ಇವತ್ತು ತಾಲೂಕು ಮಟ್ಟದ ಕ್ರೀಡಾಕೂಟ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದೆ. ಎರಡು ದಿನಗಳ ಕ್ರೀಡಾಕೂಟಕ್ಕೆ ತಾಲೂಕಿನಿಂದ ಮಂಗಳೂರಿಗೆ ಹೋಗಬೇಕಾದ ಪರಿಸ್ಥಿತಿ. ಕಾರಣವಿಷ್ಟೇ. ಬಂಟ್ವಾಳದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಇಲ್ಲ. ಸುಸಜ್ಜಿತ ಕ್ರೀಡಾಂಗಣದ ಕೊರತೆ ಎದುರಿಸುತ್ತಿರುವ ಬಂಟ್ವಾಳಕ್ಕೆ ಕ್ರೀಡಾಂಗಣ ಒದಗಿಸುತ್ತೇವೆ ಎಂಬ ಹೇಳಿಕೆ ಕಾರ್ಯರೂಪಕ್ಕೆ ಬರಬೇಕಿದೆ.
ಇವತ್ತು ಕ್ರೀಡಾಕೂಟ ಉದ್ಘಾಟನೆ ಆಯಿತು!!
ಮಂಗಳಾ ಕ್ರೀಡಾಂಗಣದಲ್ಲಿ ಬಂಟ್ವಾಳ ತಾಲೂಕು ಕ್ರೀಡಾಕೂಟ ಉದ್ಘಾಟನೆ ಇವತ್ತು ಆಯಿತು. ಉದ್ಘಾಟಿಸಿ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಬಂಟ್ವಾಳ ತಾಲೂಕಿಗೆ ಸುಸಜ್ಜಿತ ಕ್ರೀಡಾಂಗಣಕ್ಕಾಗಿ ಒಂದು ನೂರು ಕೋಟಿ ರೂಪಾಯಿಗಳ ಅನುದಾನಕ್ಕಾಗಿ ‘ ಕೇಲ್ ಇಂಡಿಯಾ’ಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ಶೀಘ್ರವಾಗಿ ಮಂಜೂರುಗೊಂಡು ಪ್ರಾರಂಭವಾಗುವಲ್ಲಿ ತಾನು ದೆಹಲಿಯಲ್ಲಿ ಮಾತನಾಡಿ ಪ್ರಯತ್ನಿಸುವೆ ಎಂದರು.
ಮಂಗಳಾ ಸ್ಟೇಡಿಯಂನಲ್ಲಿ ಯಾಕಾಯ್ತು ಕ್ರೀಡಾಕೂಟ:
ದ.ಕ.ಜಿ.ಪಂ, ಶಾಲಾ ಶಿಕ್ಷಣ ಇಲಾಖೆ, ಬಂಟ್ವಾಳ ಕ್ಷೇತ್ರ ಶಿಕ್ಷಣಾಕಾರಿಗಳ ಕಚೇರಿ ಹಾಗೂ ತುಂಬೆ ಪ್ರೌಢಶಾಲೆಯ ಸಹಯೋಗದೊಂದಿಗೆ ಬಂಟ್ವಾಳ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟ ಆರಂಭವಾಗಿದೆ. ಬಂಟ್ವಾಳದಲ್ಲೇ ಸರಿಯಾದ ವ್ಯವಸ್ಥೆಗಳಿದ್ದರೆ, ಇಲ್ಲೇ ಮಾಡಬಹುದಿತ್ತು ಎನ್ನುತ್ತಾರೆ ಆಯೋಜಕರು.
ಬಂಟ್ವಾಳ ತಾಲೂಕಿನಲ್ಲಿ ಸಿಂಥೆಟಿಕ್ ಟ್ರ್ಯಾಕ್ ಇಲ್ಲದೇ ಇರುವುದರಿಂದ ಈ ಕ್ರೀಡಾಕೂಟವನ್ನು ಮಂಗಳೂರಿನಲ್ಲಿ ನಡೆಸುವ ಅನಿವಾರ್ಯತೆ ಎದುರಾಗಿದೆ. ಟ್ರ್ಯಾಕ್ ಇಲ್ಲದೇ ಇದ್ದು ಕ್ರೀಡಾಕೂಟ ನಡೆಸಿದರೆ ಮಳೆಗೆ ಮೈದಾನದಲ್ಲಿ ನೀರು ತುಂಬಿ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಹೀಗಾಗಿ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಕ್ರೀಡಾಕೂಟ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಈ ಬಾರಿ ತುಂಬೆ ಶಿಕ್ಷಣ ಸಂಸ್ಥೆಗಳು ಕ್ರೀಡಾಕೂಟವನ್ನು ಆಯೋಜಿಸಿವೆ.
