ವಿಶೇಷ ವರದಿ

ಸಂಬಂಧಪಟ್ಟವರ ಗಮನಕ್ಕೆ…ಬಿಸಿಲಿಗೆ ಹೊಳೆಯುವ, ಮಳೆಗೆ ಹೊಳೆಯಾಗುವ ಜಾಗವಿದು. ಹೆಸರು: ಮಂಗಳೂರು – ಬಿ.ಸಿ.ರೋಡ್ ಹೆದ್ದಾರಿ

ಕಿವಿಗಡಚಿಕ್ಕುವಂತೆ ಸಿಡಿಲ ಸದ್ದು, ಗುಡುಗು, ಮಿಂಚಿನೊಂದಿಗೆ ಧಾರಾಕಾರ ಮಳೆ ಗುರುವಾರ ಸುರಿಯಿತು. ಕೆಲ ದಿನಗಳಿಂದ ಈ ಮಳೆ ಸಂಜೆ, ರಾತ್ರಿಯ ಹೊತ್ತು ಸುರಿಯುತ್ತಲೇ ಉಂಟು. ಆದರೆ ಸುಸಜ್ಜಿತ ಎಂದು ಹೇಳಲಾಗುವ ರಾಷ್ಟ್ರೀಯ ಹೆದ್ದಾರಿ ಮಾತ್ರ ಹೆಸರಿಗಷ್ಟೇ ಥಳಕು, ಮಳೆ ಬಂದರೆ ಅದರ ಅಸಲಿಯತ್ತು ಗೊತ್ತಾಗುತ್ತದೆ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದು, ಗುರುವಾರ ರಾತ್ರಿ.. ತುಂಬೆಯ ವೃತ್ತಾಕಾರದ ತಿರುವಿನಲ್ಲಿ ಯಾವುದೋ ಹೊಳೆಯ ಮಧ್ಯೆ ಹೋಗುವಂತೆ ವಾಹನಗಳು ಸಂಚರಿಸಿದವು. ಇದು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸ್ವಲ್ಪ ಮುಂದೆ ಬ್ರಹ್ಮರಕೂಟ್ಲುವಿಗೆ ತಲುಪುವಾಗ ಸುಂಕ ವಸೂಲಿಯಾಗುತ್ತದೆ. ಇದ್ಯಾಕೆ ಎಂದರೆ, ನೀವು ಉತ್ತಮವಾದ ರಸ್ತೆಯಲ್ಲಿ ಬಂದಿದ್ದೀರಿ, ಇಷ್ಟು ಉತ್ತಮವಾದ ರಸ್ತೆಯಲ್ಲಿ ಬಂದಾಗ ಅದರ ನಿರ್ವಹಣೆ, ಖರ್ಚು, ವೆಚ್ಚವೆಲ್ಲಾ ಉಂಟು, ಹಾಗಾಗಿ ಸ್ವಲ್ಪ ದುಡ್ಡು ಕೊಡಿ, ನಾವು ಅದ್ಭುತವಾದ ರಸ್ತೆಯನ್ನು ನಿಮಗೆ ಒದಗಿಸುತ್ತೇವೆ ಎಂಬ ಸಂದೇಶವೂ ಈ ಸುಂಕ ವಸೂಲಿಯ ಹಿಂದೆ ಅಡಗಿದೆ. ಹಾಗೆಂದುಕೊಂಡು ಟೋಲ್ ಕೊಟ್ಟು ಮುಂದೆ ಹೋದರೆ, ಬಿ.ಸಿ.ರೋಡಿನ ಪೇಟೆಯಲ್ಲೇ ತೋಡು ಎಲ್ಲಿ, ರೋಡು ಎಲ್ಲಿ ಎಂದು ಧಾರಾಕಾರ ಮಳೆಯಾದರೆ ಗೊತ್ತಾಗದಂಥ ಪರಿಸ್ಥಿತಿ ಇದೆ. ಮಳೆಗಾಲಕ್ಕೆ ಮುನ್ನ ಹೂಳೆತ್ತುವುದು ವಾಡಿಕೆ. ಆದರೆ ಮಳೆಗಾಲ ಮುಗಿಯುವ ಹೊತ್ತಿನಲ್ಲೂ ಹೂಳೆತ್ತದೆ, ರಸ್ತೆಯ ಮೇಲೆಲ್ಲಾ ಹೊಳೆಯಂತೆ ನೀರು ಹರಿದು ಅಪಘಾತಕ್ಕೆ ಕಾರಣವಾಗುವಂತಾದರೆ ಏನು ಮಾಡೋದು? ಇದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ನಿರ್ವಹಣೆಯ ಮಂಗಳೂರು ಬಿ.ಸಿ.ರೋಡ್ ನ ಚತುಷ್ಪಥ (ಹಾಗೆಂದುಕೊಳ್ಳಬಹುದು) ಟೋಲ್ ರಸ್ತೆಯ ಸ್ಥಿತಿ..ಅಧಿಕಾರಿಗಳು/ಜನಪ್ರತಿನಿಧಿಗಳ ಗಮನಕ್ಕೆ..

ಓದುಗರ ಗಮನಕ್ಕೆ: 2016 ನವೆಂಬರ್ ತಿಂಗಳಲ್ಲಿ www.bantwalnews.com ಆರಂಭಗೊಂಡ (ನವೆಂಬರ್ 10ಕ್ಕೆ 6ನೇ ವರ್ಷಕ್ಕೆ ಕಾಲಿಡಲಿದೆ) ಸಂದರ್ಭ ಕೇವಲ ಸುದ್ದಿಯನ್ನಷ್ಟೇ ಒದಗಿಸುವುದಲ್ಲ, ಸಾರ್ವಜನಿಕರಿಗೆ (ತೀರಾ ವೈಯಕ್ತಿಕ ಸಮಸ್ಯೆಯಲ್ಲ!!) ಆಗುವ ತೊಂದರೆಗಳನ್ನು ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತರುವ ಉದ್ದೇಶವನ್ನು ಬಂಟ್ವಾಳನ್ಯೂಸ್ ಹೊಂದಿತ್ತು. ಸಂದರ್ಭ ಸಿಕ್ಕಾಗಲೆಲ್ಲಾ ಅವುಗಳ ಕುರಿತು ಪುಟ್ಟ ವರದಿಗಳ ಮೂಲಕ ಗಮನಕ್ಕೆ ತರುತ್ತಲೇ ಇದೆ. ಅದಕ್ಕೆ ಸಾಕ್ಷಿಯಾಗಿ ಬಸ್ ನಿಲ್ದಾಣ, ಹೆದ್ದಾರಿ, ಬಿ.ಸಿ.ರೋಡಿನ ಸರ್ವೀಸ್ ರಸ್ತೆ, ಪಾರ್ಕಿಂಗ್ ವಿಚಾರಗಳನ್ನು ಪ್ರಸ್ತಾಪಿಸಿದೆ. ಮಂಗಳೂರಿನಿಂದ ಬಿ.ಸಿ.ರೋಡಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿಯ ಕುರಿತು ಅನೇಕ ಬಾರಿ ಬಂಟ್ವಾಳನ್ಯೂಸ್ ವರದಿ ಮಾಡಿತ್ತು. ಇದಕ್ಕೆ ಪರಿಹಾರ ದೊರಕುವವರೆಗೆ ಆಗಾಗ್ಗೆ ಎಚ್ಚರಿಸುತ್ತಲೇ ಇರುತ್ತದೆ... — HARISH MAMBADY, Editor, Bantwalnews

ಜಾಹೀರಾತು
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.