????????????????????????????????????
ಸನ್ಮಾನ ಸಮಾರಂಭ
ಒಡಿಯೂರು ಶ್ರೀಗಳು ಮಾತನಾಡುತ್ತಿರುವುದು.
ಆತ್ಮೋನ್ನತಿಯ ಕಡೆಗೆ ನಾವು ನಮ್ಮ ರಥ ವನ್ನು ಎಳೆಯಬೇಕಾಗಿದೆ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಹೇಳಿದರು. ಮಂಗಳವಾರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ವತಿಯಿಂದ ನಡೆಯುತ್ತಿರುವ ಶ್ರೀ ಒಡಿಯೂರು ರಥೋತ್ಸವ- ತುಳುನಾಡ ಜಾತ್ರೆ ಪ್ರಯುಕ್ತ ನಡೆದ ಒಡಿಯೂರು ರಥೋತ್ಸವದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ, ಅಶೀರ್ವಚನ ನೀಡಿದರು.
ಸಾಧ್ವೀ ಮಾತಾನಂದ ಮಯೀ ಆಶೀರ್ವಚನ ನೀಡಿ ಆತ್ಮ ಶಕ್ತಿ ಉದ್ದೀಪನ ಮಾಡುವ ಉದ್ದೇಶವನ್ನಿಟ್ಟುಕೊಂಡು ಶ್ರೀ ಸಂಸ್ಥಾನದಲ್ಲಿ ಮಾನವೀಯತೆಗೆ ಪೂರಕವಾದ ಕಾರ್ಯಗಳು ನಡೆಯುತ್ತಿದೆ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ ನಿಜ ಅರ್ಥದ ಗ್ರಾಮ ವಿಕಾಸ ಒಡಿಯೂರು ಸಂಸ್ಥಾನದ ಮೂಲಕ ನಡೆದಿದೆ ಎಂದರು.
ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ ತುಳುನಾಡಿನ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಒಡಿಯೂರು ಸಂಸ್ಥಾನ ವಿಶೇಷ ಮುತುವರ್ಜಿ ವಹಿಸಿದೆ ಎಂದರು.
ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ಮಾತನಾಡಿ ದೇವರು ದೇಶ, ಧರ್ಮ ವನ್ನು ಜೀವನ ಪದ್ಧತಿಯನ್ನಾಗಿ ಸ್ವೀಕರಿಸಿದ ಜಗತ್ತಿನ ಏಕೈಕ ದೇಶ ಭಾರತವಾಗಿದೆ ಎಂದರು.
ಅಂತಾರಾಷ್ಟ್ರೀಯ ಕ್ರೀಡಾಪಟು ಪಟ್ಲಗುತ್ತು ಅನೀಶ್ ಶೆಟ್ಟಿ ಅವರಿಗೆ ಶ್ರೀ ಗುರುದೇವಾನುಗ್ರಹ ಪುರಸ್ಕಾರ ನೀಡಲಾಯಿತು. ಬೆಳಿಗ್ಗೆ ವೇ.ಮೂ.ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಸಾರ್ವಜನಿಕ ಸತ್ಯ ನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ, ಮಹಾಮಂಗಳಾರತಿ, ಮಹಾಸಂತರ್ಪಣೆ ನಡೆಯಿತು. ಕುಂಬಳೆ ನಾಟ್ಯ ವಿದ್ಯಾನಿಲಯ ವಿದುಷಿ ವಿದ್ಯಾಲಕ್ಷ್ಮೀ ಅವರ ಶಿಷ್ಯವೃಂದ ದವರಿಂದ ನೃತ್ಯ ಸಂಭ್ರಮ ನಡೆಯಿತು. ಗುರುದೇವ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.
ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ಹೈಟೆಕ್ ಇಲೆಕ್ಪ್ರಿಫಿಕೇಶನ್ ಎಂಜಿನಿಯರಿಂಗ್ ನ ಆಡಳಿತ ನಿರ್ದೇಶಕ ರವಿನಾಥ್ ವಿ ಶೆಟ್ಟಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಸುರೇಶ್ ರೈ, ಉದ್ಯಮಿ ವಾಮಯ್ಯ ಬಿ ಶೆಟ್ಟಿ ಮುಂಬೈ, ರೇವತಿ ವಾಮಯ್ಯ ಶೆಟ್ಟಿ, ಒಡಿಯೂರು ಗುರುದೇವ ಸೇವಾ ಬಳಗದ ಅಧ್ಯಕ್ಷ ಎ ಅಶೋಕ್ ಬಿಜೈ, ಉದ್ಯಮಿ ಕೃಷ್ಣ ಎಲ್ ಶೆಟ್ಟಿ, ಬರೋಡ ತುಳುಕೂಟದ ಅಧ್ಯಕ್ಷ ಶಶಿಧರ್ ಶೆಟ್ಟಿ ಬರೋಡ, ಅಂಕ್ಲೇಶ್ವರ ತುಳುಕೂಟದ ಅಧ್ಯಕ್ಷ ಶಂಕರ್ ಶೆಟ್ಟಿ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಪಿ ಶೆಟ್ಟಿ, ಗ್ರಾಮ ವಿಕಾಸ ಯೋಜನೆ ವಿವಿಧ ಘಟಕಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ಯಶವಂತ ವಿಟ್ಲ ಸ್ವಾಗತಿಸಿದರು. ಚಂದ್ರಶೇಖರ ಉಪಾಧ್ಯಾಯ ಬಳಗ ಪ್ರಾರ್ಥಿಸಿದರು. ಪ್ರಕಾಶ್ ಶೆಟ್ಟಿ ಪೇಟೆಮನೆ ನಿರೂಪಿಸಿದರು. ಸೇರಾಜೆ ಗಣಪತಿ ಭಟ್ ವಂದಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…