ಪ್ರಮುಖ ಸುದ್ದಿಗಳು

5,6 ರಂದು ಬಂಟ್ವಾಳದಲ್ಲಿ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ

ಶ್ರೀ ಯೋಗನಿಧಿ ಪತಂಜಲಿ ಪ್ರತಿಷ್ಠಾನ ರಿ., ಮಂಗಳೂರು ಹಾಗೂ ಬಂಟ್ವಾಳ ಘಟಕ ವತಿಯಿಂದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆ ಅಕ್ಟೋಬರ್ 5 ಮತ್ತು 6 ರಂದು ಬಂಟ್ವಾಳದಲ್ಲಿ ನಡೆಯಲಿದೆ.

ಜಾಹೀರಾತು

ಬಿ.ಸಿ.ರೋಡಿನ ಗೀತಾಂಜಲಿ ಕಲ್ಯಾಣ ಮಂಟಲದಲಿ ನಡೆಯುವ ಈ ಸ್ಪರ್ಧಾಕೂಟದಲ್ಲಿ ಎಂಟರಿಂದ ಎಂಭತ್ತು ವರ್ಷದ ಯೋಗಪಟುಗಳು ಭಾಗವಹಿಸಲು ಅವಕಾಶವಿದ್ದು, ವಯೋಮಾನದ ಅನುಸಾರ ಎಂಟು ಗುಂಪುಗಳನ್ನು ರಚಿಸಲಾಗಿದೆ. ಸ್ತ್ರೀ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳು ನಡೆಯಲಿವೆ. ಈ ಯೋಗಹಬ್ಬದಲ್ಲಿ ಸುಮಾರು ಎರಡು ಸಾವಿರ ಜನರು ಭಾಗಹಿಸುವ ನಿರೀಕ್ಷೆ ಇದೆ. ಐನೂರಕ್ಕೂ ಅಧಿಕ ಸ್ಪರ್ಧಾಳುಗಳು ರಾಜ್ಯದ ವಿವಿಧ ನಾನಾ ಕಡೆಗಳಿಂದ ಆಗಮಿಸಲಿದ್ದಾರೆ. ಯೋಗ ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಮೋನಪ್ಪ ಪೂಜಾರಿ ನೇತೃತ್ವದಲ್ಲಿ ರಾಜ್ಯ ಮಟ್ಟದ ಮೂವತ್ತು ತೀರ್ಪುಗಾರರು ಈ ಸ್ಪರ್ಧಾಕೂಟದಲ್ಲಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಯೋಗನಿಧಿ ಪತಂಜಲಿ ಪ್ರತಿಷ್ಠಾನ ಅಧ್ಯಕ್ಷ ಡಾ. ಶಿವಪ್ರಸಾದ್ ಶೆಟ್ಟಿ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.

ಬಿ.ಸಿ.ರೋಡಿನ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ 5ರಂದು ಸಂಜೆ 3 ಗಂಟೆಗೆ ಆಳ್ವಾಸ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಮೋಹನ ಆಳ್ವ ಉದ್ಘಾಟಿಸುವರು. ಮಾಜಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸುವರು ಬಳಿಕ ಯೋಗ ಸ್ಪರ್ಧೆ ಹಾಗೂ ನಾನಾ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ. 6ರಂದು ಬೆಳಗ್ಗಿನಿಂದ ಸಂಜೆ 4 ಗಂಟೆವರೆಗೆ ಸ್ಪರ್ಧೆಗಳು ನಡೆಯಲಿದ್ದು, ಬಳಿಕ ಬಂಟ್ವಾಳ ಶಾಸಕ ರಾಜೇಶ್ ನಾಕ್ ಅಧ್ಯಕ್ಷತೆಯಲ್ಲಿ ಸಮಾರೋಪ ನಡೆಯಲಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದು, ಈ ಸಂದರ್ಭ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದವರು ಮಾಹಿತಿ ನೀಡಿದರು.

ಸ್ಪರ್ಧಾ ವಿಜೇತರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳಿದ್ದು, ಪ್ರಶಸ್ತಿ ಪತ್ರ, ನಗದು ಪುರಸ್ಕಾರ ಹಾಗೂ ಸ್ಮರಣಿಕೆಗಳನ್ನು ನೀಡಲಾಗುವುದು. ಎಲ್ಲಾ ವಿಭಾಗಗಳ ಪ್ರಥಮ ಸ್ಥಾನ ವಿಜೇತರು ಚಾಂಪಿಯನ್ ಆಫ್ ಚಾಂಪಿಯನ್ ಸ್ಫರ್ದೆಯಲ್ಲಿ ಭಾಗವಹಿಸಲು ಅರ್ಹರಾಗುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಭಾಗವಹಿಸುವ ಸಂಸ್ಥೆಯನ್ನು ವಿಶೇಷ ಬಹುಮಾನದ ಮೂಲಕ ಮತ್ತು ಅತಿಹೆಚ್ಚಿನ ಬಹುಮಾನ ಪಡೆದ ಸಂಸ್ಥೆಯನ್ನು ಪ್ರಶಸ್ತಿ ಫಲಕದೊಂದಿಗೆ ಪುರಸ್ಕರಿಸಲಾಗುವುದು. ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು. ಯೋಗಾಸನ ಸ್ಪರ್ಧೆ ಆಯೋಜಕ ಸಮಿತಿಯ ಗೌರವಾಧ್ಯಕ್ಷರಾಗಿ ಸೇಸಪ್ಪ ಕೋಟ್ಯಾನ್, ಅಧ್ಯಕ್ಷರಾಗಿ ಡಾ. ಶಿವಪ್ರಸಾದ್ ಶೆಟ್ಟಿ, ಪ್ರಧಾನ ಸಂಚಾಲಕರಾಗಿ ಚಂದ್ರಹಾಸ ಶೆಟ್ಟಿ, ಪ್ರಸಾದ್ ಕುಮಾರ್ ಮತ್ತು ಸುರೇಶ್ ನಾಯಕ್ ಕಾರ್ಯನಿರ್ವಹಿಸುತ್ತಿದ್ದಾರೆ. ಕಾರ್ಯದರ್ಶಿಯಾಗಿ ಡಾ. ರಘವೀರ್ ಅವಧಾನಿ, ಕೋಶಾಧಿಕಾರಿಯಾಗಿ ಡಾ. ಸುಬ್ರಹ್ಮಣ್ಯ ಭಟ್ ಟಿ., ಲೆಕ್ಕಪರಿಶೋಧಕರಾಗಿ ಯತೀಶ್ ಭಂಡಾರಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದವರು ಮಾಹಿತಿ ನೀಡಿದರು.

