ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆಯಂತೆ ಸಂತ್ರಸ್ತರಿಗೆ 10 ಸಾವಿರ ರೂ ಚೆಕ್ ವಿತರಿಸಲಾಗುತ್ತದೆ. ಜೊತೆಗೆ ಸಂಪೂರ್ಣ ಮನೆಯನ್ನು ಕಳೆದುಕೊಂಡವರಿಗೆ 5 ಲಕ್ಷ ರೂ ವಿತರಿಸಲು ಸಿಎಂ ಸೂಚಿಸಿದ್ದಾರೆ ಎಂದು ಬಂಟ್ವಾಳ ಶಾಸಕ ಯು. ರಾಜೇಶ್ ನಾಯ್ಕ್ ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ಬಿ.ಮೂಡ, ಪಾಣೆಮಂಗಳೂರು, ಬಿ.ಕಸಬ, ಸಜಿಪಮೂಡ ಮತ್ತು ಸಜಿಪಮುನ್ನೂರು ಗ್ರಾಮಗಳ ನೆರೆ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಣಾ ಕಾರ್ಯಕ್ರಮ ಸೋಮವಾರ ಬಿ.ಸಿ.ರೋಡಿನ ರೋಟರಿ ಕ್ಲಬ್ನಲ್ಲಿ ನಡೆಯಿತು. ಈ ಸಂದರ್ಭ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೆರೆ ಪೀಡಿತ ಜಿಲ್ಲೆಗಳಿಗೆ ಸಂಚರಿಸಿ ಸಮೀಕ್ಷೆ ನಡೆಸಿ ಪರಿಹಾರದ ಮೊತ್ತವನ್ನು ವಿತರಿಸುವ ಕಾರ್ಯ ಮಾಡಿದ್ದಾರೆ. ಇಷ್ಟು ತ್ವರಿತವಾಗಿ ಸಂತ್ರಸ್ತರಿಗೆ ಪರಿಹಾರ ನೀಡಿರುವುದು ಇದೇ ಮೊದಲು. ಮುಖ್ಯಮಂತ್ರಿ ಅವರು ತಮ್ಮ ಮನವಿಗೆ ಸ್ಪಂದಿಸಿ ಈ ಮೊದಲಿದ್ದ ಪರಿಹಾರದ ಮೊತ್ತವನ್ನು 10ಸಾವಿರ ರೂ.ಗೆ ಹಾಗೂ ತೀವ್ರ ಹಾನಿಯ 95 ಸಾವಿರ ರೂ.ದಿಂದ 5 ಲಕ್ಷ ರೂ.ವರೆಗೂ ಹೆಚ್ಚಿಸಿ ಪರಿಹಾರ ಕಾರ್ಯಕ್ಕೆ ಮುಂದಾಗಿದೆ. ಇಲ್ಲಿಯೂ ಕೂಡಾ 10 ಸಾವಿರ ರೂ. ಪರಿಹಾರದ ಚೆಕ್ ಅನ್ನು ನೀಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಮಣಿನಾಲ್ಕೂರು, ನಾವೂರು ಗ್ರಾಮದ 57 ಮಂದಿ, ಅಮ್ಟಾಡಿ ಗ್ರಾಮದ 20 ಮಂದಿ ಹಾಗೂ ಬಂಟ್ವಾಳ ತಾಲೂಕಿನ ಬಿ.ಮೂಡ, ಪಾಣೆಮಂಗಳೂರು, ಬಿ.ಕಸಬ, ಸಜಿಪಮೂಡ ಮತ್ತು ಸಜಿಪಮುನ್ನೂರು ಗ್ರಾಮಗಳ 443 ಸಂತ್ರಸ್ತರಿಗೆ ಸಹಿತ ಸುಮಾರು 500ಕ್ಕೂ ಹೆಚ್ಚಿನ ನೆರೆ ಸಂತ್ರಸ್ತರಿಗೆ ಒಟ್ಟು 50 ಲಕ್ಷ ರೂ. ಪರಿಹಾರದ ಚೆಕ್ ಅನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರಶ್ಮಿ ಎಸ್.ಆರ್., ಪುರಸಭಾ ಸದಸ್ಯರಾದ ಗೋವಿಂದ ಪ್ರಭು, ಮುನೀಶ್ ಅಲಿ, ಸಿದ್ದೀಕ್ ಗುಡ್ಡೆಯಂಗಡಿ, ಮುಹಮ್ಮದ್ ನಂದರಬೆಟ್ಟು, ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು, ರಾಮ ಕಾಟಿಪಳ್ಳ, ಸಿಬ್ಬಂದಿಗಳಾದ ಶಿವಾನಂದ, ಸದಾಶಿವ ಕೈಕಂಬ ಹಾಜರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…