ವಿಶ್ರಾಂತ ಪ್ರಾಧ್ಯಾಪಕ, ಹಿರಿಯ ಪತ್ರಕರ್ತ, ಅಂಕಣಕಾರ, ಕವಿ ಸಾಹಿತಿ ಪ್ರೊ. ವಿ.ಬಿ. ಅರ್ತಿಕಜೆಯವರು 2022 ರ ಕನ್ನಡದ ಕಲ್ಹಣ ನೀರ್ಪಾಜೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ವಿದ್ವಾಂಸರಾಗಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮತ್ತು ಪತ್ರಕರ್ತರೂ ಆಗಿದ್ದ ದಿ. ನೀರ್ಪಾಜೆ ಭೀಮ ಭಟ್ಟರ ಹೆಸರಿನಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ.
ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ಡಿ.11 ರಂದು ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಪ್ರಶಸ್ತಿ ಪ್ರಧಾನ ಮಾಡಲಿರುವರು. ಹಿರಿಯ ವಿದ್ವಾಂಸ ಹಿರಣ್ಯ ವೆಂಕಟೇಶ್ವರ ಭಟ್ ಅಭಿನಂದನಾ ಭಾಷಣ ಮಾಡುವರು. ಉದ್ಯಮಿ ಸುದರ್ಶನ ಪಡಿಯಾರ್ ವಿಟ್ಲ ಸಂಸ್ಮರಣೆ ನಡೆಸಿಕೊಡಲಿರುವರು.
ಮಾಜಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಸೇಸಪ್ಪ ಕೊಟ್ಯಾನ್, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ ಕಲ್ಕೂರ, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ ಉಪಸ್ಥಿತರಿರುವರು.
ಬಿ.ಸಿ.ರೋಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದ ವಠಾರದಲ್ಲಿ ನೀರ್ಪಾಜೆ ಭೀಮ ಭಟ್ಟರ ಅಭಿಮಾನಿ ಬಳಗ ಪಾಣೆಮಂಗಳೂರು ವತಿಯಿಂದ ಆಮಂತ್ರಣ ಪ್ರತಿಕೆಯನ್ನು ಹಿರಿಯರಾದ ಎ.ಸಿ.ಭಂಡಾರಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ನೀರ್ಪಾಜೆ ಭೀಮ ಭಟ್ಟರ ಅಭಿಮಾನಿ ಬಳಗ ಪಾಣೆಮಂಗಳೂರು ಅಧ್ಯಕ್ಷ ಸುದರ್ಶನ್ ಜೈನ್ , ಉಪಾಧ್ಯಕ್ಷ ಶಿವಶಂಕರ್ ನಂದಾವರ, ಸಂಚಾಲಕ ಕೊಯಿಲ ಮೋಹನ್ ರಾವ್ , ಕೈಯೂರು ನಾರಾಯಣ ಭಟ್, ಜಯಾನಂದ ಪೆರಾಜೆ, ಸುಭಾಶ್ಚಂದ್ರ ಜೈನ್, ಮಂಜು ವಿಟ್ಲ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…