ಬಂಟ್ವಾಳ

ಸಾರ್ವಜನಿಕ ಶೌಚಾಲಯ, ಸಂತೆಮಾರುಕಟ್ಟೆ ನಿರ್ಮಾಣಕ್ಕೆ ಅನುದಾನ ಮೀಸಲು

ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ.ಸಿ.ರೋಡು,ಕೈಕಂಬ ಹಾಗೂ ಮೆಲ್ಕಾರ್ ಗಳಲ್ಲಿ ಸಾರ್ವಜನಿಕ ಶೌಚಾಲಯ ಮತ್ತು ಬಿ.ಸಿ.ರೋಡು ಪರಿಸರದಲ್ಲಿ ಸಂತೆ ಮಾರುಕಟ್ಟೆ ನಿರ್ಮಾಣಕ್ಕೆ ಮುಂದಿನ ಬಜೆಟ್ ನಲ್ಲಿ ಅನುದಾನ ಮೀಸಲಿರಿಸಲಾಗುವುದು.

www.bantwalnews.com Editor: Harish Mambady

ಜಾಹೀರಾತು

ನಾನಾ ಸಂಘ ಸಂಸ್ಥೆಗಳ ಪ್ರಮುಖರು, ಪತ್ರಕರ್ತರು ನೀಡಿದ ಸಲಹೆಯನ್ನು ಪರಿಗಣಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಬಿ.ಸಿ.ರೋಡಿನಲ್ಲಿ ನಿರ್ಮಾಣಗೊಂಡ ಅಂಬೇಡ್ಕರ್ ಭವನದಲ್ಲಿ ಅಡುಗೆ ತಯಾರಿಗೆ ಶಾಶ್ವತ ವ್ಯವಸ್ಥೆ, ಫ್ಲೆಕ್ಸ್ ಗಳ ಹಾವಳಿಗೆ ಕಡಿವಾಣ, ಕ್ಯಾರಿಬ್ಯಾಗ್ ಸಮಸ್ಯೆಗೆ ಶೀಘ್ರ ಸಭೆ, ಫುಟ್ ಪಾತ್ ಸಮಸ್ಯೆ, ನಗರ ಶುಚಿತ್ವ, ತ್ಯಾಜ್ಯ ವಿಲೇವಾರಿ, ಕುಡಿಯುವ ನೀರಿನ ಯೋಜನೆಯ ಸಮಸ್ಯೆಗಳ ಕುರಿತು ಗಮನಹರಿಸಿ, ಕ್ರಮ ಕೈಗೊಳ್ಳುವುದಾಗಿ ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಬಜೆಟ್ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ತಿಳಿಸಿದರು.

ಬಂಟ್ವಾಳ ತಾಲೂಕಿನ ಹೃದಯಭಾಗದಲ್ಲಿ ನಾನಾ ಕೆಲಸಕಾರ್ಯಗಳಿಗೆ ಬರುವ ಜನಸಾಮಾನ್ಯರಿಗೆ ಬಿ.ಸಿ.ರೋಡಿನಲ್ಲಿ ಸಾರ್ವಜನಿಕ ಶೌಚಾಲಯವಿಲ್ಲದೆ ಪರದಾಡುತ್ತಿದ್ದು, ಸಾರ್ವಜನಿಕ ಸ್ಥಳವೇ ಶೌಚಾಲಯವಾಗಿದೆ. ಕೈಕಂಬ, ಮೇಲ್ಕಾರುಗಳಲ್ಲೂ ಸಾರ್ವಜನಿಕ ಶೌಚಾಲಯವಿಲ್ಲ. ಇದನ್ನು ತುರ್ತು ಅಗತ್ಯ ಎಂದು ಪರಿಗಣಿಸಿ ಬಜೆಟ್ ನಲ್ಲಿ ಅನುದಾನ ಮೀಸಲಿಡಬೇಕು ಎಂದು ಗಮನ ಸೆಳೆಯಲಾಯಿತು.

ಇದಕ್ಕೆ ಸ್ಪಂದಿಸಿದ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರು ಪ್ರಮುಖ ಈ ಮೂರು ಕಡೆಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಬಜೆಟ್ ನಲ್ಲಿ ಅನುದಾನ ಮೀಸಲಿಡುವುದಾಗಿ ಪ್ರಕಟಿಸಿದರು.

ವಾರದ ಸಂತೆ ಮಾಡಿ:

ಪ್ರತಿ ಭಾನುವಾರ ಬಿ.ಸಿ.ರೋಡಿನಲ್ಲಿ  ರಸ್ತೆಬದಿ ತರಕಾರಿ ಇನ್ನಿತರ ಮನೆ ಬಳಕೆ ಸಾಮಾಗ್ರಿಗಳನ್ನು ಮಾರಾಟಮಾಡುವ ಬೀದಿಬದಿ ವ್ಯಾಪಾರಸ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂತೆ ಮಾರುಕಟ್ಟೆ ನಿರ್ಮಿಸಿಕೊಡುವಂತೆ ಮುಖಂಡ ರಾಜ ಪಲ್ಲಮಜಲು ಆಗ್ರಹಿಸಿದರು. ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರು ಈ ನಿಟ್ಟಿನಲ್ಲಿ ಬಿ.ಸಿ.ರೋಡ್ ನಲ್ಲಿ ಸ್ಥಳ ಪರಿಶೀಲಿಸಿ ವಾರದ ಸಂತೆ ಮಾರುಕಟ್ಟೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು. ಬಿ.ಸಿ.ರೋಡಿನಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ಭವನಕ್ಕೆ ಹೊರಭಾಗದಲ್ಲಿ ಅಡುಗೆ ಕೋಣೆ ನಿರ್ಮಾಣಕ್ಕೆ ಅನುದಾನ ಮೀಸಲಿಡುವಂತೆ ಅವರು ಮನವಿ ಮಾಡಿದರು. ಸಾಮೂಹಿಕ ವಿವಾಹಕ್ಕೆ ಅನುದಾನ ನಿಗದಿಗೊಳಿಸುವಂತೆ ಅವರು ಒತ್ತಾಯಿಸಿದರು.

ಕೆಯುಡಬ್ಲುಎಸ್ ವಿರುದ್ದ ಅಸಮಾಧಾನ: 

ಪುರಸಭಾ ವ್ಯಾಪ್ತಿಯಲ್ಲಿ ಎರಡನೇ ಹಂತದ ಕುಡಿಯುವ ನೀರಿನ ಯೋಜನೆಯ ಅನುಷ್ಠಾನದ ವೇಳೆ ಪೈಪ್ ಲೈನ್ ಅಳವಡಿಸಲು ಎಲ್ಲ ರಸ್ತೆಗಳನ್ನು ಅಗೆದು ಆರೆಬರೆ ಕೆಲಸಮಾಡಿರುವ ಕೆಯುಡಬ್ಲುಎಸ್ ವಿರುದ್ದ ಸಭೆಯಲ್ಲಿ  ತೀವ್ರ ಅಸಮಾಧಾನ ವ್ಯಕ್ತವಾಯಿತು. ಹೊಸ,ಹೊಸ ಕಾಂಕ್ರೇಟ್ ರಸ್ತೆ,ಡಾಮಾರು ರಸ್ತೆಯನ್ನು ಅಗೆದೆ ಹಾಕಿ ಬಳಿಕ ಅದನ್ನು ಸಮರ್ಪಕವಾಗಿ ಮುಚ್ಚದೆ ಮತ್ತು ಹಿಡಿದ ಕೆಲಸವನ್ನು ಅಪೂರ್ಣಗೊಳಿಸಿರುವುದರ ವಿರುದ್ಧ ದೂರುಗಳು ಬಂದವು. ಈ ಬಗ್ಗೆ ಸಂಬಂಧಪಟ್ಟ ವರನ್ನು ಕರೆಸಿ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಮುಖ್ಯಾಧಿಕಾರಿ ಭರವಸೆಯಿತ್ತರು. ಪುರಸಭಾ ವ್ಯಾಪ್ತಿಯಲ್ಲಿ ಪುಟ್ ಪಾತ್ ಇಲ್ಲದೆ ಪಾದಚಾರಿಗಳಿಗಾಗುವ ತೊಂದರೆ,ಬಿ.ಸಿ.ರೋಡಿನಲ್ಲಿರುವ ಪುಟ್ ಪಾತ್ ನ್ನು ದ್ವಿಚಕ್ರ ಸಹಿತ ಕೆಲ ವಾಹನಗಳು ಅತಿಕ್ರಮಿಸಿ ಪಾರ್ಕ್ ಮಾಡುತ್ತಿರುವುದು,ಬಂಟ್ವಾಳ ಪೇಟೆ ಅಗಲೀಕರಣ,ಕಸ ವಿಲೇವಾರಿ,ಅನಧಿಕೃತ ಪ್ಲೆಕ್ಸ್ ಗಳ ಹಾವಳಿ ಮೊದಲಾದ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಾಯಿತು.

ನಾಗರಿಕ ಪ್ರತಿನಿಧಿಗಳಾದ ಪ್ರೊ. ತುಕಾರಾಮ ಪೂಜಾರಿ, ದಾಮೋದರ್ ಸಂಚಯಗಿರಿ,  ಶಿವಶಂಕರ್, ರಾಜ ಪಲ್ಲಮಜಲು, ಮೋಹನ ಭಟ್ ಮತ್ತಿತರರು ಉಪಸ್ಥಿತರಿದ್ದರು. ಮ್ಯಾನೇಜರ್ ಲೀಲಾವತಿ, ಸಮುದಾಯ ಸಂಘಟಕಿ ಉಮಾವತಿ, ಕಿರಿಯ ಅಭಿಯಂತರ ಡೊಮಿನಿಕ್ ಡಿಮೆಲ್ಲೊ, ಅಕೌಂಟೆಂಟ್ ಸನ್ನಿ ವಿಲ್ಸನ್ ಲೋಬೊ, ಕಿರಿಯ ಅಭಿಯಂತರರ ಸಹಾಯಕ ಇಕ್ಬಾಲ್, ಪ್ರಥಮ ದರ್ಜೆ ಸಹಾಯಕರಾದ ಅಬ್ದುಲ್ ರಝಾಕ್, ಮೀನಾಕ್ಷಿ ಉಪಸ್ಥಿತರಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.