ಕಲ್ಲಡ್ಕ

ಸ್ವತ್ವದ ಆಧಾರದ ಮೇಲೆ ಭಾರತದ ಪುನರುತ್ಥಾನ: ಕಲ್ಲಡ್ಕದಲ್ಲಿ ರಾಷ್ಟ್ರೀಯ ವಿಚಾರಸಂಕಿರಣ

ಜಾಹೀರಾತು

 ‘’ಸ್ವತ್ವ’’ದ ಆಧಾರದ ಮೇಲೆ ಭಾರತದ ಪುನರುತ್ಥಾನ ಎಂಬ ವಿಚಾರದ ಕುರಿತು ರಾಷ್ಟ್ರೀಯ ವಿಚಾರಸಂಕಿರಣ ಬಂಟ್ವಾಳ ತಾಲೂಕಿನ ಕಲ್ಲಡ್ಕದ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆಯಿತು.

ಈ ವಿಚಾರ ಸಂಕಿರಣದಲ್ಲಿ ಒಟ್ಟು 59 ಸಂಸ್ಥೆಗಳಿಂದ 228 ಶಿಕ್ಷಕ ಪ್ರಾಧ್ಯಾಪಕ ವರ್ಗದವರು 485 ವಿದ್ಯಾರ್ಥಿಗಳು 167 ಇತರ ಪ್ರತಿನಿಧಿಗಳು ಸೇರಿ 880 ಮಂದಿ ಭಾಗವಹಿಸಿದ್ದರು. ತಾಂತ್ರಿಕ ಶಿಕ್ಷಣ,  ಸ್ನಾತಕೋತ್ತರ ವಿಭಾಗ,  ಆರೋಗ್ಯ ವಿವಿ, ಕಾನೂನು ವಿವಿ, ಕೇಂದ್ರೀಯ ವಿವಿ, ಸಂಸ್ಕೃತ ವಿವಿ, ಅಲ್ಲದೆ ಬಿಎಡ್, ಪಾಲಿಟೆಕ್ನಿಕ್, ಗುರುಕುಲ ಪ್ರೌಢಶಾಲೆ ಪದವಿಪೂರ್ವ ಕಾಲೇಜುಗಳ ಶಿಕ್ಷಕ ವರ್ಗದವರು ಭಾಗವಹಿಸಿದ್ದರು. ಮಂಗಳೂರು ,ಶಿವಮೊಗ್ಗ, ಮೈಸೂರು, ಬೆಂಗಳೂರು, ಕಣ್ಣೂರು ಹಾಗೂ 5 ಖಾಸಗಿ ವಿಶ್ವವಿದ್ಯಾಲಯಗಳು ಪ್ರತಿನಿಧಿತವಾಗಿತ್ತು.

ಪತ್ರಕರ್ತ ಅಜಿತ್ ಹನುಮಕ್ಕನವರ್ ಉದ್ಘಾಟಿಸಿ ಸ್ವತ್ವಯುತ ಭಾರತದ ಒಂದು ವಿವೇಚನೆ ವಿಷಯದ ಕುರಿತು ಮಾತನಾಡಿ, ಭಾರತವನ್ನು ಹಾಳುಮಾಡಲು ಹೊರಗಿನವರಿಗಂತೂ ಸಾಧ್ಯವಿಲ್ಲ ಆದರೆ ಒಳಗಿನವರೇ ವ್ಯತ್ಯಾಸಗಳನ್ನು ಮಾಡಬಲ್ಲರಷ್ಟೇ ಎಂದರು. ಭಾರತ ಅಮೃತಕಾಲದ ಹತ್ತಿರದಲ್ಲಿದೆ ಎಂದರು.

ಅಧ್ಯಕ್ಷತೆಯನ್ನು ಶ್ರೀರಾಮ ವಿದ್ಯಾಕೇಂದ್ರ ಅಧ್ಯಕ್ಷ ನಾರಾಯಣ ಸೋಮಯಾಜಿ ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪುತ್ತೂರು ವಿವೇಕಾನಂದ ವಿದ್ಯಾಕೇಂದ್ರದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಭಾರತ ಧರ್ಮ ಆಧಾರದ ಮೇಲೆ ಬೆಳೆಯುತ್ತಿದ್ದು, “ಸ್ವ” ದ ಚಿಂತನೆ,ಯೋಚನೆ ಬಂದಾಗ ಬದಲಾವಣೆಗೆ ಕಾರಣವಾಗಬಹುದು ಎಂಬ ನಿಟ್ಟಿನಲ್ಲಿ ವಿಚಾರವನ್ನಿಟ್ಟುಕೊಂಡು ಸಂಕಿರಣ ಅಯೋಜಿಸಿದ್ದೇವೆ ಎಂದು ತಿಳಿಸಿದರು

