ಯುವಲಹರಿ

ನವಿಲುಗರಿಯೊಳಗೆ ನೂರೆಂಟು ಸಂದೇಶ

  • ಸಾಯಿನಂದಾ ಚಿಟ್ಪಾಡಿ

  • ದ್ವಿತೀಯ ಎಂ.ಸಿ.ಜೆ, ವಿವೇಕಾನಂದ ಕಾಲೇಜು, ನೆಹರೂನಗರ ಪುತ್ತೂರು

ಕನ್ನಡದ ಜನಪ್ರಿಯ ಲೇಖಕರ ಸಾಲಿಗೆ ಸೇರುವ ಎ.ಆರ್.ಮಣೀಕಾಂತ್ ತಮ್ಮ ಕಥನಶೈಲಿಯಿಂದ ಜನರಿಗೆ ಆಪ್ತರಾಗುವವರು. ಅವರ ಕೃತಿಗಳು ಬದುಕು ವ್ಯರ್ಥ ಎಂದು ಭಾವಿಸಿದ ಅನೇಕರಿಗೆ ಸ್ಫೂರ್ತಿಯ ಸೆಲೆ. ಅಪ್ಪ, ಅಮ್ಮ ಇಬ್ಬರ ಸಂಬಂಧಗಳ ಮಹತ್ವವನ್ನು, ಕೊರಳು ಉಬ್ಬಿಸುವ, ಕರುಳು ಚುರ್‌ಎನ್ನುವಂತೆ ಮಾಡುವ ಕಥಾನಕಗಳನ್ನು ಮುಂದಿಟ್ಟಿದ್ದಾರೆ.ಸರಳವಾದ ಅಕ್ಷರದ ಪೋಣಿಕೆಯಿಂದ ಅನೇಕ ಕೃತಿಗಳನ್ನು ಓದುಗ ವರ್ಗಕ್ಕೆ ಒದಗಿಸಿ, ಓದುವ ಹುರುಪನ್ನು ಹೆಚ್ಚಿಸಿದವರು. ಅಮ್ಮ ಹೇಳಿದ ಎಂಟು ಸುಳ್ಳುಗಳು, ಅಪ್ಪ ಅಂದ್ರೆ ಆಕಾಶ, ಈ ಗುಲಾಬಿ ನಿನಗಾಗಿ, ಹೀಗೆ ಅನೇಕ ಬರಹದ ಗುಚ್ಚವನ್ನು ಓದುಗರ ಮುಂದಿಟ್ಟು ಜ್ಞಾನದ ಸಾರವನ್ನುಎರೆದಿದ್ದಾರೆ.

ಜಾಹೀರಾತು

ಇವರ ನವಿಲು ಗರಿ ಪುಸ್ತಕವೂ ಮತ್ತೆ ಮತ್ತೆ ಓದುವಂತೆ ಮಾಡುವ ಚಿಂತನಾರ್ಹ ವಿಚಾರಗಳನ್ನು ಮುಂದಿಡುತ್ತದೆ.

ಓದುಗರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ ಅಂತರ್ಜಾಲದಿಂದ ಎಲ್ಲವನ್ನೂ ಸುಲಭವಾಗಿ ಪಡೆಯಬಹುದು ಎಂಬ ಮನೋಭಾವ ಜನರಲ್ಲಿ ಮೂಡಿದೆ. ಆದರೆ ಅಪ್ಪ ಅಮ್ಮ ಎಂಬ ಸಂಬಂಧದ ಕೊಂಡಿಯನ್ನು ಅಂತರ್ಜಾಲದಿಂದ ಡೌನ್ ಲೋಡ್ ಮಾಡಲಾಗುವುದಿಲ್ಲ. ಸಂಬಂಧದ ಕೊಂಡಿಯನ್ನು ಒಂದರ ಹಿಂದೆ ಒಂದರಂತೆ ತೆರೆಯಲು ಸಾಧ್ಯಾವಿಲ್ಲ ಎಂದು ಇವರ ಕೃತಿ ತಿಳಿಸಿಕೊಟ್ಟಿದೆ. ಅಮ್ಮನ ಕಣ್ಣೊಳಗಿನ ಆದಮ್ಯ ಪ್ರೀತಿ, ಅಮ್ಮನ ವಿಶಾಲ ಮನಸ್ಸು , ಇವು ಯಾವುದನ್ನು ಅಂತರ್ಜಾಲದಿಂದ ಪ್ರಿಂಟ್‌ಔಟ್ ತೆಗೆಯಲಾಗುವುದಿಲ್ಲ. ಬದಲಾಗಿ ಸಂಬಂಧಗಳು ಮನಸ್ಸಿನಲ್ಲಿ ಬೆಸೆದು ಉತ್ತಮ ಭಾಂದವ್ಯಕ್ಕೆ ಮುನ್ನುಡಿಯಾಗುವಂತಿರಬೇಕು ಎಂದು ತಮ್ಮ ಬರಹದ ಮೂಲಕ ಬಲು ಸುಂದರವಾಗಿ ತಿಳಿಸಿದ್ದಾರೆ.

ನನ್ನಕಣ್ಣ ಮುಂದೆ ಅನೇಕ ಕುಟುಂಬಗಳಿವೆ, ಎಲ್ಲರೂ ಶ್ರೀಮಂತರೇ, ಎಲ್ಲರೂ ಲಕ್ಷಾಧಿಪತಿಗಳೇ. ಎಲ್ಲರ ಬಳಿಯೂ ಎರೆಡೆರಡುಕಾರು, ಎರೆಡೆರಡು ಸೈಟು, ಎರೆಡೆರಡು ಮನೆ ಆದರೂ ಜನಕ್ಕೆ ನೆಮ್ಮದಿಯಿಲ್ಲ, ಖುಷಿಯಿಲ್ಲ, ಹಣ ಜಾಸ್ತಿಯಾದಾಗ ಕಷ್ಟಗಳು ಕಡಿಮೆಯಾಗುವುದಿಲ್ಲ ಬದಲಾಗಿ ಕಂದಕಗಳು ಸೃಷ್ಟಿಯಾಗುತ್ತದೆ ಎಂದು ಬರವಣಿಗೆಯ ಮೂಲಕ ಜನರಿಗೆ ನೈಜತೆಯನ್ನು ಚಿತ್ರಿಸಿದ್ದಾರೆ.

ನೆಮ್ಮದಿ ಎಂಬ ಮಾಯಾಮೃಗ ಅದೆಲ್ಲಿ ಅಡಗಿಹೋಯಿತು ಎಂದು ಮನದೊಳಗೆ ಇಣಿಕಿ ನೋಡಿದರೆ ಕಾಣಿಸಿದ್ದು ಅಜ್ಜನ ನಿಟ್ಟುಸಿರು, ಅಮ್ಮನ ಕಣ್ಣೀರು, ಮಕ್ಕಳ ಬಿಕ್ಕಳಿಕೆ, ಒಂದೊಂದು ಕಣ್ಣೊಳಗೆ ಒಂದೊಂದು ಕಥೆ, ಒಂದೊಂದು ಮನದೊಳಗೆ ಒಂದೊಂದು ವ್ಯಥೆ ಎಲ್ಲಾ ಕಥಾಗುಚ್ಚಗಳು ತಿಳಿಸಿಕೊಡುತ್ತಿದೆ. ’ರೌಡಿ ಆಗಿದ್ದವನ್ನು ರಿಯಲ್ ಹೀರೋ ಆಗಿಬಿಟ್ಟ’, ’ಬ್ರೆಡ್ ಮಾರುತ್ತಿದ್ದವ ಹಲವರ ಬಾಳಿಗೆ ಬೆಳಕು ತಂದ’, ’ಸವಾಲುಗಳಿಗೆ ಸವಾಲೆಸೆದ ಶಾಲಿನಿಗೆ ಸಲಾಂ’, ಹೀಗೆ ಅನೇಕ ಕಥೆಗಳು ಓದುಗ ವರ್ಗಕ್ಕೆ ಮಾದರಿಯಾಗಿ ಕಥಾನಾಯಕ ಮತ್ತು  ನಾಯಕಿರು ನಿಲ್ಲುತ್ತಾರೆ. ಬದುಕು  ವ್ಯರ್ಥ ಎಂಬ ಭಾವಿಸಿ ಹೊರಟ ಅನೇಕರಿಗೆ ಇದು ಏನನ್ನಾದರೂ ಸಾಧಿಸುವ ಛಲವನ್ನು ಬದುಕುವ ಚೈತನ್ಯವನ್ನು ಮೂಡಿಸುತ್ತದೆ. ಕಥೆಯಲ್ಲಿ ಬರುವ ಪಾತ್ರಗಳೆಲ್ಲಾ  ಬದುಕಿನ ಹಾದಿಗೆ ಹತ್ತಿರವಾಗುತ್ತಾರೆ. ಸೋಲು ಗೆಲುವಿನ ನಡುವೆ ಬದುಕನ್ನು ತೆಗೆದುಕೊಂಡು ಹೋಗುವ ದಾಟಿ ಕೆಲವರಿಗೆ ಬದುಕುವ ಹುಮ್ಮಸ್ಸನ್ನು ಮೂಡಿಸುತ್ತದೆ. ಸರಳ ಬರವಣಿಗೆಯ ಮೂಲಕ ಎ. ಆರ್ ಮಣಿಕಾಂತ್ ನಿರೂಪಣಾ ಶೈಲಿಯಿಂದ ಓದುಗರಿಗೆ ಹತ್ತಿರವಾಗಿ ಬಿಡುತ್ತಾರೆ.

ಕಥೆಯಲ್ಲಿ ಬರುವ ತಿರುವುಗಳು ಮತ್ತು ಯಶಸ್ಸಿನ ಪಥವನ್ನು ಮನಮುಟ್ಟುವಂತೆ ಕಟ್ಟಿಕೊಳ್ಳುವುದು ಇವರ ಬರವಣಿಗೆ ವಿಶೇಷ. ಇಲ್ಲಿ ಕಥಾನಾಯಕ ಅಥವಾ ಕಥಾನಾಯಕಿಯೇ ಸ್ವತಃ ಜೀವನದಲ್ಲಿ ನಡೆದ ಏಳು ಬೀಳಿನ ಹಾದಿಯ ಚಿತ್ರಣ ಇಲ್ಲಿದೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.