ಪ್ರಮುಖ ಸುದ್ದಿಗಳು

ಹೆದ್ದಾರಿಯಲ್ಲಿ ಹೆಚ್ಚಾಗುತ್ತಿದೆ ಅಪಘಾತ: ಮೂಲ್ಕಿ ಸಮೀಪ ಕಾರು ಬೈಕಿಗೆ ಡಿಕ್ಕಿಯಾಗಿ ಯುವತಿ ಸಾವು

ಕರಾವಳಿಯಲ್ಲಿ ಮಳೆ ಮತ್ತೆ ಸುರಿಯಲಾರಂಭಿಸುತ್ತಿರುವ ಹೊತ್ತಿನಲ್ಲಿ ಹೆದ್ದಾರಿಯಲ್ಲಿ ಅಪಘಾತಗಳು ಜಾಸ್ತಿಯಾಗತೊಡಗಿವೆ. ಪ್ರತ್ಯೇಕ ಘಟನೆಗಳಲ್ಲಿ ಮಂಗಳೂರು ಉಡುಪಿ ಹೆದ್ದಾರಿಯ ಮೂಲ್ಕಿ ಸಮೀಪ ಅಪಘಾತದಲ್ಲಿ ಯುವತಿಯೊಬ್ಬಳು ಸಾವನ್ನಪ್ಪಿದ್ದರೆ, ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮೆಲ್ಕಾರ್ ಎಂಬಲ್ಲಿ ಬಸ್ಸಿಗೆ ಕಾಯುತ್ತಿದ್ದ ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ.

ರಾ.ಹೆ. 66ರ ಮೂಲ್ಕಿ ವಿಜಯ ಸನ್ನಿಧಿ ಬಳಿ ಶುಕ್ರವಾರ ಕಾರೊಂದು ಹೆದ್ದಾರಿ ವಿಭಾಜಕ ಬಳಿ ಕ್ರಾಸಿಂಗ್ ಮಾಡುತ್ತಿರುವ ಸಂದರ್ಭ ಉಡುಪಿ ಕಡೆಯಿಂದ ಬರುತ್ತಿದ್ದ ಎನ್ ಫೀಲ್ಡ್ ಬೈಕ್‌ಗೆ, ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬೈಕ್‌ ಸಹ ಸವಾರ ತಲೆಗೆ ಗಂಭೀರ ಗಾಯವಾಗಿ ಸಾವನ್ನಪ್ಪಿದ್ದಾರೆ. ಬೈಕ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೇರಳದ ಕಾಸರಗೋಡು ಕೊರಂಗಪತ್ತೂರು ನಿವಾಸಿ ಪ್ರೀತಿಕಾ ಶೆಟ್ಟಿ(21) ಮೃತ ಯುವತಿ. ಬಂಟ್ವಾಳ ತಾಲೂಕು ಅರಂತೋಡಿ ಬಾಳೆಪುಣಿ ನಿವಾಸಿ ಮನ್ವಿತ್‌ ರಾಜ್‌ ಶೆಟ್ಟಿ (21) ಗಾಯಗೊಂಡ ಬೈಕ್ ಸವಾರ.

ಜಾಹೀರಾತು

ಇಬ್ಬರೂ ಉಡುಪಿ ಕಡೆಯಿಂದ ಹೆದ್ದಾರಿಯಲ್ಲಿ ಬರುತ್ತಿದ್ದಾಗ ಗೋವಾ ನೋಂದಣಿಯ ಹೋಂಡಾ ಕಾರು ಕಿನ್ನಿಗೋಳಿ ಕಡೆಯಿಂದ ಏಕಾಏಕಿ ಹೆದ್ದಾರಿಗೆ ನುಗ್ಗಿ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಈ ಸಂದರ್ಭ ಪ್ರೀತಿಕಾ ಶೆಟ್ಟಿ ಸುಮಾರು 20 ಮೀ. ದೂರಕ್ಕೆ ಎಸೆಯಲ್ಪಟ್ಟಿದ್ದರು. ಅವರು ಹೆಲೈಟ್ ಧರಿಸಿದ್ದರೂ, ಅದು ಚೂರು ಚೂರಾಗಿದ್ದು ತಲೆಗೆ ಗಂಭೀರ ಗಾಯಗಳಾಗಿತ್ತು. ಕಾರನ್ನು ಸ್ಥಳೀಯ ಮಹಿಳೆಯೊಬ್ಬರು ಚಲಾಯಿಸುತ್ತಿದ್ದರು.

ಅಪಘಾತದಿಂದ ಕೆಲ ಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತ ಗೊಂಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಅಪಘಾತ ಕ್ಕೀಡಾದ ಎರಡು ವಾಹನಗಳನ್ನು ತೆರವುಗೊಳಿಸಿದ್ದಾರೆ. ಸ್ಥಳಕ್ಕೆ ಮಂಗಳೂರು ಟ್ರಾಫಿಕ್‌ ಎಸಿಪಿ ಗೀತಾ ಕುಲಕರ್ಣಿ, ಉತ್ತರ ಟ್ರಾಫಿಕ್‌ ಇನ್ಸ್‌ಪೆಕ್ಟರ್ ಶರೀಫ್,  ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.