ಜಿಲ್ಲಾ ಸುದ್ದಿ

ಸಮುದಾಯಗಳ ಸಾಂಸ್ಕೃತಿಕ ದಾಖಲಾತಿ ಅಗತ್ಯ – ಹರಿಕೃಷ್ಣ ಪುನರೂರು

ಜಾಹೀರಾತು

ಮಂಗಳೂರು: ಪ್ರತಿಯೊಂದು ಸಮುದಾಯವೂ ವಿಶಿಷ್ಟವಾದ ಪರಂಪರೆಗಳನ್ನು ಹೊಂದಿದ್ದು ಅವುಗಳ ದಾಖಲಾತಿಯು ಅನನ್ಯವಾದ ಸಾಂಸ್ಕೃತಿಕ ಅಧ್ಯಯನಕ್ಕೆ ಹಾದಿ ಮಾಡಿ ಕೊಡುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.

ನಗರದ ಸಾಹಿತ್ಯಿಕ ಸಾಂಸ್ಕೃತಿಕ ಸಂಸ್ಥೆ ’ಭೂಮಿಗೀತವೇದಿಕೆಯು ಪತ್ರಿಕಾ ಭವನದಲ್ಲಿ ಏರ್ಪಡಿಸಿದ ಖ್ಯಾತ ಕವಿ, ಸಾಹಿತಿ ಡಾ. ವಸಂತಕುಮಾರ ಪೆರ್ಲ ಅವರ ಚಿಂತನ ಹಾಗೂ ಸಂಸ್ಕೃತಿ ಸಂಕಥನಗಳನ್ನೊಳಗೊಂಡ ನೂತನ ಕೃತಿ ’ಅಮೃತ ಹಂಚುವ ಕೆಲಸಬಿಡುಗಡೆಗೊಳಿಸಿ ಅವರು ಮಾತಾಡುತ್ತಿದ್ದರು.

ಹಲವು ಸಮುದಾಯಗಳು ಸೇರಿ ಬೃಹತ್ ರೂಪದ ಸಮಾಜ ನಿರ್ಮಾಣವಾಗಿದೆ. ಆದರೆ ವಿವಿಧ ಸಮುದಾಯಗಳಲ್ಲಿ ಅಡಗಿರುವ ವೈಶಿಷ್ಟ್ಯಗಳ ಬಗ್ಗೆ ಹಲವರಿಗೆ ತಿಳಿದಿರುವುದಿಲ್ಲ. ನಮ್ಮ ಸಮಾಜ ಇಂದು ಬದಲಾವಣೆಯ ಸಂಧಿಘಟ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ಸಮುದಾಯಗಳ ಸಣ್ಣ ಸಣ್ಣ ಸಾಂಸ್ಕೃತಿಕ ವಿವರಗಳ ದಾಖಲಾತಿಯು ಚರಿತ್ರೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದು ಎಂದು ಅವರು ಹೇಳಿದರು.

ಡಾ. ಪೆರ್ಲ ಅವರು ಆಳವಾದ ಒಳನೋಟಗಳಿರುವ ಓರ್ವ ಕವಿ, ಸಾಹಿತಿಯಾಗಿದ್ದು, ಇದುವರೆಗೆ ದಾಖಲಾಗದೇ ಇರುವ ಸಮಾಜದ ಹಲವು ಒಳಸಂಗತಿಗಳ ಬಗ್ಗೆ ಅಮೂಲ್ಯವಾದ ವಿಚಾರಗಳನ್ನು ಈ ಕೃತಿಯಲ್ಲಿ ಅನನ್ಯವಾಗಿ ಕಟ್ಟಿಕೊಟ್ಟಿದ್ದಾರೆ. ಮುಂದಿನ ತಲೆಮಾರಿಗೆ ಈ ವಿಚಾರಗಳು ಅತ್ಯಮೂಲ್ಯ ಅನ್ನಿಸಲಿದ್ದು, ಇದೊಂದು ಸಂಗ್ರಹಯೋಗ್ಯ ಕೃತಿಯಾಗಿದೆ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೇಂದ್ರ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಖ್ಯಾತ ಯಕ್ಷಗಾನ ಕಲಾವಿದ ಸೂರಿಕುಮೇರಿ ಗೋವಿಂದ ಭಟ್ ಹೇಳಿದರು.

ಅಮೃತ ಹಂಚುವುದೆಂದರೆ ಜ್ಞಾನದಾನ ಮಾಡುವ ಅಪೂರ್ವ ಕೆಲಸ. ಕೊರೋನಾ ಕಾಲದ ಧ್ಯಾನಸ್ಥ ಸ್ಥಿತಿಯಲ್ಲಿ ನೆನಪುಗಳ ಕೋಶದಿಂದ ಮತ್ತು ಜೀವನಾನುಭವದ ಹಿನ್ನೆಲೆಯಿಂದ ಮೂಡಿ ಬಂದ ಅಪೂರ್ವವಾದ ಬದುಕಿನ ಸಂಗತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದು ಪ್ರಕಟಿಸಿದ್ದು ಬಹು ಜನಪ್ರಿಯವಾದವು. ಸಾಹಿತ್ಯ ಎಂದರೆ ಸಮಕಾಲೀನ ಇತಿಹಾಸವೂ ಹೌದು. ಅಂತಹ ಬರಹಗಳನ್ನು ದಾಖಲಾತಿಯ ದೃಷ್ಟಿಯಿಂದ ಪುಸ್ತಕರೂಪದಲ್ಲಿ ಪ್ರಕಟಿಸಲಾಗಿದೆ ಎಂದು ಕೃತಿಕಾರರಾದ ಡಾ. ವಸಂತಕುಮಾರ ಪೆರ್ಲ ಹೇಳಿದರು. ವಿದುಷಿ ಅರ್ಥಾ ಪೆರ್ಲ ಸ್ವಾಗತಿಸಿ ನಿರೂಪಿಸಿದರು. ಪ್ರಕಾಶಕಿ ಹಾಗೂ ’ಭೂಮಿಗೀತ’ ಸಂಸ್ಥೆಯ ಸಂಚಾಲಕಿ ಕೆ. ಶೈಲಾಕುಮಾರಿ ವಂದಿಸಿದರು. ವಿದುಷಿ ಅಯನಾ ಪೆರ್ಲ, ನಂದಳಿಕೆ ಬಾಲಚಂದ್ರ ರಾವ್ ಉಪಸ್ಥಿತರಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.