ಬಂಟ್ವಾಳ

ಶತಚಂಡಿಕಾಯಾಗ, ಧರ್ಮನೇಮಕ್ಕೆ ಗಣ್ಯರ ದಂಡು, ನಿರಂತರ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ

ಜಾಹೀರಾತು

www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ 9448548127

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಒಡ್ಡೂರು ಫಾಮ್೯ ಹೌಸ್ ನಲ್ಲಿ ಫೆ.29ರಂದು ನಡೆಯುವ ಶತಚಂಡಿಕಾಯಾಗ, ಧರ್ಮನೇಮಕ್ಕೆ ಗಣ್ಯರ ದಂಡೇ ಬರಲಿದೆ. ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಅವರು ಶತಚಂಡಿಕಾಯಾಗ ಪೂರ್ಣಾಹುತಿಯ ಸಂದರ್ಭ ಹಾಗೂ ಉಪಮುಖ್ಯಮಂತ್ರಿ ಡಾ.ಅಶ್ವಥ ನಾರಾಯಣ ಸೇರಿದಂತೆ ಸಚಿವರುಗಳಾದ ಬಸವರಾಜ್ ಬೊಮ್ಮಾಯಿ, ಡಾ.ಸುಧಾಕರ್ ಆರ್ ಆಶೋಕ್, ಭೈರತಿ ಸುರೇಶ್, ನಾರಾಯಣ ಗೌಡ,ಕೋಟಾ ಶ್ರೀನಿವಾಸ ಪೂಜಾರಿ ಸಹಿತ ಹತ್ತಕ್ಕೂ ಅಧಿಕ ಮಂತ್ರಿಗಳು, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಉಭಯ ಸದನಗಳ ಸಭಾಧ್ಯಕ್ಷರು, ಸಂಸದರಾದ ನಳಿನ್ ಕುಮಾರ್ ಕಟೀಲ್,  ಶೋಭಾ ಕರಂದ್ಲಾಜೆ  40ಕ್ಕೂ ಅಧಿಕ ಶಾಸಕರು ಶತಚಂಡಿಕಾಯಾಗ ಧರ್ಮನೇಮ ವೇಳೆ ಭಾಗವಹಿಸುವ ನಿರೀಕ್ಷೆ ಇದೆ ಎಂದು ಶಾಸಕ ರಾಜೇಶ್ ನಾಯ್ಕ್ ತಿಳಿಸಿದ್ದಾರೆ.

ಶಾಸಕರ ಮನೆ ಮುಂಭಾಗದಲ್ಲಿ ಅವರ ಸಂಕಲ್ಪದಂತೆ  ಶತಚಂಡಿಕಾಯಾಗ ಮುಂಜಾನೆ 6 ಗಂಟೆಗೆ ಆರಂಭವಾಗಲಿದೆ. ಸುಮಾರು 11.30 ರ ಹೊತ್ತಿಗೆ ಶತಚಂಡಿಕಾಯಾಗದ ಪೂರ್ಣಾಹುತಿ ನಡೆಯಲಿದೆ. ಇದಕ್ಕಾಗಿ  ಮುಂಭಾಗದಲ್ಲಿ ಬೃಹತ್ ಗಾತ್ರದ ಹೋಮಕುಂಡವನ್ನು  ನಿರ್ಮಿಸಲಾಗಿದೆ. ಎಡಪದವು ವೆಂಕಟೇಶ್ ತಂತ್ರಿಯವರ ಮಾರ್ಗದರ್ಶನ ರತೀಶ್ ಭಟ್ ಮತ್ತವರ ತಂಡ ಯಾಗದ ಪೌರೋಹಿತ್ಯ ಕಾರ್ಯದಲ್ಲಿ ತೊಡಗಲಿದೆ.  ರಾತ್ರಿ ಧರ್ಮದೈವ ಶ್ರೀಕೊಡಮಣಿತ್ತಾಯನ  ಧರ್ಮನೇಮೋತ್ಸವ ನಡೆಯುವುದು.

ಸಾಂಸ್ಕೃತಿಕ ಕಾರ್ಯಕ್ರಮ:

ಮಧ್ಯಾಹ್ನ 2 ರಿಂದ ರಾತ್ರಿ 9 ಗಂಟೆಯ ತನಕ ಯಕ್ಷಗಾನ ವೈಭವ, ಪ್ರಶಂಸ ತಂಡದ ಹಾಸ್ಯ, ಜಾನಪದ ಕಾರ್ಯಕ್ರಮಗಳ ಸಹಿತ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.  ಇದಕ್ಕಾಗಿ  ಮೈದಾನದಲ್ಲಿ  ಪ್ರತ್ಯೇಕವಾದ ಬೃಹತ್  ವೇದಿಕೆಯನ್ನು ನಿರ್ಮಿಸಲಾಗಿದ್ದು, ನಿರಂತರ ಉಪಹಾರ, ಅನ್ನಸಂತರ್ಪಣೆ ಇರಲಿದೆ.

