ಬಂಟ್ವಾಳ

ಬಂಟ್ವಾಳ ತಾಲೂಕು ಮಟ್ಟದ ರಾಜ್ಯೋತ್ಸವ: ನೆಲ, ಜಲ ರಕ್ಷಣೆಗೆ ಬದ್ಧರಾಗೋಣ – ತಹಸೀಲ್ದಾರ್

ಜಾಹೀರಾತು

ಕರ್ನಾಟಕದ ನೆಲ, ಜಲ ಸಂರಕ್ಷಣೆಗೆ ಹಾಗೂ ನಾಡ ಭಾಷಾ ಉಳಿವಿಗೆ ನಾವೆಲ್ಲರೂ ಬದ್ಧರಾಗಿ ಕೆಲಸ ಮಾಡಬೇಕಿದೆ ಎಂದು ಬಂಟ್ವಾಳ ತಹಸೀಲ್ದಾರ್ ಎಸ್.ಬಿ.ಕೂಡಲಗಿ ಹೇಳಿದ್ದಾರೆ.

ಬುಧವಾರ ಬಂಟ್ವಾಳ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕರ್ನಾಟಕದಲ್ಲಿರುವ ನಾವೆಲ್ಲರೂ ಒಂದೇ ಎಂದು ಸಾಹಿತಿಗಳು, ದಾರ್ಶನಿಕರು ಪ್ರಸ್ತಾಪಿಸುತ್ತಿರುವುದನ್ನು ನೆನಪಿಸಿದ ತಹಸೀಲ್ದಾರ್, ಕನ್ನಡನಾಡು ಮತ್ತು ಭಾಷೆಯ ಅಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಸಿದ್ಧರಾಗಬೇಕು. ವಿವಿಧ ರಂಗಗಳಲ್ಲಿ ತೊಡಗಿಸಿ ರಾಜ್ಯದ ಪತಾಕೆಯನ್ನು ವಿಶ್ವ ಭೂಪಟದಲ್ಲಿ ತೋರಿಸಬೇಕು ಎಂದರು.

ದಿಕ್ಸೂಚಿ ಭಾಷಣ ಮಾಡಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಗೋಪಾಲಕೃಷ್ಣ ನೇರಳೆಕಟ್ಟೆ, ಭಾಷೆಯನ್ನು ಮಾತನಾಡುವ ಶೈಲಿ ಬೇರೆ ಇರಬಹುದು. ಆದರೆ ಕರ್ನಾಟಕದಲ್ಲಿ ಕನ್ನಡದ ವಚನಕಾರರಿಂದ ತೊಡಗಿ ಸ್ವಾತಂತ್ರ್ಯ ಹೋರಾಟಗಾರರವರೆಗೆ, ಸಾಹಿತ್ಯದಿಂದ ತಂತ್ರಜ್ಞಾನದವರೆಗೆ ಕರ್ನಾಟಕ ಜಗತ್ತಿನ ಗಮನ ಸೆಳೆದಿದೆ ಎಂದರು. ಕನ್ನಡ ಸಂಸ್ಕಾರ ನೀಡುವ ಕೆಲಸ ಆಗಬೇಕು. ನಾಡಪ್ರೇಮ ನಮಗಿರಬೇಕು. ಭಾಷಾಭಿಮಾನ ಇರಬೇಕು, ಅನ್ಯಭಾಷೆ ಕಲಿಕಾ ವ್ಯಾಮೋಹವನ್ನು ನಾವೇ ಬೆಳೆಸಿಕೊಂಡರೆ, ಮಕ್ಕಳು ಹೇಗೆ ಅಭಿಮಾನ ಪಡೆದುಕೊಳ್ಳುವುದು ಎಂದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಬಂಟ್ವಾಳ ನಗರ ಪೊಲೀಸ್ ಠಾಣೆ ನಿರೀಕ್ಷಕ ಅನಂತಪದ್ಮನಾಭ ಉಪಸ್ಥಿತರಿದ್ದು ಶುಭ ಹಾರೈಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಕರ್ನಾಟಕ ಏಕೀಕರಣ ಕುರಿತು ಮಾತನಾಡಿ, ಸ್ವಾಗತಿಸಿದರು. ಹಿರಿಯ ಕಲಾವಿದ ಮಂಜು ವಿಟ್ಲ ಅವರಿಗೆ ನುಡಿನಮನವನ್ನು ತಾಲೂಕು ಕಚೇರಿ ಸಿಬಂದಿ ಶ್ರೀಕಲಾ ಕಾರಂತ ಸಲ್ಲಿಸಿದರು. ಉಪತಹಸೀಲ್ದಾರ್ ನವೀನ್ ಬೆಂಜನಪದವು ಕಾರ್ಯಕ್ರಮ ನಿರ್ವಹಿಸಿದರು. ಇದಕ್ಕೂ ಮೊದಲು ತಹಸೀಲ್ದಾರ್ ನೇತೃತ್ವದಲ್ಲಿ ಧ್ವಜಾರೋಹಣ, ಪೊಲೀಸ್, ಎನ್.ಸಿ.ಸಿ. ಸ್ಕೌಟ್ಸ್ ಮತ್ತು ಬಿ.ಮೂಡ ಹೈಸ್ಕೂಲ್, ಎಸ್.ಎಲ್.ಎನ್.ಪಿ. ವಿದ್ಯಾಲಯ ಸಹಿತ ನಾನಾ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು. ಎಸ್.ವಿ.ಎಸ್.ದೇವಳ ಶಾಲೆ ವಿದ್ಯಾರ್ಥಿಗಳು ಕನ್ನಡ ಗೀತೆ ಹಾಡಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.