ಬಂಟ್ವಾಳ

ಬಂಟ್ವಾಳ, ಬಿ.ಸಿ.ರೋಡ್ ನಲ್ಲಿ ಜನ, ವಾಹನ ಸಂಚಾರ ವಿರಳ, ಬಸ್ ಇಲ್ಲ

ಮಂಗಳೂರಿನಲ್ಲಿ ನಡೆದ ಅಹಿತಕರ ಘಟನೆ, ಜಿಲ್ಲೆಯಾದ್ಯಂತ ಸೆ.144ರನ್ವಯ ನಿಷೇಧಾಜ್ಞೆ, ಕೆಲ ಸಂಘಟನೆಗಳು ಕರೆ ನೀಡಿದ್ದ ಜಿಲ್ಲಾ ಬಂದ್ ಹಿನ್ನೆಲೆಯಲ್ಲಿ ಶುಕ್ರವಾರ ಬಂಟ್ವಾಳ ತಾಲೂಕಿನಾದ್ಯಂತ ಅಂಗಡಿ, ಮುಂಗಟ್ಟುಗಳು ಬಂದ್ ಆಗಿದ್ದರೆ, ಜನಸಂಚಾರ ವಿರಳವಾಗಿದ್ದವು.

ಸದಾ ಚಟುವಟಿಕೆಯಿಂದಿರುವ ಮಿನಿ ವಿಧಾನಸೌಧದಲ್ಲಿ ಶುಕ್ರವಾರದ ದೃಶ್ಯ

ಬಂಟ್ವಾಳ ತಾಲೂಕಿನ ಕೇಂದ್ರಸ್ಥಾನ ಬಿ.ಸಿ.ರೋಡ್, ಬಂಟ್ವಾಳ ಪೇಟೆಗಳಲ್ಲಿ ವಾಹನ ಸಂಚಾರ ಕಡಿಮೆ ಇತ್ತು. ಟ್ಯಾಕ್ಸಿ ಸ್ಟ್ಯಾಂಡ್ ಗಳಲ್ಲಿ, ಆಟೊ ಸ್ಟ್ಯಾಂಡ್ ಗಳಲ್ಲಿ ವಾಹನಗಳು ಕಂಡುಬಂದರೂ ಬಾಡಿಗೆ ಇರಲಿಲ್ಲ.

ಜಾಹೀರಾತು

ಖಾಸಗಿ ವಾಹನಗಳ ಓಡಾಟವೂ ಕಡಿಮೆ ಇತ್ತು. ಸರಕಾರಿ ಲೋಕಲ್ ಬಸ್ ಗಳು ರಸ್ತೆಗೇ ಇಳಿಯಲಿಲ್ಲ. ಖಾಸಗಿ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದ್ದ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನಲ್ಲೂ ಕೆಲವರು ಬಸ್ಸಿಗಾಗಿ ಕಾಯುತ್ತಿದ್ದ ದೃಶ್ಯ ಕಂಡುಬಂದವು.

ಬಿ.ಸಿ.ರೋಡಿನ ಫ್ಲೈಓವರ್ ಬಳಿ ಬೆಳಗ್ಗೆ 11 ಗಂಟೆ ವೇಳೆ ಸದಾ ಗಿಜಿಗುಟ್ಟುವ ವಾಹನಗಳು. ಆದರೆ ಶುಕ್ರವಾರ ಪರಿಸ್ಥಿತಿ ಭಿನ್ನವಾಗಿತ್ತು.

 ಬಿ.ಸಿ.ರೋಡ್ ಬಂಟ್ವಾಳದಲ್ಲಿ ಜನಸಂಚಾರ, ವಾಹನ ಸಂಚಾರ ಇಲ್ಲದ ಕಾರಣ ಇಲ್ಲಿ ತೆರೆದಿದ್ದ ಕೆಲವೊಂದು ಮಳಿಗೆಗಳಲ್ಲಿ ವ್ಯಾಪಾರ, ವಹಿವಾಟು ಕಾಣಿಸದೇ ಇದ್ದರೆ, ಸರಕಾರಿ ಕಚೇರಿಗಳು ಅಘೋಷಿತ ರಜೆ ಆಚರಿಸಿದವು. ಬಿ.ಸಿ.ರೋಡಿನ ಮಿನಿ ವಿಧಾನಸೌಧದಲ್ಲಿ ಕಚೇರಿ ಸಿಬ್ಬಂದಿ ಹೊರತುಪಡಿಸಿದರೆ, ಸಾರ್ವಜನಿಕರು ಬರಲೇ ಇಲ್ಲ. 

ಶಾಲಾ ಕಾಲೇಜುಗಳಿಗೆ ರಜೆ ಇದ್ದ ಕಾರಣ, ಕೆಲವೆಡೆ ಶಾಲೆಗಳ ವಾರ್ಷಿಕೋತ್ಸವವನ್ನೂ ಮುಂದಕ್ಕೆ ಹಾಕಲಾಯಿತು. ಬೊಂಡಾಲ ಹೈಸ್ಕೂಲ್ ವಾರ್ಷಿಕೋತ್ಸವವನ್ನು ಡಿ.21ರ ಬದಲು 24ರಂದು, ಬಂಟ್ವಾಳ ವಿದ್ಯಾಗಿರಿ ಎಸ್.ವಿ.ಎಸ್.ಆಂಗ್ಲ ಮಾಧ್ಯಮ ಶಾಲೆ ವಾರ್ಷಿಕೋತ್ಸವವನ್ನು ಡಿ.20ರ ಬದಲು 27, ವಿದ್ಯಾಗಿರಿ ಬಿ.ಆರ್.ಎಂ.ಪಿ.ಶಾಲಾ ವಾರ್ಷಿಕೋತ್ಸವವನ್ನು ಡಿ.28ಕ್ಕೆ ಮುಂದೂಡಲಾಯಿತು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.