಾಧ್ಯಕ್ಷರಾಗಿ ಹಿರಿಯ ಕವಿ, ಲೇಖಕ ,ಬಹುಮುಖ ಪ್ರತಿಭೆಯ ಶ್ರೀನಿವಾಸ ಭಟ್ ಸೇರಾಜೆ ಆಯ್ಕೆಯಾಗಿದ್ದಾರೆ. ಯಕ್ಷಗಾನ ವೇಶಧಾರಿಯಾಗಿ, ತಾಳಮದ್ದಲೆ ಅರ್ಥದಾರಿಯಾಗಿ ಶ್ರೀನಿವಾಸ ಭಟ್ಟರು ಪ್ರಸಿದ್ಧರಾಗಿದ್ದಾರೆ. ಹಲವು ಪ್ರತಿಕೆಗಳಲ್ಲಿ ಸಾವಿರಕ್ಕೂ ಹೆಚ್ಚು ಲೇಖನಗಳು, ಕವನಗಳು ಪ್ರಕಟವಾಗಿವೆ. ಹೊಂಗಿರಣ , ಹೊಂಗನಸು, ದೀಪ ಮೊದಲಾದ ಕೃತಿಗಳು ಪ್ರಕಟಗೊಂಡಿವೆ. ಆಕಾಶವಾಣಿಯಲ್ಲಿ ಭಾವಗೀತೆ, ನಾಟಕ , ಚಿಂತನ ಪ್ರಸಾರಗೊಂಡಿದೆ. ಹೊಸದಿಗಂತ ಹಾಗೂ ಕಲಾದರ್ಶನ ಪ್ರತಿಕೆಗಳಿಗೆ ನಿರಂತರ ೫ ವರ್ಷ ಕಾಲ ಪದಬಂಧ ರಚನೆ ಮಾಡಿ ಸಾಹಿತ್ಯಾಭಿರುಚಿಯನ್ನು ಬೆಳೆಸಿದ್ದಾರೆ. ಇವರ ದೀಪ ಕವನ ಸಂಕಲನಕ್ಕೆ ದಕ್ಷಿಣ ಕನ್ನಡ , ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಪ್ರಥಮ ಬಹುಮಾನ ಲಭಿಸಿದೆ. ಕುಡ್ಪಲ್ತಡ್ಕ ನಿವಾಸಿಯಾಗಿರುವ ಇವರು ರಾಷ್ಟ್ರ ಭಾಷಾ ಪ್ರವೀಣರಾಗಿದ್ದು ನಿವೃತ್ತ ಶಿಕ್ಷಕರು ಆಗಿರುವ ಇವರು ಪ್ರಸ್ತುತ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ಅಧ್ಯಾಪಕರಾಗಿ ಸೇವೆಸಲ್ಲಿಸುತ್ತಿದ್ದಾರೆ.

ಗೋಷ್ಠಿಗಳು ಹೀಗಿವೆ:

ಜಾಹೀರಾತು

ಪೂರ್ವಾಹ್ನ ೧೦.೩೦ ರಿಂದ ಅಭಿರುಚಿ ಕವಿಗೋಷ್ಠಿಯು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದು ಕವನ ಕಾವ್ಯ ವಾಚನ ಗೋಷ್ಠಿಯು  ಕವಯಿತ್ರಿ ಮಧುರಾ ಕಡ್ಯ ಅಧ್ಯಕ್ಷತೆಯಲ್ಲಿ ನಡೆಯಲಿದೆ. ವಿದ್ಯಾರ್ಥಿ ಕವಿಗೋಷ್ಠಿಯು ಕವಯಿತ್ರಿ ಸೀತಾಲಕ್ಷ್ಮೀ ವರ್ಮ ವಿಟ್ಲ ,  ಸಾಹಿತ್ಯ ರಸಪ್ರಶ್ನೆ ಗೋಷ್ಠಿಯು ಪತ್ರಿಕಾ ಸಂಪಾದಕ ರೇಮಂಡ್ ಡಿಕುನ್ಹಾ ತಾಕೋಡೆ ,ಭಾರತ ದರ್ಶನ ಗೋಷ್ಠಿಯು ಬರಹಗಾರ ಸೀತಾರಾಮ ಭಟ್ , ಪಾತ್ರವೈವಿಧ್ಯ ನಿರೂಪಣೆ ಗೋಷ್ಠಿಯು ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸಾಹಿತಿ ರಮೇಶ ಬಾಯರ್ , ದೇಶ ಭಕ್ತಿಗೀತೆ ಗಾಯನ ರಸಗೋಷ್ಠಿಯು ಕವಿ ಗುಣಾಜೆ ರಾಮಚಂದ್ರ ಭಟ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಅಪರಾಹ್ನ ೧.೩೦ ರಿಂದ ಸಾಹಿತ್ಯ ಸೌರಭ ಗೋಷ್ಠಿಯು ಮಂಗಳೂರು ಕೆನರಾ ಕಾಲೇಜಿನ ಉಪನ್ಯಾಸಕ ಕವಿ ರಘು ಇಡ್ಕಿದು ಅಧ್ಯಕ್ಷತೆಯಲ್ಲಿ ನಡೆಯಲಿದೆ.  ಹೊಸತಲೆಮಾರಿಗೆ ಸಾಹಿತ್ಯ ಪ್ರಸ್ತುತತೆ ಕುರಿತು  ಸಾಹಿತಿ ಮೀನಾಕ್ಷಿ ರಾಮಚಂದ್ರ ಉಪನ್ಯಾಸ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಸಿದ್ಧ ಸಾಹಿತಿ , ಕವಿ , ಬರಹಗಾರರಿಂದ ಬಗೆಬಗೆಯ ಸಾಹಿತ್ಯ ಪ್ರಸ್ತುತಿ ನಡೆಯಲಿದೆ.

ಅಪರಾಹ್ನ ೩.೩೦ ರಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವಿದ್ದು ಸಾಹಿತಿ ಹಿರಿಯ ಪತ್ರಕರ್ತ  ಜಯಾನಂದ ಪೆರಾಜೆ ಅಭಿನಂದನಾ ಭಾಷಣ ಮಾಡಲಿದ್ದಾರೆ. ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯ ಪೆರಿಯ ಕಾಸರಗೋಡು ಇಲ್ಲಿನ ಪ್ರಾಧ್ಯಾಪಕ ಚೇತನ್ ಮುಂಡಾಜೆ ಸಮಾರೋಪ ಭಾಷಣ ಮಾಡಲಿದ್ದಾರೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.