ಕವರ್ ಸ್ಟೋರಿ

ಧಾರ್ಮಿಕ ಪ್ರವಾಸಿ ತಾಣವಾಗಿ ಸೊಬಗಿನ ನಂದಾವರ

  • ಹರೀಶ ಮಾಂಬಾಡಿ

www.bantwalnews.com

ದೂರದ ಊರುಗಳಿಂದ ಆಗಮಿಸುವ ಭಕ್ತರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಡುಕುವುದು ದೇವಸ್ಥಾನ, ನದಿ ಮತ್ತು ಸಮುದ್ರ. ಬಂಟ್ವಾಳ ತಾಲೂಕಿನಲ್ಲಿ ಹರಿಯುತ್ತಿರುವ ಜೀವನದಿ ನೇತ್ರಾವತಿ ಸೊಬಗು ಬಿ.ಸಿ.ರೋಡ್ ಪರಿಸರದಲ್ಲಿ ಮತ್ತಷ್ಟು ಅಂದ. ನದಿ ತೀರದಲ್ಲೇ ಇದೆ ಇತಿಹಾಸ ಪ್ರಸಿದ್ಧ ಧಾರ್ಮಿಕ ತಾಣ ನಂದಾವರ ವಿನಾಯಕ ಶಂಕರನಾರಾಯಣ ದುರ್ಗಾಂಬಾ ದೇವರ ಸನ್ನಿಧಿ. 

ಜಾಹೀರಾತು

ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ.ಸಿ. ಭಂಡಾರಿ ನೇತೃತ್ವದ ತಂಡದ ಮುಂದಾಳತ್ವದಲ್ಲಿ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಈ ದೇವಸ್ಥಾನವೀಗ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದ್ದು, ನದಿ ತೀರದಲ್ಲಿ ಸುಮಾರು 1 ಕೋಟಿ ರುಪಾಯಿ ಅಂದಾಜು ವೆಚ್ಚದಲ್ಲಿ ನೂತನ ಜ್ಞಾನ ಮಂದಿರ ಸಮುದಾಯ ಭವನ ಫೆ. 9ರಂದು ಲೋಕಾರ್ಪಣೆಗೆ ಸಜ್ಜಾಗುತ್ತಿದೆ. ಇದರ ಜೊತೆಗೆ ಈಗಾಗಲೇ ಪ್ರಸ್ತಾಪಗೊಂಡಿರುವ ನದೀ ತೀರದ ರಸ್ತೆ ನಿರ್ಮಾಣಕ್ಕೆ ಪ್ರವಾಸೋದ್ಯಮ ಹಿನ್ನೆಲೆಯಲ್ಲಿ ಸುಮಾರು 7 ಕೋಟಿ ರೂ ವೆಚ್ಚಕ್ಕೆ ಪ್ರಸ್ತಾವನೆಗೊಂಡಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ, ನಂದಾವರ ಕ್ಷೇತ್ರ ಸ್ಪಿರಿಚುವಲ್ ಟೂರಿಸಂ (ಧಾರ್ಮಿಕ ಪ್ರವಾಸೋದ್ಯಮ)ದ ಪ್ರಮುಖ ಆಕರ್ಷಣೆಯಾಗಿ ಮೂಡಿಬರಲಿದೆ.

ನಂದಾವರ ಸನ್ನಿಯಲ್ಲಿ ನಿರ್ಮಾಣವಾಗುತ್ತಿರುವ ಜ್ಞಾನಮಂದಿರ ಸಮುದಾಯ ಭವನ, ಅರ್ಚಕರ ವಸತಿಗೃಹ, ನೈವೇದ್ಯಕೋಣೆ, ವ್ಯವಸ್ಥಾಪನಾ ಸಮಿತಿ ಕಚೇರಿ, ಉತ್ತರ ಭಾಗದಲ್ಲಿ ತಡೆಗೋಡೆ ನಿರ್ಮಾಣ ಹಾಗೂ ಯಜ್ಞಶಾಲೆ ನಿರ್ಮಾಣಗೊಳ್ಳಲಿದೆ. ಜ್ಞಾನಮಂದಿರದಲ್ಲಿ ನದಿಗೆ ಮುಖ ಮಾಡಿದ ಭಾಗದಲ್ಲಿ ಎರಡು ಆನೆಗಳು ಹಾಗೂ ಈಶ್ವರನ ರಚನೆಗಳು ಭಕ್ತರನ್ನು ಆಕರ್ಷಿಸಲಿವೆ.