ಶಿವಮೊಗ್ಗದ ವಿಶ್ರಾಂತ ಪ್ರಾಚಾರ್ಯ ಪ್ರೊ.ಬಿ.ಎಂ.ಕುಮಾರಸ್ವಾಮಿ ಮಾತನಾಡಿ, ಭಾರತೀಯ ಅಭಿವೃದ್ಧಿ ಮಾದರಿಗಳನ್ನು ಕಾರ್ಲ ಮಾರ್ಕ್ಸ್ , ಮ್ಯಾಕ್ಸ್ ವೆಬ್ಬರ್ ಮೊದಲಾದ ಪಾಶ್ಚಿಮಾತ್ಯ ಆರ್ಥಿಕ ತಜ್ಞರ ವಿಚಾರಗಳು ಜಾಗತಿಕವಾಗಿ ವಿಫಲಗೊಂಡಿವೆ. ಭಾರತದ ಹಿಂದುತ್ವ ಮತ್ತು ಅಭಿವೃದ್ಧಿ ಆರ್ಥಿಕತೆಯು ಸುಸ್ಥಿರ ಅಭಿವೃದ್ಧಿಗೆ ಮಾದರಿಯಾಗಿz. ಆದ್ಯಾತ್ಮಿಕ ಮತ್ತು ಲೌಕಿಕ ಅಯಾಮವು ಭಾತರದ ಆರ್ಥಿಕತೆಗೆ ಮೂಲವಾಗಿದೆ  ಎಂದು ವಿವರಿಸಿದರು.

ಅಂಕಣಕಾರ ಚಕ್ರವರ್ತಿ ಸೂಲಿಬೆಲೆ  ಸ್ವಾಮಿ ವಿವೇಕಾನಂದ ಚಿಂತನೆಯ ಪ್ರಸ್ತುತತೆ ಕುರಿತು ಮಾತನಾಡಿ, ಪ್ರತಿಯೊಂದು ವಿಚಾರಕ್ಕೂ ವ್ಯಾಖ್ಯಾನವನ್ನು ನೂರು ದಿಕ್ಕಿನಲ್ಲೂ ಮಾಡಬಹುದು. ವಿವಾದಗಳು ಸಮಾಜದಲ್ಲಿ ಚರ್ಚೆಯನ್ನು ಹುಟ್ಟುಹಾಕಲು, ಸರಿಯಾದ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಲು ಕಾರಣವಾಗಬೇಕು. ನಮ್ಮಲ್ಲಿ ವಿಶ್ವಮಾನವರಿದ್ದಾರೆ, ಅವರಿಗೆ ಭಾರತೀಯತೆಯನ್ನು ಕಂಡರೆ ಆಗುವುದಿಲ್ಲ ಎಂದರು.

ಆಡಳಿತ ಮತ್ತು ನಿರ್ವಹಣೆಯ ಭಾರತೀಯ ಮಾದರಿ ಕುರಿತು ಮಾತನಾಡಿದ ನಿವೃತ್ತ ಸೈನ್ಯಾಧಿಕಾರಿ ಕ್ಯಾ.ಬ್ರಿಜೇಶ್ ಚೌಟ, ಭಾರತದ ಯಶಸ್ವಿ ಆಡಳಿತ ಮಾದರಿಗಳನ್ನು ಸದೃಢಗೊಳಿಸುವ ಪ್ರಯತ್ನಗಳು ಆಗಬೇಕು. ಅದರ ನಂತರ ಹೊಸ ಮಾದರಿಗಳನ್ನು ರೂಪಿಸುವ ಪ್ರಯತ್ನಗಳನ್ನು ಸಮಾಜ ಒಟ್ಟಾಗಿ ಮಾಡಬೇಕು. ನಮ್ಮದು ವಾದ, ವಿವಾದ ಆಧಾರದಲ್ಲೇ ಸಂಸ್ಕೃತಿ ಬೆಳೆಯುತ್ತಾ ಬಂದಿದೆ. ಅದನ್ನು ನೆನಪಿಸುವ ಮೂಲಕ ಭಾರತವನ್ನು ಪುನರುತ್ಥಾನಗೊಳಿಸುವ ಅವಶ್ಯಕತೆ ಇದೆ ಎಂದರು. ಪ್ರಿನ್ಸಿಪಾಲ್ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ಸ್ವಾಗತಿಸಿದರು. ಉಪನ್ಯಾಸಕ ಯತಿರಾಜ್ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು. ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಸಹಸಂಚಾಲಕ ರಮೇಶ್ ಈ ಸಂದರ್ಭ ಉಪಸ್ಥಿತರಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.