ಬಂಟ್ವಾಳ

ಬಂಟ್ವಾಳ ಪಾಲಿಟೆಕ್ನಿಕ್ ಗೆ ಮತ್ತಷ್ಟು ಸೌಕರ್ಯ, ವಿದ್ಯಾರ್ಥಿಗಳಿಗೆ ಅನುಕೂಲವಾಗಲು ನೆರವು – ಶಾಸಕ ರಾಜೇಶ್ ನಾಯ್ಕ್

ಸುಮಾರು 500ಕ್ಕೂ ಅಧಿಕ ವಿದ್ಯಾರ್ಥಿಗಳಿರುವ ಬಂಟ್ವಾಳ ತಾಲೂಕಿನ ಸರ್ಕಾರಿ ಪಾಲಿಟೆಕ್ನಿಕ್ ಬಂಟ್ವಾಳ ಪೇಟೆಯ ಸಮೀಪ ಗುಡ್ಡದ ಮೇಲಿದೆ. ವಿದ್ಯಾರ್ಥಿಗಳಿಗೆ ಇಲ್ಲಿ ಆಗಮಿಸಲು ತೊಂದರೆಯಾಗದಂತೆ ಸಕಲ ಸೌಕರ್ಯ ಒದಗಿಸಲು ಕ್ರಮ ವಹಿಸಲಾಗುತ್ತದೆ ಎಂದು ಪರಿಶೀಲನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್ ಹೇಳಿದ್ದಾರೆ.

ಬಂಟ್ವಾಳ ಸರಕಾರಿ ಪಾಲಿಟೆಕ್ನಿಕ್ ಗೆ ಮಂಜೂರಾದ 1.22 ಕೋ.ರೂ.ಅನುದಾನದ ಕಟ್ಟಡ ಕಾಮಗಾರಿ ಆರಂಭಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಸೋಮವಾರ ಶಿಲಾನ್ಯಾಸ ನೆರವೇರಿಸಿದ ಬಳಿಕ ಅಧಿಕಾರಿಗಳು ಮತ್ತು ಕಾಲೇಜಿನ ಸಿಬ್ಬಂದಿ ಜೊತೆ ಪರಾಮರ್ಶೆ ನಡೆಸಿದರು. ಮಂಜೂರಾದ ಅನುದಾನದಲ್ಲಿ ಸುಮಾರು 7 ಚದರ ಅಡಿ ವಿಸ್ತೀರ್ಣದ ಕಟ್ಟಡ ನಿರ್ಮಾಣಗೊಳ್ಳಲಿದೆ. ಪಾಲಿಟೆಕ್ನಿಕ್ ಅಭಿವೃದ್ಧಿಯ 10 ಕೋ.ರೂ.ಗಳ ಯೋಜನೆ ಸರಕಾರದ ಹಣಕಾಸು ಇಲಾಖೆಯಲ್ಲಿದ್ದು, ಅದರ ಮಂಜೂರಾತಿಗೆ ಪ್ರಯತ್ನಿಸಲಾಗುವುದು. ತನ್ನ ನಿಧಿಯಿಂದ ಇಲ್ಲಿನ ಗ್ರಂಥಾಲಯದ ಪುಸ್ತಕಕ್ಕೆ ಅನುದಾನ ನೀಡಲಾಗುತ್ತದೆ. ಜತೆಗೆ ಕಾಲೇಜಿನ ಸಂಪರ್ಕ ರಸ್ತೆ, ಮಕ್ಕಳಿಗೆ ಅತ್ಯಲ್ಪ ವೆಚ್ಚದಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಗೂ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಅವರು, ಹೆದ್ದಾರಿಯಿಂದ ಸ್ವಲ್ಪ ದೂರದಲ್ಲಿ ಇರುವ ಕಾಲೇಜಿಗೆ ಬಸ್ ವ್ಯವಸ್ಥೆ ಕಲ್ಪಿಸುವ ಕುರಿತು ಚರ್ಚಿಸಲಾಗುವುದು ಎಂದರು.

ಪ್ರಿನ್ಸಿಪಾಲ್ ಸಿ.ಜೆ.ಪ್ರಕಾಶ್ ಅವರು ಕಾಲೇಜಿನ ಪ್ರಯೋಗಾಲಯ, ಉಪನ್ಯಾಸಕರು ಹಾಗೂ ಇತರ ಸೌಕರ್ಯಗಳ ಕುರಿತು ವಿವರ ನೀಡಿದರು. ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವದಾಸ್ ಶೆಟ್ಟಿ, ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ಲೋಕೋಪಯೋಗಿ ಇಲಾಖೆಯ ಎಇಇ ಷಣ್ಮುಗಂ, ಸಹಾಯಕ ಎಂಜಿನಿಯರ್ ಪ್ರೀತಂ, ಸಂಸ್ಥೆಯ ಕುಲಸಚಿವ ಒಫೀಲಿಯಾ ವಿ.ಡಿಸೋಜ, ವಿವಿಧ ವಿಭಾಗಗಳ ಮುಖ್ಯಸ್ಥರಾದ ದೇವರಾಜ್ ನಾಯ್ಕ್, ಉಷಾ ನಾಯ್ಕ್, ಶಾಮರಾಜ ಎನ್, ಸನತ್ ರಾಮ್ ಬಿ, ಉಪನ್ಯಾಸಕರು, ಎಂಜಿನಿಯರ್ ಗಳು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.