ಯಕ್ಷಗಾನ

ಹವ್ಯಾಸಿ ಕಲಾವಿದರಿಗೆ ಆತ್ಮವಿಶ್ವಾಸ ತುಂಬುತ್ತಿದ್ದರು ತೆಂಕಬೈಲು ಶಾಸ್ತ್ರಿಗಳು – ಹಿರಿಯ ಯಕ್ಷಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್

ಜಾಹೀರಾತು

 

ಹವ್ಯಾಸಿ ಕಲಾವಿದರಾಗಿ ರಂಗನಿರ್ದೇಶಿಸಿ, ಅದೆಷ್ಟೋ ಕಲಾವಿದರು ಇಂದು ರಂಗಸ್ಥಳದಲ್ಲಿ ಆತ್ಮವಿಶ್ವಾಸದಲ್ಲಿ ಮಿಂಚುವಂತೆ ಮಾಡಿರುವ ಶಾಸ್ತ್ರಿಗಳೊಂದಿಗೆ ಲೆಕ್ಕವಿಲ್ಲದಷ್ಟು ಕಾರ್ಯಕ್ರಮದಲ್ಲಿ ತಾನು ಜತೆಗಾರನಾಗಿದ್ದೆ ಎಂದು ನೆನಪಿಸಿದವರು ಸೆ.27ರಂದು ನಿಧನ ಹೊಂದಿದ ಪ್ರಸಿದ್ಧ ಭಾಗವತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಅವರ ದಶಕಗಳ ಒಡನಾಡಿ ಹಿರಿಯ ಯಕ್ಷಗಾನ ಕಲಾವಿದ, ಹಿಮ್ಮೇಳ ಗುರು ಹಾಗೂ ಸ್ನೇಹಿತ ಮಾಂಬಾಡಿ ಸುಬ್ರಹ್ಮಣ್ಯ ಭಟ್.

ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು ರಂಗಸ್ಥಳಕ್ಕೆ ಬಂದರೆಂದರೆ, ಗಿಜಿಗುಡುತ್ತಿದ್ದ ಸಭೆ ಕ್ಷಣಕಾಲ ಮೌನಕ್ಕೆ ಜಾರುತ್ತದೆ. ಜಾಗಟೆ ಹಿಡಿದು ಭಾಗವತರು ಹಾಡಲಾರಂಭಿಸಿದರೆ, ಅನಿಯಂತ್ರಿತವಾಗಿ ಸಭಿಕರ ಕೈ ತಾಳ ಹಾಕುತ್ತದೆ. ಯಾವುದೇ ಪ್ರಸಂಗವಿರಲಿ, ಯಾವುದೇ ಸಂದರ್ಭವಿರಲಿ, ಕಲಾವಿದರು ಪರಿಣತರೇ ಇರಲಿ, ಹೊಸಬರೇ ಇರಲಿ. ತಾನಷ್ಟೇ ಅಲ್ಲ, ಅವರೂ ರಂಗಸ್ಥಳದಲ್ಲಿ ಮಿಂಚುವಂತೆ ಮಾಡುವ ತಾಕತ್ತು ಇರುವ ವಿರಳಾತಿವಿರಳ ಭಾಗವತರ ಪೈಕಿ ಶಾಸ್ತ್ರಿಗಳು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಹಳೆಯ ತಲೆಮಾರು, ಯುವ ಪೀಳಿಗೆ ತಲೆದೂಗುವಂತೆ, ಶಾಸ್ತ್ರೀಯ ಚೌಕಟ್ಟು ಮೀರದಂತೆ, ರಂಗಸ್ಥಳವನ್ನು ಮುನ್ನಡೆಸುವವರು ಅವರು ಎಂದು ಸುಬ್ರಹ್ಮಣ್ಯ ಭಟ್ ನೆನಪಿಸಿಕೊಳ್ಳುತ್ತಾರೆ.

ಹವ್ಯಾಸಿ ಕಲಾವಿದರನ್ನು ಬೆಳೆಸಿದವರು ಶಾಸ್ತ್ರಿಗಳು, ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತಿದ್ದರು. ಸದಾ ಹಾಸ್ಯಪ್ರಜ್ಞೆ ಉಳ್ಳವರು. ರಂಗಸ್ಥಳದಲ್ಲಿ ಯಾವುದೇ ಕಲಾವಿದ ಸೋಲಲು ಬಿಡುತ್ತಿರಲಿಲ್ಲ ಎಂದು ರಂಗಸ್ಥಳದಲ್ಲಿ ಶಾಸ್ತ್ರಿಗಳೊಂದಿಗಿನ ಜತೆ ಅನುಭವ ಹಂಚಿಕೊಂಡರು.

