ಬಂಟ್ವಾಳ: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳದ ಬಿ.ಸಿ.ರೋಡ್ ನ ಹೃದಯಭಾಗದಲ್ಲಿ ರಸ್ತೆ ಡಿವೈಡರ್ ಗೆ ಕಾರು ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ, ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಕಾರಿನಲ್ಲಿದ್ದ ಉಳಿದವರು ಗಾಯಗೊಂಡಿದ್ದಾರೆ.
ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಬಿ.ಸಿ.ರೋಡಿನ ಕೊಡಂಗೆ ನಿವಾಸಿ ಸದಾಶಿವ ಆಚಾರ್ಯ (77) ಸಾವನ್ನಪ್ಪಿದವರು.
ಅವರ ಮೊಮ್ಮಗ ಚಾಲಕ ಅಕಾಶ್, ಅಳಿಯ ಸುರೇಶ್ ಆಚಾರ್ಯ, ಮಗ ಗಣೇಶ್ ಆಚಾರ್ಯ ಅವರು ಅಲ್ಪಸ್ವಲ್ಪ ಗಾಯಗಳಿಂದ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.
ಪುತ್ತೂರಿನಲ್ಲಿ ಕಾರ್ಯಕ್ರಮವೊಂದನ್ನು ಮುಗಿಸಿ ಮರಳುತ್ತಿರುವ ವೇಳೆ ಈ ಅಪಘಾತ ಸಂಭವಿಸಿದೆ. ಬಿಸಿರೋಡಿನ ಅಜ್ಜಿಬೆಟ್ಟು ಕ್ರಾಸ್ ಸಮೀಪ ಈ ಅವಘಡ ಸಂಭವಿಸಿದೆ.
ಕಾರಿನಲ್ಲಿ ಚಾಲಕ ಸೇರಿ ನಾಲ್ಕು ಜನ ಒಂದೇ ಮನೆಯವರು ಪ್ರಯಾಣಿಸುತ್ತಿದ್ದರು.
ಪುತ್ತೂರು ಸಂಬಂಧಿಕರ ಮನೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಮನೆಗೆ ಇನ್ನೇನು ಕೇವಲ 5 ನಿಮಿಷಗಳ ಕಾಲದಲ್ಲಿ ತಲುಪುವ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಂಭೀರವಾಗಿ ತಲೆಗೆ ಗಾಯವಾಗಿದ್ದ ಸದಾಶಿವ ಅವರನ್ನು ಕೈಕಂಬ ಪರ್ಲಿಯಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಮೃತಪಟ್ಟ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ. ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಎಸ್.ಐ.ಮೂರ್ತಿ ಅವರು ಬೇಟಿ ನೀಡಿದರು. ಮೃತ ಸದಾಶಿವ ಆಚಾರ್ಯ ಅವರು ಪತ್ನಿ, 4 ಗಂಡು ಹಾಗೂ 5 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…