ಬಂಟ್ವಾಳನ್ಯೂಸ್ ವರದಿ www.bantwalnews.com
ಬಂಟ್ವಾಳ: ಹಲವು ತುಳು ಚಿತ್ರಗಳಲ್ಲಿ ಅಭಿನಯಿಸಿದ್ದ ಬಂಟ್ವಾಳ ನಿವಾಸಿ ಸುರೇಂದ್ರ ಭಂಡಾರಿ (39) ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ ಪಕ್ಕ ಇರುವ ವಸತಿ ಸಂಕೀರ್ಣದ ಫ್ಲ್ಯಾಟ್ ಒಂದರಲ್ಲಿ ಬರ್ಬರವಾಗಿ ಹತ್ಯೆಗೀಡಾಗಿದ್ದಾರೆ. ಬುಧವಾರ ಮಧ್ಯಾಹ್ನದ ವೇಳೆ ಘಟನೆ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಉನ್ನತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ಬಂಟ್ವಾಳ ನಿವಾಸಿಯಾಗಿರುವ ಸುರೇಂದ್ರ ಬಂಟ್ವಾಳ್, ಹಿಂದೆ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು. ಬಳಿಕ ಚಲನಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಗುರುತಿಸಲ್ಪಟ್ಟಿದ್ದರು. ಛಾಯಾಗ್ರಹಣದಲ್ಲೂ ಗುರುತಿಸಿಕೊಂಡಿದ್ದ ಅವರು, ಹಣಕಾಸು ವ್ಯವಹಾರವನ್ನೂ ಮಾಡುತ್ತಿದ್ದರು. ಬಂಟ್ವಾಳ ಠಾಣೆಯಲ್ಲಿ ಈತ ರೌಡಿಶೀಟರ್ ಆಗಿಯೂ ಗುರುತಿಸಿಕೊಂಡಿದ್ದರು.
ಮಂಗಳವಾರ ರಾತ್ರಿಯಿಂದ ಬುಧವಾರ ಮಧ್ಯಾಹ್ನದ ಒಳಗೆ ಅವರ ಹತ್ಯೆಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಫ್ಲಾಟ್ ನ ಐದನೇ ಮಹಡಿಯಲ್ಲಿದ್ದ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹರಿತವಾದ ಆಯುಧದಿಂದ ತಲೆ ಸಹಿತ ದೇಹದ ಇತರ ಭಾಗಗಳನ್ನು ಇರಿಯಲಾಗಿದೆ. ಸೋಫಾ ಒಂದರಲ್ಲಿ ಅವರ ಶವ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಭೇಟಿ ನೀಡಿ, ತನಿಖೆ ನಡೆಸುತ್ತಿದ್ದಾರೆ. ಘಟನೆಯ ಕುರಿತ ಸುದ್ದಿ ತಿಳಿಯುತ್ತಿದ್ದಂತೆ ಬುಧವಾರ ಅಪರಾಹ್ನದ ವೇಳೆ ರಾ.ಹೆ. ಇಕ್ಕೆಲಗಳಲ್ಲೂ ಜನ ಜಮಾಯಿಸಿದ್ದರು. ಅಪಾರ್ಟ್ ಮೆಂಟ್ ಸುತ್ತಲೂ ಇರುವ ಜನಸಂದಣಿಯನ್ನು ಬಳಿಕ ಪೊಲೀಸರು ನಿಯಂತ್ರಿಸಿದರು. ಡಿವೈಎಸ್ಪಿ ವೆಲಂಟೈನ್ ಡಿಸೋಜ ನೇತೃತ್ವದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಮತ್ತು ಎಸ್ಸೈ ಪ್ರಸನ್ನ, ರಾಜೇಶ್, ಕಲೈಮಾರ್, ಸಂಜೀವ ಮತ್ತು ಬಂಟ್ವಾಳ ನಗರ ಮತ್ತು ಗ್ರಾಮಾಂತರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…