ಈ ಕ್ರೀಡಾಕೂಟ ಸಹಿತ ವಲಯ ಮಟ್ಟದ ಯಾವುದೇ ಕ್ರೀಡಾಕೂಟಕ್ಕೆ ಸರಕಾರದ ಶಿಕ್ಷಣ ಇಲಾಖೆ ಒದಗಿಸುವುದು ಕನಿಷ್ಠ ಮೊತ್ತ. ಖಾಸಗಿ ಶಿಕ್ಷಣ ಸಂಸ್ಥೆಗಳು ಇಂಥವನ್ನು ಆಯೋಜಿಸುವುದಾದರೆ ಅವು ಬಲಿಷ್ಠವಾಗಿದ್ದರೆ ಒಕೆ. ಸರಕಾರಿ ಶಾಲೆಗೇನಾದರೂ ಇದನ್ನು ವಹಿಸಿದ್ದರೆ, ಅವರು ಊರವರನ್ನು ಕಾಡಿ, ಬೇಡಿ ಆಯೋಜಿಸಬೇಕು. ಸ್ಟೇಜಿನಲ್ಲಿ ಪ್ರೊಟೋಕಾಲ್ ಪಾಲನೆ ಸಂದರ್ಭವಷ್ಟೇ ಕೆಲವರು ಅಲರ್ಟ್ ಆಗುತ್ತಾರೆ. ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಸಹಿತ ಶಿಕ್ಷಕರ ಸಂಘಗಳು ಸುಸಜ್ಜಿತ ಕ್ರೀಡಾಂಗಣದತ್ತಲೂ ಸರಕಾರವನ್ನು ಎಚ್ಚರಿಸುವ ಕೆಲಸವನ್ನು ಕಾಲಕಾಲಕ್ಕೆ ಮಾಡಬೇಕು ಎಂದು ಕ್ರೀಡಾಪ್ರೇಮಿಗಳು ಬಯಸುತ್ತಿದ್ದಾರೆ.
ಉದ್ಘಾಟನಾ ಕಾರ್ಯಕ್ರಮ ಹೀಗಿತ್ತು:
ಮಂಗಳಾ ಕ್ರೀಡಾಂಗಣದಲ್ಲಿ ಬಂಟ್ವಾಳ ತಾಲೂಕು ಕ್ರೀಡಾಕೂಟ ಉದ್ಘಾಟನೆ ಇವತ್ತು ಆಯಿತು. ಉದ್ಘಾಟಿಸಿ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಬಂಟ್ವಾಳ ತಾಲೂಕಿಗೆ ಸುಸಜ್ಜಿತ ಕ್ರೀಡಾಂಗಣಕ್ಕಾಗಿ ಒಂದು ನೂರು ಕೋಟಿ ರೂಪಾಯಿಗಳ ಅನುದಾನಕ್ಕಾಗಿ ‘ ಕೇಲ್ ಇಂಡಿಯಾ’ಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ಶೀಘ್ರವಾಗಿ ಮಂಜೂರುಗೊಂಡು ಪ್ರಾರಂಭವಾಗುವಲ್ಲಿ ತಾನು ದೆಹಲಿಯಲ್ಲಿ ಮಾತನಾಡಿ ಪ್ರಯತ್ನಿಸುವೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ , ಬಂಟ್ವಾಳ ಹಾಗೂ ತುಂಬೆ ಪ್ರೌಢಶಾಲೆ ಇವುಗಳ ಜಂಟಿ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ 2023 – 24ರ ಬಂಟ್ವಾಳ ತಾಲೂಕು ಕ್ರೀಡಾಕೂಟದ ಅಧ್ಯಕ್ಷತೆಯನ್ನು ವಹಿಸಿದ್ದ ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ. ಅಬ್ದುಲ್ ಸಲಾಂ ಅವರು ಶಾಂತಿಯ ಸಂಕೇತ ಪಾರಿವಾಳವನ್ನು ಹಾರಿ ಬಿಟ್ಟು ಅಧ್ಯಕ್ಷ ಭಾಷಣದಲ್ಲಿ ಕ್ರೀಡೆ ಎನ್ನುವುದು ಆರೋಗ್ಯಪೂರ್ಣ ಸ್ಪರ್ಧೆಯಾಗಿದ್ದು ಶಿಸ್ತು ಮತ್ತು ಸಂಯಮವನ್ನು ಕಲಿಸಿಕೊಡುತ್ತದೆ. ಪ್ರತಿಭೆಯನ್ನು ಪ್ರದರ್ಶಿಸಲು ಒಳ್ಳೆಯ ವೇದಿಕೆಯಾಗಿ ಕ್ರೀಡಾ ಕ್ಷೇತ್ರ ಸಹಕರಿಸುತ್ತದೆಯಲ್ಲದೆ ಕ್ರೀಡಾಕೂಟವೆನ್ನುವುದು ಒಂದು ಸ್ಮರಣೀಯ ಕ್ಷಣಗಳಾಗಿ ಉಳಿಯುತ್ತದೆ ಎಂದರು. ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ತಾಲೂಕು ಧ್ವಜಾರೋಹಣಗೈದು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶುಭ ಹಾರೈಸಿದರು. ತುಂಬೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೀಶ್ ಸಾಲಿಯಾನ್ ಒಲಿಂಪಿಕ್ ಧ್ವಜಾರೋಹಣ ಮಾಡಿದರು. ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ.ಎನ್. ಗಂಗಾಧರ ಆಳ್ವ ಸ್ವಾಗತಿಸಿ ಶಾಲಾ ಧ್ವಜಾರೋಹಣ ಗೈದರು. ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ವಿಷ್ಣು ನಾರಾಯಣ ಹೆಬ್ಬಾರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತುಂಬೆ ಗ್ರಾಮ ಪಂಚಾಯತ್ ನ ನಿಕಟಪೂರ್ವ ಅಧ್ಯಕ್ಷ ಪ್ರವೀಣ್ ತುಂಬೆ, ತುಂಬೆ ಪಿ. ಟಿ.ಎ. ಅಧ್ಯಕ್ಷ ನಿಸಾರ್ ಅಹಮ್ಮದ್, ತಾಲೂಕು ನೌಕರರ ಸಂಘದ ಅಧ್ಯಕ್ಷ ಉಮಾನಾಥ್ ರೈ ಮೇರಾವು, ಬಿ.ಎ. ಐ.ಟಿ.ಐ ಪ್ರಾಂಶುಪಾಲ ನವೀನ್ ಕುಮಾರ್, ತಾಲೂಕು ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷೆ ರತ್ನಾವತಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಜಾಯೆಲ್ , ಸ್ಕೌಟ್ಸ್ – ಬಿ.ಎಂ.ತುಂಬೆ, ಸದಾಶಿವ ಡಿ.ತುಂಬೆ ಇಬ್ರಾಹಿಂ ವಳವೂರು, ಶಿಕ್ಷಣ ಸಂಯೋಜಕಿ ಕೆ. ಸುಜಾತ ಕುಮಾರಿ, ಶ್ರೀಮತಿ ಸುಧಾ, ಪದ್ಮಾವತಿ, ತುಂಬೆ ಪ್ರೌಢಶಾಲಾ ಮುಖ್ಯಸ್ಥೆ ವಿದ್ಯಾ ಕೆ., ದೈಹಿಕ ಶಿಕ್ಷಣ ನಿರ್ದೇಶಕ ಸಾಯಿರಾಮ್ ಜೆ.ನಾಯಕ್, ಅಬ್ದುಲ್ ಗಫೂರ್, ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಮೋಲಿ ಎಡ್ನ ಗೊನ್ಸಾಲ್ವಿಸ್, ಪಿ.ಟಿ.ಎ ಉಪಾಧ್ಯಕ್ಷೆ ಮೋಹಿನಿ, ರಮೇಶ್ ನಾಯಕ್ ಮತ್ತಿತರರು ಉಪಸ್ಥಿತರಿದ್ದ ಸಮಾರಂಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀನಿವಾಸ್ ಕೆದಿಲ ಹಾಗೂ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕಿ ಲಿಲ್ಲಿ ಪಾಯಸ್ ಇವರನ್ನು ಸನ್ಮಾನಿಸಲಾಯಿತು. ತುಂಬೆ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ್ ರೈ ಬಿ. ವಂದಿಸಿ ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಯ ಅಧೀಕ್ಷಕರಾದ ಅಬ್ದುಲ್ ಕಬೀರ್ ಬಿ. ನಿರೂಪಿಸಿದರು. ಎರಡು ದಿನಗಳ ಕಾಲ ಜರಗುವ ಈ ಕ್ರೀಡಾಕೂಟದಲ್ಲಿ ಸುಮಾರು ಎರಡು ಸಾವಿರ ಕ್ರೀಡಾಪಟುಗಳು ಭಾಗವಹಿಸುತ್ತಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…