ರಂಗಸ್ಥಳದಲ್ಲೇ ಪ್ರಸಂಗ ಮುನ್ನಡೆಸುವ ಕುರಿತು ನಾವಿಬ್ಬರೂ ಚರ್ಚಿಸುತ್ತಿದ್ದೆವು ಎಂದು ನೆನಪಿಸಿದ ಮಾಂಬಾಡಿ ಸುಬ್ರಹ್ಮಣ್ಯ ಭಟ್, ತನ್ನ ತಂದೆಯವರಾದ ಮಾಂಬಾಡಿ ನಾರಾಯಣ ಭಾಗವತರ ಬಳಿ ಶಾಸ್ತ್ರಿಗಳು ಭಾಗವತಿಕೆಯನ್ನು ಕಲಿಯಲು ಬರುತ್ತಿದ್ದಾಗ, ಭಾಗವತ ಹೇಗಿರಬೇಕು, ರಂಗಸ್ಥಳದಲ್ಲಿ ಯಾವ ರಾಗಗಳನ್ನು ಯಾವ ಹೊತ್ತಿನಲ್ಲಿ ಹೇಗೆ ಪ್ರಸ್ತುತಪಡಿಸಬೇಕು ಎಂಬುದನ್ನು ಕಲಿತುಕೊಂಡಿದ್ದರು ಹಾಗೂ ಅದನ್ನು ರಂಗದಲ್ಲಿ ಅಳವಡಿಸಿಕೊಂಡಿದ್ದರು ದಶಕಗಳ ಕಾಲ ಒಟ್ಟಿಗೆ ಆಟ, ಕೂಟಗಳಿಗೆ ತೆರಳುವ ಸಂದರ್ಭ, ಪ್ರಸಂಗಪ್ರಸ್ತುತಿಯ ಬಗ್ಗೆ ಸಲಹೆ, ಪರಾಮರ್ಶೆಗಳನ್ನು ನಡೆಸುತ್ತಿದ್ದರು ಎಂದು ಅವರು ನೆನಪಿಸಿಕೊಂಡರು.

ಪ್ರೇಕ್ಷಕರನ್ನು ತುಗಿದಾಲಿನಲ್ಲಿ ಕುಳಿತು ಕೇಳಿಸುವ ತಾಕತ್ತು ಅವರಿಗಿತ್ತು, ಹಿಂದೋಳ, ಮೋಹನದಂಥ ರಾಗಗಳ ಸಹಿತ ಪೌರಾಣಿಕ ಪ್ರಸಂಗಗಳನ್ನು ನಡೆಸಿಕೊಂಡು ಹೋಗುವ ಅವರ ಕ್ರಮ ಅನನ್ಯ, ಯಾವ ಸಂದರ್ಭ ಯಾವ ರಾಗ ಹಾಕಬೇಕು ಎಂಬುದನ್ನು ಅರಿತು, ಸಂದರ್ಭ, ಸನ್ನಿವೇಶಕ್ಕೆ ಬೇಕಾದಂತೆ ರಂಗಸ್ಥಳದಲ್ಲಿರುವವರನ್ನು ತನ್ನೊಡನೆ ಮೆರೆಸುವ ಪ್ರೌಢಿಮೆ ಅವರಲ್ಲಿತ್ತು. ಪ್ರಸಂಗಗಳನ್ನು ಪುಸ್ತಕ ನೋಡದೆ ಹೇಳುವ ಸಾಮರ್ಥ್ಯವನ್ನು ಶಾಸ್ತ್ರಿಗಳು ಹೊಂದಿದ್ದರು. ಸುಮಾರು ಅರ್ಧ ಶತಮಾನದ ಯಕ್ಷ ಪಯಣದಲ್ಲಿ ಶಾಸ್ತ್ರಿಗಳು ಹವ್ಯಾಸಿ ಎನಿಸಿಕೊಂಡು ತಿರುಗಾಟ ಮಾಡಿದರೂ ಬಹುಬೇಡಿಕೆಯ ಕಲಾವಿದರಾಗಿ ಸಣ್ಣ ಪ್ರಾಯದಲ್ಲೇ ರೂಪುಗೊಂಡಿದ್ದರು. ಶಾಸ್ತ್ರಿಗಳಿಲ್ಲದೆ ಯಾವುದೇ ಯಕ್ಷಗಾನ ಸಂಘಗಳ ತಾಳಮದ್ದಳೆ, ಯಕ್ಷಗಾನ ಅಪೂರ್ಣ ಎನಿಸುವಷ್ಟು ಅವರು ಆಪ್ತರಾಗಿದ್ದರು ಎಂದು ಭಟ್ ನೆನಪಿಸಿಕೊಳ್ಳುತ್ತಾರೆ.

ಶಾಸ್ತ್ರಿಗಳು ಅದೆಷ್ಟೋ ಹವ್ಯಾಸಿ ಯಕ್ಷಗಾನ ಸಂಘಗಳ ಹಿಂದಿನ ಶಕ್ತಿ. ಪೆರ್ಲದ ಶ್ರೀ ಪಡ್ರೆ ಚಂದು ಯಕ್ಷಗಾನ ತರಬೇತಿ ಕೇಂದ್ರದ ಹಿಮ್ಮೇಳ ಅಧ್ಯಾಪಕರಾಗಿ ಹಲವಾರು ಶಿಷ್ಯರನ್ನು ಹೊಂದಿದ್ದ ಶಾಸ್ತ್ರಿಗಳು ಅನಾರೋಗ್ಯ ಹೊಂದುವ ಕೆಲ ದಿನಗಳ ಹಿಂದಿನವರೆಗೂ ಮನೆಯಲ್ಲಿ ಆಸಕ್ತರಿಗೆ ಪಾಠ ಮಾಡುತ್ತಿದ್ದರು ಎಂದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.