ಬಂಟ್ವಾಳ

ನಿರಂತರ ಮಳೆ: ಬಂಟ್ವಾಳ ತಾಲೂಕಿನ ಹಲವೆಡೆ ಹಾನಿ

ಬಂಟ್ವಾಳನ್ಯೂಸ್ ನಲ್ಲಿ ಮತ್ತಷ್ಟು ಸುದ್ದಿಗಳನ್ನು ಓದಬೇಕೆಂದಿದ್ದರೆ ಈ ವಾಟ್ಸಾಪ್ ಗುಂಪು ಸೇರಬಹುದು

ಜಾಹೀರಾತು

https://chat.whatsapp.com/K7IFcPCl7vR0dzpr8EOgYD

ಬಂಟ್ವಾಳ: ಕಳೆದ ಎರಡು ದಿನಗಳಿಂದ ಬಂಟ್ವಾಳ ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ಬಂಟ್ವಾಳ ತಾಲೂಕಿನ ಹಲವೆಡೆ ವ್ಯಾಪಕ ಹಾನಿಗಳುಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯಿಂದಾಗಿ ಕೆಲವೆಡೆ ಗುಡ್ಡ ಕುಸಿದು ತೊಂದರೆಗಳುಂಟಾಗಿದ್ದರೆ, ಇನ್ನು ಕೆಲವೆಡೆ ಕೃಷಿಗೆ ಹಾನಿಯಾಗಿದೆ. ರಸ್ತೆ ಬದಿಯಲ್ಲಿದ್ದ ಮಣ್ಣು ರಸ್ತೆ ಮಧ್ಯಕ್ಕೆ ಬಂದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದರೆ, ಹೊಂಡಗಳಿಂದ ಕೂಡಿರುವ ಹೆದ್ದಾರಿಯಲ್ಲಿ ಸಂಚಾರ ದುಸ್ತರವಾಗಿದೆ. ನೇತ್ರಾವತಿ ನದಿಯ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು ಅಪಾಯದ ಮಟ್ಟ 8.5 ಮೀಟರ್ ಗೆ ಒಂದೂವರೆ ಮೀಟರ್ ಅಷ್ಟೇ ಕಡಿಮೆ ಇದೆ. ಭಾನುವಾರ ಬೆಳಗ್ಗೆ ನೀರಿನ ಮಟ್ಟ 7.2 ಮೀಟರ್ ಎತ್ತರ ವಿತ್ತು. ಸಂಜೆ ವೇಳೆ 6.9 ಮೀಟರ್ ಇತ್ತು. ತುಂಬೆಯಲ್ಲಿ ಸಂಜೆ ವೇಳೆ ನೀರಿನ ಮಟ್ಟ 5.6 ಮೀಟರ್ ಎತ್ತರವಿತ್ತು.

ಎಲ್ಲೆಲ್ಲಿ ಹಾನಿ:

ವಿಟ್ಲ ಪಡ್ನೂರು ಗ್ರಾಮದ ಬನಾರಿ ಬಾಬಟ್ಟ ಎಂಬಲ್ಲಿ ಅಬ್ದುಲ್ ಯಾನೆ ಅಬ್ದುಲ್ ರಜಾಕ್ ಎಂಬುವರ ಮನೆಗೆ ಗುಡ್ಡದ ಬರೆ ಜರಿದು ಮನೆಯ ಮೇಲೆ ಮರ ಬಿದ್ದು ಮನೆ ಸಂಪೂರ್ಣ ಕುಸಿದು ಬಿದ್ದಿದೆ. ಇವರ ಮನೆಯಲ್ಲಿ ಮಕ್ಕಳು ಸೇರಿ 6 ಜನರಿದ್ದು ಇದರಲ್ಲಿ ಇಬ್ಬರು ತೀವ್ರ ಗಾಯಗೊಂಡು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದ ನಾಲ್ವರು ಸಣ್ಣ ಪುಟ್ಟ ಗಾಯಗಗಳೊಂದಿಗೆ ವಿಟ್ಲ ಸಮುದಾಯ ಕೇಂದ್ರಕ್ಕೆ ದಾಖಲಾಗಿದ್ದಾರೆ. ಮನೆ ಪಕ್ಕದಲ್ಲಿರುವ ವೆಂಕಪ್ಪ ಸಪಲ್ಯ ಅವರ ಮನೆ ಇದ್ದು, ಮನೆ ಖಾಲಿ ಮಾಡಿಸಿ ಹಮೀದ್ ಎಂಬವರ ಮನೆಯಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ.

