ವಿಟ್ಲ

ಹಲವು ಸೇವಾ ಕಾರ್ಯಕ್ರಮಗಳೊಂದಿಗೆ ಗ್ರಾಮೋತ್ಸವ: ಒಡಿಯೂರು ಶ್ರೀಗಳ ಜನ್ಮದಿನೋತ್ಸವ ಅರ್ಥಪೂರ್ಣ ಆಚರಣೆ

ಬಂಟ್ವಾಳ: ಅಹಂಕಾರರಹಿತ ಸೇವೆ ಭಗವಂತನನ್ನು ತಲುಪುತ್ತದೆ, ಅರಿತು ಮಾಡುವ ಸೇವೆ, ಕ್ರಿಯಾಶೀಲರಾಗಿರುವ ಶಾಸಕರು ಇದ್ದರೆ ದೇಶದ ಅಭಿವೃದ್ಧಿ ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನ ಶ್ರೀ ಗುರುದೇವಾನಂದ ಸ್ವಾಮೀಜಿ ಸಂದೇಶ ನೀಡಿದ್ದಾರೆ.

ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿ ವತಿಯಿಂದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನಲ್ಲಿ ಶ್ರೀಗಳವರ ಜನ್ಮದಿನೋತ್ಸವ ಮತ್ತು ಗ್ರಾಮೋತ್ಸವ ೨೦೨೨-ಗುರುವಂದನ ಕಾರ್ಯಕ್ರಮ ಹಾಗೂ ಶ್ರೀಮಾತಾ ಅನ್ನಛತ್ರ ಉದ್ಘಾಟನಾ ಸಮಾರಂಭ ಸೋಮವಾರ ನಡೆಯಿತು.

ಈ ಸಂದರ್ಭ ಆಶೀರ್ವಚನ ನೀಡಿದ ಅವರು, ತ್ಯಾಗ ಮತ್ತು ಸೇವೆ ಬದುಕಿನಲ್ಲಿ ಬಹುಮುಖ್ಯ. ಕ್ರಿಯಶೀಲ ಶಾಸಕರಿದ್ದಾಗ ಕ್ಷೇತ್ರಾಭಿವೃದ್ಧಿ ಕ್ಷಿಪ್ರವಾಗಿ ನಡೆಯುತ್ತದೆ. ಅರಿವಿನೊಂದಿಗೆ ಮಾಡುವ ಸೇವೆ ದೇವರಿಗೆ ಪ್ರಿಯವಾದುದು. ತಿಳಿದು ಸೇವೆ ಮಾಡುವ ಮನಸ್ಸು ನಮ್ಮದಾಗಬೇಕು. ನಮ್ಮನ್ನು ಆತ್ಮಾವಲೋಕನ ಮಾಡುವ ಕೆಲಸ ನಮ್ಮಿಂದಲೇ ಆಗಬೇಕು. ಇಂದಿನ ಕಾಲಸ್ಥಿತಿಯ ಬಗ್ಗೆ ನಾವು ತಿಳಿದುಕೊಳ್ಳುವ ಅಗತ್ಯವಿದೆ. ಕ್ರಿಯಾಶೀಲ ಕೆಲಸ ಮಾಡುವ ಮಂದಿ ನಮ್ಮೊಂದಿಗಿದ್ದರೆ ಯಶಸ್ಸು ಖಂಡಿತ. ದಾನ ಗುಣ ನಮ್ಮಲ್ಲಿದ್ದಾಗ ಸಂಪತ್ತಿಗೆ ಮೌಲ್ಯ ಬರಲು ಸಾಧ್ಯ. ಜೀವನದಲ್ಲಿ ಮಾಡುವ ಪಾಪ, ಪುಣ್ಯ ನಮ್ಮನ್ನು ಕಾಪಾಡುತ್ತದೆ. ಸತ್ಕರ್ಮದಿಂದ ಸೇವೆ ಮಾಡುವ ಮನಸ್ಸು ನಮ್ಮದಾಗಬೇಕು. ಜನರ ಪ್ರೀತಿ ಎಂಬ ದೊಡ್ಡ ನಿಧಿ ನನಗೆ ದೊರಕಿದೆ. ಸಂತನ ಬದುಕು ಸಮಾಜದ ಹಿತಕ್ಕೆ ಎಂದರು.

ಜಾಹೀರಾತು

ಮುಂಬೈನ ಉದ್ಯಮಿ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿಯ ಗೌರವಾಧ್ಯಕ್ಷ ಸದಾಶಿವ ಶೆಟ್ಟಿ ಕುಳೂರುಕನ್ಯಾನ ಶ್ರೀಮಾತಾ ಅನ್ನಛತ್ರ ಉದ್ಘಾಟಿಸಿ ಮಾತನಾಡಿ ಹಿರಿಯರು ನೀಡಿದ ಸಂಸ್ಕೃತಿಯನ್ನು ಪೋಷಿಸಿ ಬೆಳೆಸಿ, ಒಡಿಯೂರು ಕ್ಷೇತ್ರವನ್ನು ಬೆಳಗಿದವರು ಶ್ರೀಗಳು ಎಂದರು.

ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿ ಪರಿವರ್ತನೆಯ ಹರಿಕಾರರಾಗಿ ಒಡಿಯೂರು ಒಡಿಯೂರು ಶ್ರೀಗಳು ಗಮನ ಸೆಳೆದಿದ್ದು, ಅವರು ಹೃದಯ ವೈಶಾಲ್ಯತೆ ಇರುವ ಓರ್ವ ಸಂತ ಎಂದು ಕ್ಷೇತ್ರದೊಂದಿಗಿನ ತನ್ನ ಒಡನಾಟವನ್ನು ಸ್ಮರಿಸಿದರು.
ಒಡಿಯೂರು ಸಾಧ್ವಿ ಶ್ರೀ ಮಾತಾನಂದಮಯಿ ದಿವ್ಯ ಸಾನಿಧ್ಯ ವಹಿಸಿದ್ದರು.

ಮೆರವಣಿಗೆ ಮೂಲಕ ಸ್ವಾಮೀಜಿಯವರನ್ನು ವೇದಿಕೆಗೆ ಕರೆತರಲಾಯಿತು.

ವಿಶೇಷ ಆಹ್ವಾನಿತರಾಗಿ ಆರೆಸ್ಸೆಸ್ ನ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಿ.ಎಸ್. ಪ್ರಕಾಶ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಪುತ್ತೂರು ಶಾಸಕ ಸಂಜೀವ ಮಠಂದೂರು, ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್, ಮುಲ್ಕಿ ಮೂಡುಬಿದಿರೆ ಶಾಸಕ ಉಮಾನಾಥ ಎ.ಕೋಟ್ಯಾನ್, ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ವೈ, ಮಂಗಳೂರು ವಿವಿ ಕಾಲೇಜು ಪ್ರಿನ್ಸಿಪಾಲ್ ಡಾ. ಅನಸೂಯಾ ಕಿಶೋರ್ ಶೆಟ್ಟಿ, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ವಾಮಯ್ಯ ಬಿ.ಶೆಟ್ಟಿ, ಪ್ರವೀಣ್ ಭೋಜ ಶೆಟ್ಟಿ, ದಯಾನಂದ ಹೆಗ್ಡೆ, ಶಶಿಧರ ಶೆಟ್ಟಿ ಬರೋಡಾ, ಪುರುಷೋತ್ತಮ ಶೆಟ್ಟಿ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಲೋಕನಾಥ ಜಿ.ಶೆಟ್ಟಿ ತಾಳಿಪ್ಪಾಡಿಗುತ್ತು, ಒಡಿಯೂರು ಶ್ರೀ ವಿವಿಧೋದ್ದೇಶ ಸಹಕಾರಿ ಅಧ್ಯಕ್ಷ ಸುರೇಶ್ ರೈ ಭಾಗವಹಿಸಿದ್ದರು. ಜನ್ಮದಿನೋತ್ಸವ ಸಮಿತಿ ಅಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ ಸ್ವಾಗತಿಸಿದರು. ಬಾಲಪ್ರತಿಭಾ ಪುರಸ್ಕಾರವನ್ನು ಚಿಂತನ್ ಎಸ್.ಶೆಟ್ಟಿ ಮತ್ತು ಸಾನ್ವಿ ಸಿ.ಎಸ್. ಅವರಿಗೆ ನೀಡಲಾಯಿತು. ಸಮಿತಿಯ ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
ಬೆಳಗ್ಗೆ ಶ್ರೀ ಗಣಪತಿ ಹವನ, ಮಹಾಪೂಜೆ, ಬಳಿಕ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಅವರಿಂದ ಭಜನಾ ಸತ್ಸಂಗ, ರಾಜಾಂಗಣಕ್ಕೆ ಶ್ರೀಗಳ ಶೋಭಾಯಾತ್ರೆ, ನಂತರ ಪಾದಪೂಜೆ, ಅಡಕೆಯಲ್ಲಿ ತುಲಾಭಾರ, ಉಯ್ಯಾಲೆಸೇವೆ, ಗುರುವಂದನೆ ಕಾರ್ಯಕ್ರಮಗಳು ನೆರವೇರಿದವು. ರಾತ್ರಿ ಶ್ರೀ ಸನ್ನಿಧಿಯಲ್ಲಿ ವಿಶೇಷ ರಂಗಪೂಜೆ, ಬೆಳ್ಳಿರಥೋತ್ಸವ ಸೇವೆ ನಡೆದವು.

ವಿಕಲಚೇತನರಿಗೆ ಒಟ್ಟು ೨೦ ಗಾಲಿಕುರ್ಚಿ(ವ್ಹೀಲ್‌ಚಯರ್), ೨೨ ಕೃತಕ ಕಾಲು, ೨ ಕೃತಕ ಕೈ ೨ ಕೃತಕ ಕೈ ಮತ್ತು ಕಾಲು, ೨ ಕ್ಯಾಲಿಪರ್ ೨ ವಾಟರ್ ಬೆಡ್ ವಿತರಣೆ ನಡೆದವು. ವಿವಿಧ ಸಂಘ-ಸಂಸ್ಥೆಗಳಿಂದ ಗುರುವಂದನೆ, ವಿವಿಧ ಆಟೋಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಹಾಗೂ ಕೆಸರುಗದ್ದೆ ಆಟೋಟಗಳ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.