ಸುದ್ದಿಗಳು

ಸಲಾಂ ಮಂಗಳಾರತಿ ಹೆಸರು ಬದಲು: ಇನ್ನು ಮುಂದೆ ‘ಆರತಿ ನಮಸ್ಕಾರ’: ರಾಜ್ಯ ಧಾರ್ಮಿಕ ಪರಿಷತ್ತು ತೀರ್ಮಾನ

ಕೊಲ್ಲೂರು ಸಹಿತ ವಿವಿಧ ದೇವಸ್ಥಾನಗಳಲ್ಲಿ ಈ ಹಿಂದೆ ಸಲಾಂ ಮಂಗಳಾರತಿ ಎಂಬ ಹೆಸರಿನಲ್ಲಿ ಸೇವೆಗಳು ನಡೆಯುತ್ತಿದ್ದು, ಅದರ ಹೆಸರು ಬದಲಾಯಿಸಲು ರಾಜ್ಯ ಧಾರ್ಮಿಕ ಪರಿಷತ್ತು ತೀರ್ಮಾಸಿದೆ ಎಂದು ಅದರ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ತಿಳಿಸಿದ್ದಾರೆ.

ಜಾಹೀರಾತು

ಈ ಕುರಿತು ಮಾತನಾಡಿದ ಅವರು, ಹಿಂದೆ ಟಿಪ್ಪು ಸುಲ್ತಾನ್ ಆಳ್ವಿಕೆ ಸಂದರ್ಭ ದೇವಸ್ಥಾನಗಳಲ್ಲಿ ತನ್ನ ಆಡಳಿತಕ್ಕೆ ಒಳ್ಳೆಯದಾಗಲೆಂದು ಸಲಾಂ ಮಂಗಳಾರತಿ ಹೆಸರಲ್ಲಿ ಸೇವೆ ಮಾಡಿಸಿಕೊಳ್ಳುತ್ತಿದ್ದ. ಆ ಪದ್ಧತಿ ಹಾಗೆಯೇ ಮುಂದುವರಿಯಿತು. ಆದರೆ ಇಂದು ಕೇವಲ ರಾಜ್ಯಾಡಳಿತಕ್ಕಷ್ಟೇ ಅಲ್ಲ, ಪ್ರಜೆಗಳಿಗೂ ಒಳಿತಾಗಲೆಂದು ಹಾಗೂ ಸಲಾಂ ಎಂಬುದರ ಬದಲಾಗಿ ನಮಸ್ಕಾರ ಎಂಬ ಹೆಸರನ್ನು ಇಟ್ಟುಕೊಂಡು ಆ ಸೇವೆ ನಡೆಸಲಾಗುತ್ತದೆ ಎಂದು ಭಟ್ ಹೇಳಿದರು.

ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಅಧೀನಕ್ಕೆ ಒಳಪಟ್ಟ ದೇವಸ್ಥಾನಗಳಲ್ಲಿ ದೀವಟಿಗೆ, ಪಂಜು, ದೊಂದಿ ಹಿಡಿದು ದೇವಾಲಯಕ್ಕೆ ಮತ್ತು ದೇವರಿಗೆ ಆರತಿ ನಡೆಸುವ ದೀವಟಿಗೆ ಸಲಾಂ, ಸಲಾಂ ಆರತಿ ಎಂಬ ಹೆಸರಿನಲ್ಲಿ ಕರೆಯಲಾಗುತ್ತಿತ್ತು. ಸಲಾಂ ಎಂಬ ಪದವನ್ನು ತೆಗೆದು ಸಂಸ್ಕೃತ ಭಾಷೆಯ ಪದದಿಂದ ಸೇವಾ ಕಾರ್ಯಗಳನ್ನು ನಡೆಸಲು ಸೂಚಕವಾಗುವಂತೆ ಹೆಸರುಗಳನ್ನು ಸರಿಪಡಿಸಲು ಪರಿಷತ್ತಿನ ಸಭೆಯಲ್ಲಿ ಸದಸ್ಯರು ಪ್ರಸ್ತಾಪಿಸಿದ್ದರು. ಸೇವೆಗಳು ಹಾಗೆಯೇ ಮುಂದುವರಿಯುತ್ತವೆ ಎಂದರು.

ಮುಜರಾಯಿ ಎಂಬ ಶಬ್ದವೂ ನಮ್ಮದಲ್ಲ ಎಂದು ಹೇಳಿದ ಭಟ್, ಇನ್ನು ಮುಂದೆ ಧಾರ್ಮಿಕ ಸಂಸ್ಥೆಗಳು ಧರ್ಮದಾಯದತ್ತಿ ಎಂಬ ಹೆಸರಲ್ಲೇ ಇಲಾಖೆಯನ್ನು ಸಂಬೋಧಿಸಬೇಕು ಎಂಬ ತೀರ್ಮಾನವನ್ನು ರಾಜ್ಯ ಧಾರ್ಮಿಕ ಪರಿಷತ್ತು ಕೈಗೊಂಡಿದೆ ಎಂದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.