ಬಿ.ಮೂಡ ಗ್ರಾಮದ ಪಲ್ಲಮಜಲು ಎಂಬಲ್ಲಿ ಎರಡು ಮನೆಗಳ ನಡುವಿನ ಬರೆ ಶನಿವಾರ ರಾತ್ರಿ ಕುಸಿದುಬಿದ್ದಿದೆ. ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ಸಜೀಪಮುನ್ನೂರು ಗ್ರಾಮದ ಆಲಾಡಿ ಎಂಬಲ್ಲಿ ಅಮೀನಾ ಎಂಬವರ ಮನೆಯ ಒಂದು ಪಾರ್ಶ್ವ ಕುಸಿದಿದ್ದು, ಮನೆಗೆ ಹಾನಿಯಾಗಿದೆ. ಮನೆಮಂದಿಯನ್ನು ಮತ್ತೊಂದು ಮನೆಗೆ ಸ್ಥಳಾಂತರಿಸಲಾಗಿದೆ, ಶನಿವಾರದಿಂದಲೇ ಸುರಿಯುತ್ತಿರುವ ಭಾರಿ ಮಳೆಗೆ ಭಾನುವಾರ ಸಾಲೆತ್ತೂರು ಕಟ್ಟೆ ಮಸೀದಿ ಬಳಿ ರಸ್ತೆಬದಿ ಗುಡ್ಡ ಕುಸಿತದಿಂದಾಗಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ಲೋಕೋಪಯೋಗಿ ಇಲಾಖೆಯಿಂದ ಮಣ್ಣು ತೆರವು ಕಾರ್ಯಾಚರಣೆ ನಡೆದು, ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಅಮ್ಟಾಡಿ ಗ್ರಾಮದ ಏರ್ಯ ಎಂಬಲ್ಲಿ ಆರತಿ ಶೆಟ್ಟಿ ಎಂಬವರ ಮನೆಯ ಹಿಂಭಾಗ ಕಂಪೌಂಡ್ ಜರಿದು ಬಿದ್ದಿದೆ. ಕಳ್ಳಿಗೆ ಗ್ರಾಮದ ಸುಂದರ ಎಂಬವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಸಾಲೆತ್ತೂರು ಗ್ರಾಮದ ರಾಮಣ್ಣ ಶೆಟ್ಟಿ ಎಂಬವರ ವಾಸ್ತವ್ಯದ ಪಕ್ಕಾ ಮನೆಗೆ ಅಡಕೆ ಮರ ಬಿದ್ದು ಹಾನಿಯಾಗಿದೆ. ಕೊಳ್ನಾಡು ಗ್ರಾಮದ ರುಕ್ಮ ಎಂಬವರ ಮನೆಯ ಮುಂಭಾಗದ ತಡೆಗೋಡೆ ಕುಸಿದು ಪಿಡಬ್ಲ್ಯುಡಿ ರಸ್ತೆಗೆ ಬಿದ್ದಿದ್ದು, ಬಳಿಕ ಪಿಡಬ್ಲ್ಯುಡಿ ಇಲಾಖೆಯಿಂದ ರಸ್ತೆ ತೆರವು ಮಾಡಲಾಯಿತು.ಕೊಳ್ನಾಡು ಗ್ರಾಮದ ಆದಂ ಕುಂಞ ಎಂಬವರ ವಾಸ್ತವ್ಯದ ಪಕ್ಕಾ ಮನೆಯ ಹಿಂದಿನ ಧರೆ ಕುಸಿದು ಮನೆಗೆ ಸ್ವಲ್ಪ ಪ್ರಮಾಣದ ಹಾನಿಯಾಗಿದೆ.

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.