ವಿಟ್ಲ

ಕೋವಿಡ್ ‘ರಜೆ’ಯಲ್ಲಿ ಮಕ್ಕಳೇ ನಿರ್ಮಿಸಿದರು ಕಿಂಡಿ ಅಣೆಕಟ್ಟು

ಬಂಟ್ವಾಳ: ಕೋವಿಡ್ ಲಾಕ್ ಡೌನ್ ಹಾಗೂ ಶಾಲೆಗಳಿಲ್ಲದ ಸಂದರ್ಭ ಸಮಯ ವ್ಯರ್ಥ ಮಾಡದೆ ವಿಟ್ಲ ಅನಿಲಕಟ್ಟೆಯ ಮಕ್ಕಳು ಕಿಂಡಿ ಅಣೆಕಟ್ಟೊಂದನ್ನು ನಿರ್ಮಿಸಿ ಸುದ್ದಿ ಮಾಡಿದ್ದಾರೆ. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ವಿವಿಧ ಕಾಮಗಾರಿ ಉದ್ಘಾಟನಾ ಸಂದರ್ಭ ಈ ಮಕ್ಕಳ ಕಾರ್ಯಕ್ಕೆ ಶಹಬಾಸ್ ಹೇಳಿದರು.

ಧನ್ವಿತ್,ಹಿತೇಷ್, ನಿರೀಕ್ಷಿತ್ ತನ್ವಿ,ವಿಜೇತ್ ತನ್ವಿ ಅಣೆಕಟ್ಟು ನಿರ್ಮಿಸಿದ್ದು, ಇವರು ಏಳನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಹಳೆಯ ಮರ, ತೆಂಗಿನ ಗರಿ,ಬಾಳೆದಿಂಡು ಮುಂತಾದ ವಸ್ತುಗಳನ್ನು ಬಳಸಿ ಯಾರದೇ ಸಹಾಯವಿಲ್ಲದೆ ಬಹಳ‌ ನಾಜೂಕನಿಂದ ನಿರ್ಮಿಸಿದ ಈ ಅಣೆಕಟ್ಟು ಇದೀಗ ಊರಿನ ಜನರಿಗೆ ತುಂಬಾ ಪ್ರಯೋಜನವನ್ನು ನೀಡಿದೆ.‌ ಕೃಷಿಕರು ಹೆಚ್ಚಾಗಿರುವ ಈ ಪ್ರದೇಶದಲ್ಲಿ ಮರಮುಟ್ಟುಗಳನ್ನು ನೀರಿನಲ್ಲಿ ನೆನಸಲು ಈ ಅಣೆಕಟ್ಟನ್ನು ಬಳಸಲು ಪ್ರಾರಂಭಿಸಿದ್ದಾರೆ. ಇದನ್ನು ಕಂಡ ಈ ಮಕ್ಕಳ ಮುಖದಲ್ಲಿ ಶ್ರಮ ಸಾರ್ಥಕವಾದ ಧನ್ಯತಾ ಭಾವ ಮೂಡಿದೆ. ನೀರು ಸಂಗ್ರಹವಾದಾಗ ಪುಳಕಿತರಾದ ಈ ಮಕ್ಕಳು ಇದನ್ನು ಊರವರ ಗಮನಕ್ಕೆ ತಂದಿದ್ದಾರೆ. ಮಕ್ಕಳ ಈ ಸಾಧನೆಯನ್ನು ಕಂಡ ಹೆತ್ತವರು,ಊರಿನ ಗಣ್ಯರು,ನಾಗರಿಕರು ಅವರನ್ನು ಹುರಿದುಂಬಿಸಿದ್ದಾರೆ. ಈಗ ಸಂಗ್ರಹವಾದ ಸುತ್ತಮುತ್ತಲಿನ ಬಾವಿ,ಕೆರೆ,ಕೊಳವೆ ಬಾವಿಗಳಲ್ಲಿ ನೀರಿನ ಒರತೆ ಹೆಚ್ಚಾಗಿದೆ ಎನ್ನುತ್ತಾರೆ              ಸ್ಥಳೀಯರು. ಹರಿದು ಪೋಲಾಗುತ್ತಿದ್ದ ನೀರನ್ನು ಸಂಗ್ರಹಿಸುವ ಮಕ್ಕಳ ಈ ಕನಸಿಗೆ ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಸದಸ್ಯ ಪೂರ್ಲಪ್ಪಾಡಿ ಜಯಂತ್, ಶಿಕ್ಷಣ ತಜ್ಞ ಈಶ್ವರ ಭಟ್ ಪೂರ್ಲಪ್ಪಾಡಿ ಮುಂತಾದವರು ಪ್ರೋತ್ಸಾಹಿಸಿದ್ದರು‌.  ರಜೆಯನ್ನು ಹೇಗೆ ಸದುಪಯೋಗ ಪಡಿಸಬಹುದು ಎಂಬುದನ್ನು ಸಮಾಜಕ್ಕೆ ತೋರಿಸುವ ಜೊತೆಗೆ ನೀರು ಅಮೂಲ್ಯ ವಾದದ್ದು ಅದನ್ನು ಇಂಗಿಸಿ ಉಳಿಸಿ ಎಂಬ ಸಂದೇಶವನ್ನು ರವಾನೆ ಮಾಡಿದ ಈ ಪುಟಾಣಿಗಳು ಉಳಿದವರಿಗೆ ಮಾದರಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.