ಬಂಟ್ವಾಳ

ಮಳೆಯೊಂದಿಗೆ ಕೆಸರು, ರಸ್ತೆಯಲ್ಲೇ ನೀರು — ಹೆದ್ದಾರಿ ಜಂಕ್ಷನ್ ಗಳ ಸ್ಥಿತಿ ಹೇಗಿದೆ?

ನಾಲ್ಕು ಮಾರ್ಗ ಸೇರುವ ಜಂಕ್ಷನ್ ಈಗ ಬಿ.ಸಿ.ರೋಡ್ – ಅಡ್ಡಹೊಳೆ ಚತುಷ್ಪಥ ನಿರ್ಮಾಣ ಕಾಮಗಾರಿ ಸಂದರ್ಭ ಅಂಡರ್‌ಪಾಸ್ ಆಗಿ ಪರಿವರ್ತನೆ ಹೊಂದಿದೆ. ಇವುಗಳ ಪೈಕಿ ಬಿ.ಸಿ.ರೋಡ್ ನಿಂದ ಆರಂಭಗೊಂಡು, ಪಾಣೆಮಂಗಳೂರು, ಮೆಲ್ಕಾರ್ ಮತ್ತು ಮಾಣಿಯಲ್ಲಿರುವ ಅಂಡರ್‌ಪಾಸ್ ಗಳು ಮೇಲ್ನೋಟಕ್ಕೆ ಚೆನ್ನಾಗಿವೆ. ಆದರೆ ಮಳೆ ಬಂದ್ರೆ ಯಾವ ರೀತಿ ನೀರು ಹರಿದು ಹೋಗಬಹುದು ಎಂಬ ಕುತೂಹಲವಿದೆ. ಕಳೆದ ಕೆಲವೊಂದು ದಿನಗಳಿಂದ ಸುರಿಯುತ್ತಿರುವ ಸಣ್ಣ ಮಳೆಗೇ ಅಂಡರ್‌ಪಾಸ್ ಅಡಿಯಲ್ಲಿ ನೀರು ಕೆಸರಿನೊಂದಿಗೆ ಮಿಶ್ರವಾಗಿ ನಿಲ್ಲುತ್ತಿದೆ.

ಇದರ ಜೊತೆಗೆ ಮಳೆನೀರು ಕೆಲವೆಡೆ ಸರಾಗವಾಗಿ ಹರಿದುಹೋಗಲು ಸರಿಯಾದ ಡ್ರೈನೇಜ್ ವ್ಯವಸ್ಥೆಗಳು ಇಲ್ಲ. ಇನ್ನು ಜೋರಾಗಿ ಮಳೆ ಬಂದರೆ ಸಮಸ್ಯೆ ಎದುರಿಸಬೇಕಾದ ಸನ್ನಿವೇಶವಿದೆ. ಕಳೆದ ವರ್ಷ ಕಾಮಗಾರಿ ಪ್ರಾರಂಭದ ಕಾಲಘಟ್ಟವಾದರಿಂದ ಮಳೆಗಾಲದಲ್ಲಿ ತೊಂದರೆಯಾಗಿತ್ತು. ಆದರೆ ಈ ಬಾರಿ ಮಳೆ ನೀರು ಹರಿಯುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಾಕಷ್ಟು ಕಡೆಗಳಲ್ಲಿ ತಾತ್ಕಾಲಿಕ ಚರಂಡಿಗಳನ್ನು ತೆಗೆದು ನೀರು ಹರಿಯಲು ವ್ಯವಸ್ಥೆಗಳನ್ನು ಮಾಡಲಾಗಿದ್ದು, ಹೀಗಾಗಿ ಮಳೆ ನೀರಿನ ತೊಂದರೆ ಸೃಷ್ಟಿಯಾಗದು ಎಂದು ಕೆಲಸ ಮಾಡುವವರು ಹೇಳುತ್ತಾರೆ.

ಜಾಹೀರಾತು

ಸದ್ಯದ ಪರಿಸ್ಥಿತಿಯಲ್ಲಿ ಬಿ.ಸಿ.ರೋಡಿನಿಂದ ಮಾಣಿವರೆಗೆ ಬಹುತೇಕ ಪ್ರದೇಶದಲ್ಲಿ ಹೊಸ ಕಾಂಕ್ರೀಟ್ ರಸ್ತೆಯ ಜತೆಗೆ ಜಂಕ್ಷನ್ ಪ್ರದೇಶಗಳಲ್ಲಿ ಸರ್ವೀಸ್ ರಸ್ತೆಗಳನ್ನು ನಿರ್ಮಿಸಲಾಗಿದ್ದು, ಹೀಗಾಗಿ ಇಲ್ಲಿ ಅಷ್ಟೊಂದು ತೊಂದರೆ ಎದುರಾಗದು. ಆದರೆ ಅಂಡರ್‌ಪಾಸ್ ನಿರ್ಮಾಣವಾಗಿರುವ ಜಂಕ್ಷನ್‌ಗಳಲ್ಲಿ ಪ್ರಮಾಣದಲ್ಲಿ ಮಣ್ಣು ತುಂಬಿರುವುದರಿಂದ ತಗ್ಗು ಪ್ರದೇಶಗಳ ಸ್ಥಿತಿ ಹೇಳುವಂತಿಲ್ಲ.

ಇದ್ದುದರಲ್ಲಿ ಪಾಣೆಮಂಗಳೂರು ಅಂಡರ್‌ಪಾಸ್ ಪರವಾಗಿಲ್ಲ. ಇಲ್ಲಿ ಮೊದಲೇ ಡಾಂಬರು ಕಾಮಗಾರಿ ನಡೆದಿರುವ ಕಾರಣ ಯಾವುದೇ ಹೊಂಡ, ಗುಂಡಿ, ಕೆಸರು ನಿಲ್ಲುವ ಸನ್ನಿವೇಶಗಳಿಲ್ಲ.ಇನ್ನು ಇಲ್ಲಿ ಎರಡೂ ಕಡೆ ಸರ್ವೀಸ್ ರಸ್ತೆಗಳು ಆಗಿದ್ದು, ಏಕಮುಖ ಸಂಚಾರವೂ ಇದೆ. ಇವುಗಳ ಪೈಕಿ ಕಲ್ಲುರ್ಟಿ ಸನ್ನಿಧಾನದ ಬಳಿ ಕಾಮಗಾರಿ ನಡೆಯುತ್ತಿದ್ದು ಅಲ್ಲಿ ಮಳೆ ನಿರ್ವಹಣೆ ಸವಾಲಾಗಬಹುದು.

ಮೆಲ್ಕಾರ್ ಜಂಕ್ಷನ್ ನಲ್ಲಿ ವಾಹನ ಚಾಲನೆಯೂ ಸವಾಲು ಹಾಗೆಯೇ ಮಳೆ ನೀರು ಸರಾಗವಾಗಿ ಹೋಗಲು ಸೂಕ್ತ ಡ್ರೈನ್ ಮಾಡುವ ವ್ಯವಸ್ಥೆ ಇನ್ನೂ ನಿರ್ಮಾಣವಾಗದಿರುವುದು ಸಮಸ್ಯೆ. ಇಲ್ಲಿನ ಅಂಡರ್ ಪಾಸ್ ನಡಿ ಕೆಸರುಮಿಶ್ರಿತ ಮಣ್ಣು ನಿಂತಿದ್ದು, ಜೋರಾಗಿ ಮಳೆ ಬಂದರೆ, ಮೆಲ್ಕಾರ್ ನಿಂದ ಕೊಣಾಜೆ ರಸ್ತೆವರೆಗೆ ನೀರು ಹೊಳೆಯಂತೆ ಹರಿದುಹೋಗುವ ಸ್ಥಿತಿ ಇದೆ. ಇದು ಮಣ್ಣು ಸವೆತಕ್ಕೂ ಕಾರಣವಾಗಬಲ್ಲುದು. ಅಲ್ಲದೆ, ವಾಹನ ಸವಾರರಿಗೂ ಸಮಸ್ಯೆ ತಂದೊಡ್ಡುತ್ತದೆ. ಇನ್ನು ಬಸ್ಸಿಗಾಗಿ ನಿಲ್ಲುವವರ ಸ್ಥಿತಿ ಕೇಳುವುದೇ ಬೇಡ.

ಮಾಣಿಯಲ್ಲಿ ಸಮಸ್ಯೆ ಗೊತ್ತಾಗಬೇಕಷ್ಟೇ ಮಾಣಿಯಲ್ಲಿ ಈಗಿರುವ ಸರ್ವೀಸ್ ರಸ್ತೆಯನ್ನು ಸ್ಥಳೀಯರು ಮನವಿ ಮಾಡಿಕೊಂಡ ಬಳಿಕ ಅಭಿವೃದ್ಧಿಪಡಿಸಲಾಗಿದೆ. ಆದರೆ ಅಂಡರ್ ಪಾಸ್ ನ ಅಡಿಯಲ್ಲಿ ಕೆಸರುಮಿಶ್ರಿತ ಮಣ್ಣು ಇದೆ. ಸದ್ಯಕ್ಕೆ ಇದು ಪಾರ್ಕಿಂಗ್ ಜಾಗವಾಗಿಯೂ ಪರಿಣಮಿಸಿದೆ. ಭವಿಷ್ಯದಲ್ಲಿ ಪುತ್ತೂರಿಗೆ ತೆರಳುವ ವಾಹನಗಳು ಅಂಡರ್ಪಾಸ್ ಮೂಲಕವೇ ಸಾಗುವಂತಾದಾಗ ಸಮಸ್ಯೆಯ ಅರಿವಾಗಬಹುದು.

ಮಾಣಿಯಲ್ಲಿ ಮಳೆ ಬರುವ ಸಂದರ್ಭ ರಸ್ತೆ ಬದಿಯಲ್ಲಿ ಬಸ್ಸಿಗೆ ನಿಲ್ಲುವವರು ಹಾಗು ಪಾದಚಾರಿಗಳು ತೊಂದರೆ ಅನುಭವಿಸಬೇಕಾಗುತ್ತದೆ. ಮಾಣಿಯಲ್ಲಿ ಮಳೆ ನೀರು ಹೋಗಲು ಮಂಗಳೂರು ಕಡೆಗೆ ಹೋಗುವ ರಸ್ತೆಯಲ್ಲಿ ಬಸ್ ನಿಲ್ದಾಣದಿಂದ ಪದ್ಮಾ ಮಾಲ್ ವರೆಗೆ ಯಾವುದೇ ತೋಡು ಮಾಡಿಲ್ಲ. ಹೀಗಾಗಿ ರಸ್ತೆಯಲ್ಲೇ ನೀರು ಹರಿಯುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

 

ಕಲ್ಲಡ್ಕ ಪೇಟೆಯಲ್ಲಿ ಕಳೆದ ವರ್ಷ ಮಳೆ ಬಂದ ಸಂದರ್ಭವೇ ಹೊಳೆಯಂತಾಗಿತ್ತು. ಇದೀಗ ಎರಡೂ ಬದಿಯಲ್ಲಿ ಸರ್ವೀಸ್ ರಸ್ತೆಗಳು ನಿರ್ಮಾಣಗೊಂಡಿದ್ದು, ಕೆಸರುಮಿಶ್ರಿತ ಮಣ್ಣಿನ ಲೇಪನವಿದ್ದರೂ ಹೊಂಡಗಳು ಇನ್ನೂ ಎದ್ದಿಲ್ಲ. ಸ್ಥಳೀಯ ವರ್ತಕರ ಪ್ರಕಾರ, ಈಗಿನ ಸ್ಥಿತಿ ಧೂಳಿನ ಸನ್ನಿವೇಶಕ್ಕಿಂತ ಬೆಟರ್. ಆದರೆ ಫ್ಲೈಓವರ್ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಸುವ್ಯವಸ್ಥಿತವಾಗಿ ಮುಗಿದರೆ, ಸಮಸ್ಯೆ ಬಗೆಹರಿಯಬಹುದು ಎಂಬ ನಿರೀಕ್ಷೆ ಜನರಿಗಿದೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.