ನಿರಂತರ ಭಜನೆ:  ಸೂರ್ಯೋದಯದ ವೇಳೆ ಭಜನಾಕಾರ್ಯಕ್ಕೆ ರಾಜೇಶ್ ನಾಯ್ಕ್ ದಂಪತಿ ದೀಪಪ್ರಜ್ವಲನಗೈದು ಚಾಲನೆ ನೀಡಿದರು.ನಾಳೆ ಸೂರ್ಯೋದಯದ‌ ತನಕ‌ ನಿರಂತರವಾಗಿ 23 ಭಜನಾ ತಂಡಗಳು ಈ ಭಜನಾ ಕಾರ್ಯಕ್ರಮದಲ್ಲಿ  ಭಾಗಿಯಾಗಲಿವೆ. ಭಜನಾ ಕಾರ್ಯಕ್ರಮದ ಉಸ್ತುವಾರಿಯನ್ನು ವೆಂಕಟೇಶ್ ನಾವುಡ ಪೊಳಲಿ ಅವರು ವಹಿಸಿದ್ದಾರೆ.

ಒಡ್ಡೂರು ಧರ್ಮ ಚಾವಡಿಗೆ ಆಗಮಿಸುವ ಭಕ್ತಾಧಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಬಿ.ಸಿ.ರೋಡು ರಕ್ತೇಶ್ವರಿ ದೇವಸ್ಥಾನ ಹಾಗೂ  ಪೊಳಲಿ‌ ಸಮೀಪದ ಕೈಕಂಬದಿಂದ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು‌ ಇದರ ಸದುಪಯೋಗ ಪಡೆದುಕೊಳ್ಳುವಂತೆ ಶಾಸಕ ರಾಜೇಶ್ ನಾಯ್ಕ್ ಅವರು ಮನವಿ ಮಾಡಿದ್ದಾರೆ.

ನೂತನವಾಗಿ ನಿರ್ಮಾಣಗೊಂಡಿರುವ  ಧರ್ಮಚಾವಡಿಯಲ್ಲಿ  ಶ್ರೀ ಕೊಡಮಣಿತ್ತಾಯ ಧರ್ಮದೈವದ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ,ದರ್ಶನ ಸೇವೆ  ಶುಕ್ರವಾರ ನಡೆಯಿತು.  ಎಡಪದವು ವೆಂಕಟೇಶ್ ತಂತ್ರಿಯವರ ನೇತೃತ್ವ, ರತೀಶ್ ಭಟ್  ಮತ್ತವರ ತಂಡದ ಪೌರೋಹಿತ್ವದಲ್ಲಿ  ವಿವಿಧ ಧಾರ್ಮಿಕ ವಿಧಿವಿಧಾನಗಳ ಬಳಿಕ ಧರ್ಮದೈವದ ಪ್ರತಿಷ್ಠೆ ಹಾಗೂ ಕಲಶಾಭಿಷೇಕ ನೆರವೇರಿತು.ಬಳಿಕ ಕಟ್ಟುಪಾಡಿನಂತೆ ದರ್ಶನ ಪಾತ್ರಿಯಿಂದ ದರ್ಶನ ಸೇವೆಯು ನಡೆದಿದ್ದು,ಶಾಸಕ ರಾಜೇಶ್ ನಾಯ್ಕ್ ದಂಪತಿ,ಕುಟುಂಬಸ್ಥರು ಸಹಿತ ನೂರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.

ಗಣ್ಯರ ಭೇಟಿ: ಶುಕ್ರವಾರ ನಡೆದ ಧರ್ಮದೈವದ ಪ್ರತಿಷ್ಠಾ ಕಾರ್ಯದ ವೇಳೆ ಬೀದರ್ ಶಾಸಕ ರಾಜಶೇಖರ ಪಾಟೀಲ್, ವಿಧಾನಪರಿಷತ್ ಸದಸ್ಯರಾದ ಹರೀಶ್ ಕುಮಾರ್ ಬೆಳ್ತಂಗಡಿ, ಬೋಜೇಗೌಡ, ಜಿಪಂ ಸದಸ್ಯರಾದ ತುಂಗಪ್ಪ ಬಂಗೇರ, ಕಮಲಾಕ್ಷಿ ಪೂಜಾರಿ, ಮಮತಾ ಗಟ್ಟಿ, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ತಾಪಂ ಸದಸ್ಯರಾದ ಪ್ರಭಾಕರ ಪ್ರಭು, ಧನಲಕ್ಷ್ಮಿ ಬಂಗೇರ, ಯಶವಂತ ಪೂಜಾರಿ ಪೊಳಲಿ, ನಾಗೇಶ್ ಶೆಟ್ಟಿ, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ ಸಹಿತ ಹಲವಾರು ಗಣ್ಯರು ಅಗಮಿಸಿದ್ದರು‌

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.