ಜಿಲ್ಲಾ ಸುದ್ದಿ

ಟೆಸ್ಟ್ ರಿಸಲ್ಟ್ ಶೀಘ್ರ ದೊರೆಯಲು ವೆನ್ಲಾಕ್ ನಲ್ಲಿ 25 ಲಕ್ಷ ರೂ ವೆಚ್ಚದ ಕೋವಿಡ್ ಪರೀಕ್ಷಾ ಯಂತ್ರ ಅಳವಡಿಕೆ

COVID ಹಿನ್ನೆಲೆ: ಅಧಿಕಾರಿಗಳ ಸಭೆಯಲ್ಲಿ ಸಚಿವ ಕೋಟ

ಕೋವಿಡ್ ಟೆಸ್ಟ್ ರಿಸಲ್ಟ್ ಶೀಘ್ರ ದೊರೆಯಲು ಅನುಕೂಲವಾಗುವಂತೆ ಮೂರು ದಿನದೊಳಗೆ ಕೋವಿಡ್ ಸೋಂಕಿನ ನೂತನ ಹೆಚ್ಚುವರಿ ಪರೀಕ್ಷಾ ಯಂತ್ರವನ್ನು 25 ಲಕ್ಷ ರೂ. ವೆಚ್ಚದಲ್ಲಿ ವೆನ್‍ಲಾಕ್ ಆಸ್ಪತ್ರೆಯಲ್ಲಿ ಅಳವಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಮತ್ತು ಚಿಕಿತ್ಸೆ ನೀಡುವ  ಕುರಿತು ಬಂಟ್ವಾಳ, ಪುತ್ತೂರು, ಸುಳ್ಯ ತಾಲೂಕಿನ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದರು. ಕೋವಿಡ್‍ನಿಂದ ಮರಣ ಹೊಂದಿದವರ  ಶವ ಸಾಗಾಣಿಕೆಗೆ ಉಚಿತ ಆಂಬುಲೆನ್ಸ್ ನೀಡುವುದರೊಂದಿಗೆ ಶವ ಸಂಸ್ಕಾರದ ವೆಚ್ಚವನ್ನು ಸಹ ಸರಕಾರವೇ ಭರಿಸಲಿದ್ದು, ಈ ಕೂಡಲೇ ತಾಲೂಕಿನ ತಹಸೀಲ್ದಾರ್ ಗಳಿಗೆ  ಹಣ ಬಿಡುಗಡೆ ಮಾಡಲು ಜಿಲ್ಲಾಧಿಕಾರಿ ಸೂಚನೆ ನೀಡಿದರು.
 ಕೊರೋನಾ ಕಫ್ರ್ಯೂನಿಂದಾಗಿ ನಗರ ಪ್ರದೇಶದಿಂದ ಜನರು ಗ್ರಾಮಗಳತ್ತ ವಲಸೆ ಬರುತ್ತಿದ್ದಾರೆ. ಅವರುಗಳಿಂದ ಸೋಂಕು ಇತರರಿಗೆ ಹರಡುವ ಸಾಧ್ಯತೆ ಇರುತ್ತದೆ. ಇವುಗಳ ನಿಯಂತ್ರಣಕ್ಕೆ ಗ್ರಾಮಗಳ ಮಟ್ಟದಲ್ಲಿ ಟಾಸ್ಕ್ ಫೋರ್ಸ್‍ಗಳನ್ನು ರಚನೆ ಮಾಡುವುದರೊಂದಿಗೆ ಕಾಳಜಿ ವಹಿಸಬೇಕು,  ರೋಗ ಇತರರಿಗೆ ಹರಡದಂತೆ ಎಚ್ಚರ ವಹಿಸಬೇಕು ಎಂದರು.

ಕೋವಿಡ್ ಟೆಸ್ಟ್‍ಗಳನ್ನು ಮಾಡುವುದು ವಿಳಂಬವಾಗುವ ಸಂದರ್ಭವಿದ್ದಲ್ಲಿ ಅಗತ್ಯವೆಂದು ಕಂಡುಬಂದಾಗ ಖಾಸಗಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಮಾಡಲು ಸರಕಾರದ ಅನುಮತಿ ಪಡೆದು ಪರೀಕ್ಷೆಗಳನ್ನು ಮಾಡಲು ಮುಂದಾಗಬೇಕು ಎಂದರು.

ಜಾಹೀರಾತು

ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿರುವವರಿಗೆ ಉತ್ತಮ ಚಿಕಿತ್ಸೆ ನೀಡುವುದರ ಜೊತೆಗೆ ಅವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಗುರುತಿಸಿ, ಅವರನ್ನು ಹೋಂ ಕ್ವಾರಂಟೈನ್ ಇಡುವುದರ ಜೊತೆಗೆ ಮೊಬೈಲ್ ಸ್ವ್ಯಾಬ್ ಟೆಸ್ಟಿಂಗ್ ವಾಹನಗಳನ್ನು ಅವರಿದ್ದಲ್ಲಿಯೇ ಕೊಂಡೊಯ್ದು ಕೋವಿಡ್ ಟೆಸ್ಟ್‍ನ್ನು ಮಾಡಲು ಮುಂದಾಗಬೇಕು ಎಂದು ಸೂಚನೆ ನೀಡಿದರು. ತಾಲೂಕು ಕೇಂದ್ರದ ಕೋವಿಡ್ ಆಸ್ಪತ್ರೆಗಳಲ್ಲಿ 50 ಐಸಿಯು ಘಟಕಗಳನ್ನು ಸ್ಥಾಪಿಸಿ, ಚಿಕಿತ್ಸೆ ನೀಡಬೇಕು. ಇದರಿಂದಾಗಿ ಜಿಲ್ಲಾ ಮಟ್ಟದ ಕೋವಿಡ್ ಕೇಂದ್ರಗಳಲ್ಲಿ ಒತ್ತಡ ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಶಾಸಕ ರಾಜೇಶ್ ನಾಯ್ಕ್, ಕುಟುಂಬ ಕಲ್ಯಾಣ ಅಧಿಕಾರಿ ಕಿಶೋರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.