ಕವರ್ ಸ್ಟೋರಿ

ಶಾಲೆಯಲ್ಲೇ ಅಡಕೆ ಬೆಳೆದು ಮಕ್ಕಳಿಗಾಗಿ ಬಸ್ ಖರೀದಿಸಿದರು!!

ಹರೀಶ ಮಾಂಬಾಡಿ, ಬಂಟ್ವಾಳನ್ಯೂಸ್

ಬಂಟ್ವಾಳ: ತೋಟದಿಂದ ಬಂದ ಆರ್ಥಿಕ ಆದಾಯದಿಂದ ಸರ್ಕಾರಿ ಶಾಲೆಯೊಂದು ಬಸ್ ಖರೀದಿ ಮಾಡಿ ಗಮನ ಸೆಳೆದಿದೆ. ಮಿತ್ತೂರಿನಲ್ಲಿರುವ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅದರಿಂದ ಲಭ್ಯವಾದ ಆದಾಯದಿಂದ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಲು ಬಸ್ ಖರೀದಿಸಿದೆ. ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಈ ಶಾಲೆಗೆ ಆಗಮಿಸಿದ ಶಾಸಕ ಸಂಜೀವ ಮಠಂದೂರು ಬಸ್ ಗೆ ಚಾಲನೆ ನೀಡಿ, ಶಾಲೆಗೆ ಮತ್ತಷ್ಟು ನೆರವುಗಳನ್ನು ಘೋಷಿಸಿದರು.

ಶಾಲೆ ಸುಮಾರು 4.15 ಎಕರೆಯಷ್ಟು ಜಾಗವನ್ನು ಹೊಂದಿದ್ದು, ಅದರಲ್ಲಿ ಒಂದು ಎಕರೆಯಷ್ಟು ಪೂರ್ತಿ ಅಡಕೆ ತೋಟವನ್ನೇ ಹೊಂದಿದೆ. ಅಲ್ಲದೆ ಇತರೆಡೆಗಳಲ್ಲೂ ಅಡಕೆ ಗಿಡ ನೆಡಲಾಗಿದೆ. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಆದಂ ಮಿತ್ತೂರು ಅವರು ಇತರ ಎಸ್.ಡಿ.ಎಂ.ಸಿ. ಸದಸ್ಯರ ಜತೆಗೂಡಿ ಕೆಲ ವರ್ಷಗಳ ಹಿಂದೆ ಸ್ವತಃ ಧನಸಹಾಯ ಮಾಡುವ ಮೂಲಕ ಶಾಲಾಭಿವೃದ್ಧಿ ಜತೆಗೆ ಕೈತೋಟದ ಅಭಿವೃದ್ಧಿಗೆ ಕಾರ್ಯೋನ್ಮುಖರಾದರು. 2017ರಲ್ಲಿ ನೆಟ್ಟ 628 ಗಿಡಗಳು ಈಗ ಮರವಾಗಿವೆ. ಐದು ವರ್ಷಗಳ ಫಲವನ್ನು ಶಾಲಾ ಮಕ್ಕಳು ಪಡೆಯುತ್ತಿದ್ದಾರೆ ಎಂದು ಇಲ್ಲಿನ ಶಿಕ್ಷಕ ಸಂಜೀವ ಎನ್. ತಿಳಿಸಿದ್ದಾರೆ.

ಜಾಹೀರಾತು

ಕಳೆದ ವರ್ಷ ಅಡಕೆ ತೋಟ ಫಸಲು ನೀಡಲಾರಂಭಿಸಿತು. ಶಾಲೆಯ ಮೇಲೆ ಪ್ರೀತಿಯಿಟ್ಟ ಊರವರು ತೋಟವನ್ನು ನೋಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಬಸ್ ಖರೀದಿಗೆ ನಿಧಿಸಂಚಯವಾಯಿತು ಎಂದು ಶಾಲೆ ಮುಖ್ಯೋಪಾಧ್ಯಾಯಿನಿ ಸರೋಜಾ ಎ.ತಿಳಿಸಿದರು.  ಸುತ್ತಮುತ್ತಲಿನ ಸುಮಾರು 118 ಮಕ್ಕಳು ಇಲ್ಲಿಗೆ ಆಗಮಿಸುತ್ತಿದ್ದಾರೆ. ಇರುವರೆಗೆ ಆಟೊಗಳಲ್ಲಿ ಬರುತ್ತಿದ್ದರು. ಇನ್ನು ಬಸ್ಸಿನಲ್ಲಿ ಎರಡು ಟ್ರಿಪ್ ಗಳನ್ನು ಮಾಡುವ ಮೂಲಕ ಬರಲು ಸಾಧ್ಯ. ಮೂರು ವರ್ಷಗಳ ಹಿಂದೆ ಎಸ್.ಡಿ.ಎಂ.ಸಿ.ಯೇ ಆಟೊ ರಿಕ್ಷಾ ಬಾಡಿಗೆ ಗೊತ್ತು ಮಾಡಿ ಮಕ್ಕಳನ್ನು ಕರೆತರುವ ವ್ಯವಸ್ಥೆ ಮಾಡಿತ್ತು. ಇದೀಗ ಸೆಕೆಂಡ್ ಹ್ಯಾಂಡ್ ಬಸ್ ಖರೀದಿಯಾಗಿದೆ. ಇದರ ಖರ್ಚುವೆಚ್ಚವನ್ನು ಪೋಷಕರು ಸಮಾನವಾಗಿ ಭರಿಸಲಿದ್ದಾರೆ ಎಂದು ಮುಖ್ಯೋಪಾಧ್ಯಾಯಿನಿ ಸರೋಜಾ ಹೇಳಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.