ವಿಜಯಲಕ್ಷ್ಮೀ ಸುಜೀರ್‌ಗುತ್ತು ಸಂಜೀವ ಚೌಟ ಸಭಾಂಗಣ ನಿರ್ಮಾಣಕ್ಕೆ ಸುಜೀರ್‌ಗುತ್ತು ಸಂಜೀವ ಚೌಟ ನೆನಪಿಗೋಸ್ಕರ ಮೈಟ್ ಅಧ್ಯಕ್ಷ ರಾಜೇಶ್ ಚೌಟ ನೆರವು ಒದಗಿಸುತ್ತಿದ್ದು, ಈ ಜ್ಞಾನಮಂದಿರ ಸಮುದಾಯ ಭವನ ಸುಮಾರು 1 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಸಜೀಪಮಾಗಣೆಯ ಸುತ್ತಮುತ್ತಲಿನ ಮಕ್ಕಳಿಗೆ ಸಂಸ್ಕಾರವನ್ನು ಉದ್ದೀಪಗೊಳಿಸುವ ನಿಟ್ಟಿನಲ್ಲಿ ಯಕ್ಷಗಾನ, ತಾಳಮದ್ದಳೆ, ಹರಿಕಥೆ, ಭರತನಾಟ್ಯ, ಭಜನೆ ಮೊದಲಾದ ತರಬೇತಿಗಳನ್ನು ಆಯೋಜಿಸಲು ಜ್ಞಾನಮಂದಿರ ಸಹಕಾರಿಯಾಗುತ್ತದೆ. ಬಂಟ್ವಾಳ ಶಾಸಕ ರಾಜೇಶ್ ನಾಯಕ್  50 ಲಕ್ಷ ರುಪಾಯಿ ಅನುದಾನದಲ್ಲಿ ನದಿ ತೀರದ ತಡೆಗೋಡೆ ಕಾಮಗಾರಿಯೂ ಪ್ರಗತಿಯಲ್ಲಿದೆ ಎನ್ನುತ್ತಾರೆ ಎ.ಸಿ.ಭಂಡಾರಿ.

ಕಳೆದ ವರ್ಷ ನೇತ್ರಧಾರಾ ಸಭಾಂಗಣ ಉದ್ಘಾಟನೆಗೊಂಡಿತ್ತು. ಈ ವರ್ಷ ಜ್ಞಾನಮಂದಿರ ಸಮುದಾಯ ಭವನ ಲೋಕಾರ್ಪಣೆಯಾಗಲಿದೆ. ಕ್ಷೇತ್ರಕ್ಕೆ ಐತಿಹಾಸಿಕ, ಧಾರ್ಮಿಕ ಹಿನ್ನೆಲೆಯಿದ್ದು, ಧಾರ್ಮಿಕ ಪ್ರವಾಸಿ ಕೇಂದ್ರವಾಗಿ ಮೂಡಿಬರಲು ಸಹಕಾರಿಯಾಗುವಂತೆ ನದಿ ತೀರದುದ್ದಕ್ಕೂ ರಸ್ತೆಯೊಂದರ ನಿರ್ಮಾಣವಾಗುವ ಪ್ರಸ್ತಾಪವಿದೆ. ಇದಾದರೆ ನಂದಾವರಕ್ಕೆ ತಲುಪುವುದೂ ಸುಲಭವಾಗುತ್ತದೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲಾಗುತ್ತದೆ ಎನ್ನುತ್ತಾರೆ ಎ.ಸಿ.ಭಂಡಾರಿ.

ನಂದಾವರದಿಂದ ಪಾಣೆಮಂಗಳೂರಿನ ವೀರ ವಿಠಲ ದೇವಸ್ಥಾನವನ್ನು ಸಂಪರ್ಕಿಸುವಂತೆ ನೇತ್ರಾವತಿ ನದಿ ತಟದಲ್ಲಿಯೇ ರಸ್ತೆ ಮತ್ತು ಸೇತುವೆ ನಿರ್ಮಾಣದ ಯೋಜನೆ ಇದು. ಮಾಜಿ ಸಚಿವ ಬಿ.ರಮಾನಾಥ ರೈ ಅವಧಿಯಲ್ಲಿ ಈ ರಸ್ತೆ ನಿರ್ಮಾಣದ ಯೋಜನೆ ರೂಪುಗೊಂಡಿದ್ದು, ಬಳಿಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಶಾಸಕರಾದ ನಂತರ 7 ಕೋಟಿ ರೂ ಯೋಜನೆ ಪ್ರಸ್ತಾಪ ದೊರಕಿತ್ತು. 

 

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts