ಕವರ್ ಸ್ಟೋರಿ

ಪ್ರಯಾಣಿಕರ ಗಮನಕ್ಕೆ – ಕುಳಿತುಕೊಳ್ಳುವ ಮೊದಲು ಗಮನಿಸಿ

ಬಂಟ್ವಾಳನ್ಯೂಸ್  Editor: Harish Mambady

ಬಸ್ ನಿಲ್ದಾಣದ ಮೇಲಿಂದ ನೀರು ಕೆಳಗೆ ಬಿದ್ದ ಜಾಗದಲ್ಲಿ ಗಲೀಜು. ಇದನ್ನು ಗಮನಿಸಿ ಶೌಚಾಲಯವೆಂದೇ ಭಾವಿಸುವ ಕೆಲವರು ಅಲ್ಲೇ ಮೂತ್ರವಿಸರ್ಜನೆಯನ್ನೂ ಮಾಡುತ್ತಿದ್ದಾರೆ. ಬಿರುಬಿಸಿಲಲ್ಲೂ ಇಲ್ಲಿ ನೀರು, ಗಲೀಜು ಚೆಲ್ಲಿ ಅಸಹ್ಯ ವಾತಾವರಣ ಮೂಡಿದೆ.

ಜಾಹೀರಾತು

ಬಿ.ಸಿ.ರೋಡ್ ಪ್ರಯಾಣಿಕರ ತಂಗುದಾಣ ಅಲೆಮಾರಿಯೊಬ್ಬನ ಡೈನಿಂಗ್ ಟೇಬಲ್. ಅಲ್ಲೇ ಊಟ, ಅಲ್ಲೇ ಬಾಯಿ ತೊಳೆಯುವುದು, ಅಲ್ಲೇ ಉಗುಳುವುದು..

ಇವರಿಗೆ ಮನೆಯೂ ಇದೆಯೇ. ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವವರಾರು?

ಪ್ರಯಾಣಿಕರು ಕುಳಿತುಕೊಳ್ಳಬೇಕಾದ ಜಾಗದಲ್ಲಿ ಹಾಯಾಗಿ ಗೊರಕೆ ಹೊಡೆಯುವವರು

ಬಸ್ ನಿಲ್ದಾಣವೋ ಅಲೆಮಾರಿಗಳ ತಾಣವೋ ಎಂಬಂತೆ ಈ ಚಿತ್ರಗಳು ಕಂಡುಬಂದರೆ ಅಚ್ಚರಿ ಇಲ್ಲ. ಇದು ಬಿ.ಸಿ.ರೋಡ್ ನಲ್ಲಿ ಪುರಸಭೆ ಪ್ರಯಾಣಿಕರಿಗೆಂದು ನಿರ್ಮಿಸಿದ ಬಸ್ ಪ್ರಯಾಣಿಕರ ತಂಗುದಾಣ. ಎದುರು ಬಸ್ಸುಗಳು ನಿಂತರೆ, ಪ್ರಯಾಣಿಕರಿಗೆ ನಿಲ್ಲಲು ಇದೇ ತಂಗುದಾಣದ ಪಕ್ಕ ಇರುವ ವಾಣಿಜ್ಯ ಮಳಿಗೆಗಳ ಎದುರು ಸಾಗಬೇಕು. ಕಾರಣ ಇಷ್ಟೇ.

ಮೂತ್ರದ ವಾಸನೆ, ಹೆಜ್ಜೆ ಇಟ್ಟಲ್ಲೆಲ್ಲಾ ಉಗುಳಿದ ಅಸಹ್ಯ ನೋಟ, ಅಲ್ಲೇ ತಿಂದು ಬಿಸಾಡಿದ ಪೊಟ್ಟಣಗಳು, ಠಿಕಾಣಿ ಹೂಡುವ, ಅಲ್ಲೇ ಮಲಗಿ ವಿಶ್ರಾಂತಿ ಪಡೆಯುವ ಅಲೆಮಾರಿಗಳು ಇಲ್ಲಿ ತುಂಬಿಹೋಗಿದ್ದಾರೆ.

ನಿಲ್ದಾಣದ ಪಕ್ಕದಲ್ಲಿನ ಸ್ಥಿತಿ ಭಿನ್ನವೇನಲ್ಲ. ಸಾರ್ವಜನಿಕರು, ಸಂಘಸಂಸ್ಥೆಗಳು ಎಷ್ಟೇ ಕ್ಲೀನ್ ಮಾಡಲು ಪ್ರಯತ್ನಿಸಿದರೂ ಗಲೀಜು ಮಾಡುವವರು ನಿತ್ಯಸೃಷ್ಟಿಯಾಗುತ್ತಾರೆ.

ಲಯನ್ಸ್ ಸಂಸ್ಥೆಯವರು ಇಲ್ಲಿ ಉಚಿತವಾಗಿ ಫ್ಯಾನ್ ಒದಗಿಸಿಕೊಟ್ಟಿದ್ದಾರೆ. ಅದರಡಿಯಲ್ಲಿ ಅಲೆಮಾರಿಗಳು ಗಡದ್ದಾಗಿ ನಿದ್ದೆ ಮಾಡುತ್ತಾರೆ. ಯಾರಾದರೂ ವೃದ್ಧರು, ಮಹಿಳೆಯರು, ಮಕ್ಕಳು ಇಲ್ಲಿ ಕುಳಿತುಕೊಳ್ಳಲು ಬಂದರೆ ಅಸಹ್ಯವನ್ನು ಕಂಡು ಬದಿಯಲ್ಲಿ ನಿಲ್ಲುತ್ತಾರೆ.

ಬಂಟ್ವಾಳ ಬಡ್ಡಕಟ್ಟೆ ಮತ್ತು ಕೊಟ್ರಮನಗಂಡಿಯಲ್ಲಿ ಇರುವ ಬಸ್ ನಿಲ್ದಾಣಗಳ ಪೈಕಿ ಬಡ್ಡಕಟ್ಟೆಯ ತಂಗುದಾಣವನ್ನು ಒಂದೂವರೆ ವರ್ಷದ ಹಿಂದೆ ರೋಟರಿ ಕ್ಲಬ್ ಬಂಟ್ವಾಳ, ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಜೇಸಿ ನೆರವಿನೊಂದಿಗೆ ಜೀರ್ಣೋದ್ಧಾರ ಮಾಡಲಾಗಿತ್ತು. ಕೊಟ್ರಮನಗಂಡಿಯಲ್ಲಿರುವ ಬಸ್ ನಿಲ್ದಾಣಕ್ಕೆ ಬಸ್ಸೇ ಬರುವುದಿಲ್ಲ. ಬಂಟ್ವಾಳದ ಕತೆ ಹೀಗಾದರೆ, ಬಿ.ಸಿ.ರೋಡಿನಲ್ಲಿರುವ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಪ್ರವೇಶಿಸುವುದು ಕಡಿಮೆ.

ಕೆಲವೊಮ್ಮೆ ಸಾರ್ವಜನಿಕರೂ ಇಲ್ಲಿ ಕುಳಿತು, ಕಡ್ಲೆ, ಹಣ್ಣುಗಳನ್ನು ತಿಂದು, ಚಹಾ ಕುಡಿದು ಅಲ್ಲೇ ಕಸವನ್ನು ಎಸೆದುಹೋಗುವ ಪರಿಪಾಠವನ್ನು ಇಟ್ಟುಕೊಳ್ಳುತ್ತಾರೆ

ಅಲೆಮಾರಿಗಳ ಸಮಸ್ಯೆ ಹಾಗೂ ಬಸ್ ನಿಲ್ದಾಣದ ಶುಚಿತ್ವದ ಕುರಿತು ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಈ ಕುರಿತು ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ತಿಳಿಸಿದ್ದಾರೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.