ಯೋಗ ನಿಧಿ ಪತಂಜಲಿ ಪ್ರತಿಷ್ಠಾನವು ಕಳೆದ ಐದು ವರ್ಷಗಳಿಂದ ಬಂಟ್ವಾಳ ಹಾಗೂ ಮಂಗಳೂರಿನ ವಿವಿಧ ಸ್ಥಳಗಳಲ್ಲಿ ಯೋಗ ಶಿಬಿರಗಳನ್ನು ಆಯೋಜಿಸಿ ನೂರಾರು ಜನರಿಗೆ ಈ ವಿದ್ಯೆಯ ಲಾಭವನ್ನು ದೊರಕಿಸಿಕೊಡುವ ಪ್ರಯತ್ನ ಮಾಡಿದೆ. ಪವಿತ್ರ ಮತ್ತು ಪರಿಪೂರ್ಣ ಜೀವನ ಮಾರ್ಗವೆಂದು ಸರ್ವತ್ರ ಪ್ರಶಂಸೆತೆ ಪಾತ್ರವಾಗಿರುವ ಯೋಗವಿದ್ಯೆಯನ್ನು ಜನಸಾಮಾನ್ಯರಿಗೆ ಉಚಿತವಾಗಿ ತಲುಪಿಸುವುದೇ ಪ್ರತಿಷ್ಠಾನದ ಉದ್ದೇಶ. ಯೋಗಗುರು ರಘುವೀರ ಅವಧಾನಿ ಮತ್ತು ಯೋಗ ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ಮಂಗಳೂರಿನ ಯೋಗಾಚಾರ್ಯ ಮೋನಪ್ಪ ಪೂಜಾರಿಯವರ ಮಾರ್ಗದರ್ಶನದಲ್ಲಿ ಈ ಸೇವಾ ಕಾರ್ಯವನ್ನು ಅರ್ಹ ಯೋಗ ಸಂವಾಹಕರ ಮೂಲಕ ನಡೆಸಲಾಗುತ್ತಿದೆ. ಇಷ್ಟು ಮಾತ್ರವಲ್ಲಿದೆ, ಪ್ರತಿಷ್ಠಾನವು ಯೋಗ ದಿನಾಚರಣೆ, ಸೂರ್ಯನಮಸ್ಕಾರ ಯಜ್ಞ, ಸ್ವಚ್ಛತಾ ಅಭಿಯಾನ, ಉಚಿತ ಆರೋಗ್ಯ ಶಿಬಿರ, ರಕ್ತದಾನಿಗಳ ಗುಂಪು ರಚನೆ, ಪುರಾತನ ಕ್ಷೇತ್ರಗಳ ದರ್ಶನ ಮೊದಲಾದ ಸಾಮಾಜಿಕ, ಧಾರ್ಮಿಕ ಉಪಯುಕ್ತ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ. ಪ್ರತಿಷ್ಠಾನದ ಚಟುವಟಿಕೆಗಳು ಇನ್ನಷ್ಟು ಜನರ-ಮನಕ್ಕೆ ತಲುಪಬೇಕೆಂಬ ಸದಾಶಯದೊಂದಿಗೆ ನಾವು ಈ ಯೋಗ ಹಬ್ಬವನ್ನು ಆಯೋಜಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಡಾ. ರಘುವೀರ ಅವಧಾನಿ, ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಪ್ರಸಾದ್ ಕುಮಾರ್, ಟ್ರಸ್ಟ್ ಕೋಶಾಧಿಕಾರಿ ಡಾ. ಸುಬ್ರಹ್ಮಣ್ಯ ಟಿ, ಡಾ. ಬಾಲಕೃಷ್ಣ, ಪ್ರವೀಣ್ ರಾವ್, ದಾಮೋದರ ರಾಮಕುಂಜ, ಯೋಗಗುರುಗಳಾದ ಪ್ರತಿಮಾ ಮತ್ತು ಗೀತಾ ಕಾರಂತ ಉಪಸ್ಥಿತರಿದ್ದರು.

www.bantwalnews.com Editor: Harish Mambady

For Advertisements Contact: 9448548127

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.