ಬಂಟ್ವಾಳ

ಬಂಟ್ವಾಳ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ – ರಾಜಕೀಯ ಆರೋಪ, ಪ್ರತ್ಯಾರೋಪಗಳಿಗೆ ವೇದಿಕೆ

ಜಾಹೀರಾತು

ಬಂಟ್ವಾಳ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಸೋಮವಾರ ನಡೆದಿತ್ತು. ಈ ಸಂದರ್ಭ 12 ಸ್ಥಾನ ಗಳಿಸಿದ್ದ ಕಾಂಗ್ರೆಸ್ ಗೆ 4 ಸ್ಥಾನ ಗಳಿಸಿದ್ದ ಎಸ್.ಡಿ.ಪಿ.ಐ. ಬೆಂಬಲ ನೀಡಿತ್ತು. ಈ ಹಿನ್ನೆಲೆಯಲ್ಲಿ 11 ಸ್ಥಾನ ಗಳಿಸಿದ್ದ ಬಿಜೆಪಿ ಸಂಸದ ಮತ್ತು ಶಾಸಕರ ಮತ ಸೇರಿ 13 ಮತ ಗಳಿಸಿದರೂ ಬಿಜೆಪಿಯ ಅಭ್ಯರ್ಥಿಗಳು ಸೋಲು ಕಂಡರು. ಕಾಂಗ್ರೆಸ್ ಗೆ ಅಧ್ಯಕ್ಷ, ಉಪಾಧ್ಯಕ್ಷ ಪದವಿ ಲಭಿಸಿತ್ತು. ಮಹಮ್ಮದ್ ಶರೀಫ್ ಅಧ್ಯಕ್ಷರಾದರೆ, ಜೆಸಿಂತಾ ಡಿಸೋಜ ಉಪಾಧ್ಯಕ್ಷರಾದರು. ಇಲ್ಲಿ ಎಸ್.ಡಿ.ಪಿ.ಐ. ಅಭ್ಯರ್ಥಿ ನಾಮಪತ್ರ ಸಲ್ಲಿಸಿ, ಹಿಂಪಡೆದರು. ಸೋಮವಾರ ಆಯ್ಕೆ ಪ್ರಕ್ರಿಯೆ ನಡೆದ ಬೆನ್ನಲ್ಲೇ ಆರೋಪ, ಪ್ರತ್ಯಾರೋಪ, ಸಮರ್ಥನೆಗಳ ಹೇಳಿಕೆಗಳು ಬಂದವು. ಪ್ರತಿಯೊಬ್ಬ ರಾಜಕೀಯ ಪಕ್ಷಗಳ ಮುಖಂಡರು ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ತಮ್ಮದೇ ರೀತಿಯಲ್ಲಿ ಪಕ್ಷದ ನಿಲುವುಗಳನ್ನು ವಿವರಿಸತೊಡಗಿದರು.

ಮತ ಪ್ರಕ್ರಿಯೆ ನಡೆಸಿ ಹೊರಬಂದ ಕೂಡಲೇ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ರಾಜೇಶ್ ನಾಯ್ಕ್ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ. ಹೊಂದಾಣಿಕೆ ಮಾಡಿಕೊಂಡಿದೆ, ಕಾಂಗ್ರೆಸ್ ನ ನಿಜಬಣ್ಣ ಬಯಲಾಗಿದೆ ಎಂದು ಆಪಾದಿಸಿದರು. ಇದೇ ವೇಳೆ ಎಸ್.ಡಿ.ಪಿ.ಐ. ನ ಮುನೀಶ್ ಆಲಿ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಸಾಂದರ್ಭಿಕವಾಗಿ ಬೆಂಬಲ ನೀಡಿದ್ದೇವೆ ಎಂದರು. ಅದೇ ಹೊತ್ತಿನಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾಜಿ ಸಚಿವ ಬಿ.ರಮಾನಾಥ ರೈ ನಾವು ಹೊಂದಾಣಿಕೆ ಮಾಡಿಕೊಂಡಿಲ್ಲ, ಅವರಾಗಿಯೇ ಬೆಂಬಲ ನೀಡಿದ್ದಾರೆ ಎಂದರು. ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ.ಯನ್ನು ಒಂದೇ ನಾಣ್ಯದ ಎರಡು ಮುಖಗಳು ಎಂದು ವಿಶ್ಲೇಷಿಸಿದರು. ಇದು ಶನಿವಾರದ ಘಟನಾವಳಿಗಳು.

ಕಾಂಗ್ರೆಸ್ ಗೆ ಎಸ್.ಡಿ.ಪಿ.ಐ. ಬೆಂಬಲ ನೀಡಿದ ವಿಚಾರ ಭಾನುವಾರವೂ ಹಲವು ರಾಜಕೀಯ ವಿಶ್ಲೇಷಣೆಗಳಿಗೆ ವಸ್ತುವಾದವು. ಸೋಮವಾರ ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ನೇರ ಸುದ್ದಿಗೋಷ್ಠಿಯನ್ನೇ ಕರೆದು ದಿಢೀರನೆ ಎಸ್.ಡಿ.ಪಿ.ಐ. ಅಭ್ಯರ್ಥಿ ನಾಮಪತ್ರ ಹಿಂತೆಗೆದು ಅದರ ಎಲ್ಲಾ ಸದಸ್ಯರು ಕಾಂಗ್ರೆಸ್ ಪರವಾಗಿ ಕೈ ಎತ್ತಲು ಏನು ಕಾರಣ ಎಂದು ಪ್ರಶ್ನಿಸಿದ್ದಾರೆ. ಇದು ಒಪ್ಪಂದವಲ್ಲ ಎಂಬುದನ್ನು ಬಲವಾಗಿ ಅಲ್ಲಗಳೆದ ಹರಿಕೃಷ್ಣ ಬಂಟ್ವಾಳ್,ಆ ಪಕ್ಷದ ಬೆಂಬಲ ಪಡೆಯುವುದಿಲ್ಲ ಎಂದಿದ್ದವರು ಈಗೇಕೆ ಅವರು ಬೆಂಬಲ ನೀಡುವಾಗ ಸ್ವೀಕರಿಸಿದರು ಎಂದು ಪ್ರಶ್ನಿಸಿದರು. ಮಂಗಳವಾರ ಮಾಜಿ ಸಚಿವ ಬಿ.ರಮಾನಾಥ ರೈ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹರಿಕೃಷ್ಣ ಬಂಟ್ವಾಳ್ ಕೇವಲ ಆರೋಪ ಮಾಡುವುದಲ್ಲ, ತನ್ನ ಆರೋಪಕ್ಕೆ ಸಾಕ್ಷ್ಯ ಒದಗಿಸಲಿ ಎಂದರು. ಆರೋಪ, ಪ್ರತ್ಯಾರೋಪಗಳು ಮುಂದುವರಿದಿವೆ….

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.