ಬಂಟ್ವಾಳ: ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಬಡವರ ಪರಿಸ್ಥಿತಿ ಶೋಚನೀಯವಾಗಿದೆ. ಜನರ ಸಂಕಷ್ಟಗಳಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಬಂಟ್ವಾಳ ತಾಲೂಕಿನ ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಮಂಗಳವಾರ ಬಿ.ಸಿ.ರೋಡಿನ ಮಿನಿ ವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಯಿತು.
ಅಧ್ಯಕ್ಷ ಬಿ.ಎಂ.ಪ್ರಭಾಕರ ದೈವಗುಡ್ಡೆ, ಪ್ರಧಾನ ಕಾರ್ಯದರ್ಶಿ ಬಿ.ಶೇಖರ್ ನೇತೃತ್ವದಲ್ಲಿ ಈ ಸಂಬಂಧ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಮುಖಂಡರಾದ ರಾಮಣ್ಣ ವಿಟ್ಲ, ಸುರೇಶ್ ಕುಮಾರ್, ನ್ಯಾಯವಾದಿ ಚಂದ್ರಶೇಖರ ಪೂಜಾರಿ, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಹಾರೂನ್ ರಶೀದ್, ಲೋಕೇಶ್ ಸುವರ್ಣ, ಪ್ರಕಾಶ್ ಶೆಟ್ಟಿ ತುಂಬೆ ಶ್ರೀಶೈಲ, ಪುರಸಭಾ ಸದಸ್ಯ ಲೋಲಾಕ್ಷ ಶೆಟ್ಟಿ, ಸುರೇಂದ್ರ ಕೋಟ್ಯಾನ್, ಬಾಬು ಭಂಡಾರಿ, ಲೋಕೇಶ ಪೂಜಾರಿ, ಇಸ್ಮಾಯಿಲ್ ಕೆಳಗಿನಪೇಟೆ, ಶರೀಫ್ ಮಧ್ವ, ಸರಸ್ವತಿ ಕಡೇಶಿವಾಲಯ, ಪ್ರೇಮನಾಥ ಕೆ, ಉದಯ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಲಾಕ್ ಡೌನ್ ನಿಂದಾಗಿ ರಾಜ್ಯದ ವಿವಿಧ ಕ್ಷೇತ್ರದಲ್ಲಿ ದುಡಿಯುವ ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಪರಿಹಾರ ಧನಸಹಾಯ ಸಮರ್ಪಕವಾಗಿ ಬಿಡುಗಡೆ ಮಾಡಿಲ್ಲ. ದ.ಕ.ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿಗೆ ಉಚಿತ ಚಿಕಿತ್ಸೆಯನ್ನು ಯಾವ ಕಾರ್ಡೂ ಇಲ್ಲದೆ ಆಧಾರ್ ಕಾರ್ಡ್ ಇದ್ದರೆ ಸಾಕು ಎಂದು ಸರ್ಕಾರದ ಉಸ್ತುವಾರಿ ಮಂತ್ರಿಗಳು ಹೇಳಿದ್ದರೂ ಖಾಸಗಿ ಆಸ್ಪತ್ರೆಗಳ ಶುಲ್ಕ ದುಬಾರಿಯಾಗುವ ಬಗ್ಗೆ ದೂರುಗಳಿವೆ. ಕೊರೊನಾ ಹೆಸರಲ್ಲಿ ಭಯ ಹುಟ್ಟಿಸುವುದನ್ನು ನಿಯಂತ್ರಿಸಿ, ಮೂಲಸೌಕರ್ಯ ಹೆಚ್ಚಿಸಿ, ಕ್ವಾರಂಟೈನ್ ಕೇಂದ್ರಗಳ ಸಹಿತ ಬಡವರಿಗೆ ಸರಿಯಾದ ಸೌಕರ್ಯಗಳನ್ನು ಒದಗಿಸಿ ಎಂದು ಮನವಿ ಮಾಡಲಾಯಿತು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…