ಪ್ರಮುಖ ಸುದ್ದಿಗಳು

COVID UPDATES: ಈ ವರ್ಷದ ಮೊದಲ ವೀಕೆಂಡ್ ಕರ್ಫ್ಯೂ ಆರಂಭ, ಕೊರೊನಾ ತೊಲಗಲಿ, ಕರ್ಫ್ಯೂ ಇದೇ ಕೊನೆಯಾಗಲಿ ಎನ್ನುತ್ತಾರೆ ಜನಸಾಮಾನ್ಯರು

ಬಂಟ್ವಾಳನ್ಯೂಸ್ ವರದಿ, ಸಂಪಾದಕ: ಹರೀಶ ಮಾಂಬಾಡಿ

www.bantwalnews.com Report ಬಂಟ್ವಾಳನ್ಯೂಸ್ ವರದಿ

ಇನ್ನೆಂದೂ ಇಂಥ ವೀಕೆಂಡ್ ಕರ್ಫ್ಯೂ ಬರುವುದು ಬೇಡ, ಇದೇ ಕೊನೆಯಾಗಲಿ – ಹೀಗೆ ಹಾರೈಸಿದವರು ಆಟೊ ರಿಕ್ಷಾ, ಟ್ಯಾಕ್ಸಿ ಡ್ರೈವರ್ ಗಳು. ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಶನಿವಾರ ಸ್ಟ್ಯಾಂಡ್ ನಲ್ಲಿ ನಿಂತಿದ್ದ ಚಾಲಕ,ಮಾಲಕರ ಬವಣೆ ಹೀಗಾದರೆ, ನಿತ್ಯ ಸಂಪಾದನೆಯಿಂದಲೇ ಬದುಕುವವರ ಕತೆ ಹೇಳತೀರದು. ಜೊತೆಗೆ ಕೊರೊನಾ, ಒಮೈಕ್ರಾನ್ ಎಂಬ ಶಬ್ದಗಳು ಭೀತಿ ಹುಟ್ಟಿಸುತ್ತಿದ್ದರೆ, ಇದೀಗ ವರ್ಷಾರಂಭದಲ್ಲೇ ವೀಕೆಂಡ್ ಕರ್ಫ್ಯೂ ಆರಂಭ. ಶನಿವಾರ ಬಿ.ಸಿ.ರೋಡಿನ ಜನರ ಧ್ವನಿಯೂ ತಾಲೂಕಿನ ಜನರ ಧ್ವನಿಯೂ ಒಂದೇ… ಸಾಕಪ್ಪಾ ಸಾಕು, ಇದೇ ಕೊನೆಯಾಗಲಿ, ಕೊರೊನಾ ಆದಷ್ಟು ಬೇಗ ತೊಲಗಲಿ. ಕೊರೊನಾ ಸಂಖ್ಯೆಯೂ ಏರುಗತಿಯಲ್ಲಿ ಸಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರವೂ ಅನೇಕ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅದರಲ್ಲಿ ಸಂಪೂರ್ಣ ಲಸಿಕಾಕರಣವೂ ಒಂದು.

ಜಾಹೀರಾತು

ಜನವರಿ ತಿಂಗಳಲ್ಲಿ ಬಂಟ್ವಾಳ ತಾಲೂಕಿನಲ್ಲೇ ಜಾತ್ರೆಗಳ ಸುಗ್ಗಿ. ಮದುವೆ ಸಮಾರಂಭಗಳಿಗೆ ಈ ತಿಂಗಳು ತೆರೆದಿರುತ್ತವೆ. ಹಾಗೆಯೇ ವರ್ಷಾರಂಭದಲ್ಲಿ ವ್ಯಾಪಾರ ವಹಿವಾಟು ಚೇತರಿಕೆ ಕಾಣಿಸಿಕೊಳ್ಳಬೇಕು. ಕೊರೊನಾದ ಒಂದನೇ ಅಲೆ, ಎರಡನೇ ಅಲೆ ಸುಮಾರು ಮಾರ್ಚ್ ತಿಂಗಳಲ್ಲಿ ವಕ್ಕರಿಸಿದರೆ, ಈಗ ಮೂರನೇ ಅಲೆಯ ಗುಮ್ಮ ಜನವರಿಗೇ ಕಾಲಿಟ್ಟಿದೆ. ಒಂದೆಡೆ ಲಸಿಕೆ ಅಭಿಯಾನ ಭರದಿಂದ ಸಾಗಿದರೆ, ಮತ್ತೊಂದೆಡೆ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಅಲ್ಲಲ್ಲಿ ವಿವಿಧ ರಾಜ್ಯಗಳಲ್ಲಿ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂನಂಥ ಕ್ರಮಗಳನ್ನು ಹೇರಲಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇಂದು ಇದು ಜಾರಿಯಲ್ಲಿದೆ. ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಬಂಟ್ವಾಳದಲ್ಲಿ ವಿರಳ ಜನಸಂಚಾರ ಶನಿವಾರ ಕಂಡುಬಂದಿದ್ದು,  ಬಸ್, ಆಟೊ, ಟ್ಯಾಕ್ಸಿಗಳು ಎಂದಿನಂತೆಯೇ ಓಡಾಟ ನಡೆಸುತ್ತಿವೆ. ಬಿ.ಸಿ.ರೋಡ್ ಸಹಿತ ಹಲವೆಡೆ ಕೆಲವು ಅಂಗಡಿ, ಮಳಿಗೆಗಳು ತೆರೆದಿದ್ದರೆ, ಇನ್ನು ಕೆಲವು ಬಂದ್ ಆದವು. ಕಳೆದ ಎರಡು ವರ್ಷಗಳ ವೀಕೆಂಡ್ ಕರ್ಫ್ಯೂ ಅನುಭವವಿದ್ದ ಜನರು ಈಗಾಗಲೇ ಸರ್ಕಾರ ಘೋಷಿಸಿದ ವರ್ಷಾರಂಭದ ಕರ್ಫ್ಯೂಗೆ ಹೊಂದಿಕೊಂಡಿದ್ದಾರೆ. ಬಸ್ಸುಗಳಲ್ಲೂ ಜನರ ಸಂಖ್ಯೆ ಕಡಿಮೆ ಇದ್ದರೆ, ಕಚೇರಿಗಳಿಗೆ ತೆರಳುವವರು ಎಂದಿನಂತೆಯೇ ಆಗಮಿಸಿದರು. ಅಲ್ಲಲ್ಲಿ ಪೊಲೀಸರು ನಿಂತುಕೊಂಡು ಜನಸಂಚಾರದ ಮೇಲೆ ನಿಗಾ ಇರಿಸಿದರು. ಗ್ರಾಮೀಣ, ನಗರ ಪ್ರದೇಶಗಳಿಗೆ ತೆರಳುವ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳ ಓಡಾಟ ಕಂಡುಬಂತು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.