ಯಕ್ಷಗಾನ

ದೇಶಭಕ್ತಿ ಸಾರುವ ಯಕ್ಷಗಾನ ವಂದೇ ಮಾತರಂ

  • ಯಾದವ ಕುಲಾಲ್, ಬಿ.ಸಿ.ರೋಡ್

ಆಗಸ್ಟ್ ೪ರಂದು ಮಂಗಳೂರಿನ ಟೌನ್‌ಹಾಲ್‌ನಲ್ಲಿ ಬೆಳಿಗ್ಗೆ 9 ಗಂಟೆಗೆ ವಂದೇ ಮಾತರಂ ಯಕ್ಷಗಾನ ನಡೆಯಲಿದ್ದು ತಿರುಗಾಟದ ಮೇಳಗಳಾದ ಕಟೀಲು, ಕೋದಂಡರಾಮ, ಸಸಿಹಿತ್ಲು, ಸುಂಕದಕಟ್ಟೆ, ಬಪ್ಪನಾಡು, ದೇಂತಡ್ಕ ಮೇಳಗಳಲ್ಲಿ ವೃತ್ತಿಪರ ಕಲಾವಿದರಾದ ಕೃಷ್ಣ ಕುಲಾಲ್ ಕೈರಂಗಳ, ಗಣೇಶ್ ಮೂಲ್ಯ ಚಂದ್ರಮಂಡಲ, ಸದಾಶಿವ ಕುಲಾಲ್ ವೇಣೂರು, ಜಗದೀಶ್ ನಲ್ಕ, ಶಶಿಧರ ಕುಲಾಲ್ ಕನ್ಯಾನ, ಶಂಭು ಕುಲಾಲ್ ಕಿನ್ನಿಗೋಳಿ, ಸದಾಶಿವ ಮುಂಡ್ಕೂರು, ರವಿಶಂಕರ್ ಕುಲಾಲ್ ಕಾವೂರು, ಅಶ್ವತ್ ಕುಲಾಲ್ ಮಂಜನಾಡಿ, ವಿಶ್ವನಾಥ ಕುಲಾಲ್ ಪದ್ಮುಂಜ ಹಾಗೂ ಚಲನಚಿತ್ರ ನಟ ತಿಮ್ಮಪ್ಪ ಕುಲಾಲ್‌ರವರು ವಿಶೇಷ ಪಾತ್ರದಲ್ಲಿ ಕಾಣಿಸಲಿದ್ದಾರೆ.

ಕಲೆ ಎನ್ನುವುದು ಜಾತಿ, ಧರ್ಮ, ಮತಗಳನ್ನು ಮೀರಿ ಬೆಳೆದಿದೆ. ಆದರೆ ತನ್ನನ್ನು ಹೊಸ ಆಯಾಮಕ್ಕೆ ತೆರೆದುಕೊಳ್ಳುತ್ತಲೇ ಕಲೆ ಬೆಳೆದು ಬಂದಿದೆ. ಕಲೆಯನ್ನು ಸಾಕಾರಗೊಳಿಸಿದ ಕಲಾವಿದನೊಬ್ಬ ತನ್ನ ಸೃಜನಶೀಲತೆಯಿಂದ ಕಲೆಯಲ್ಲೊಂದು ಹೊಸ ಸೃಷ್ಟಿಯನ್ನೇ ಮಾಡುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಲಲಿತ ಕಲೆಗಳಲ್ಲಿ ಒಂದಾಗಿರುವ ಯಕ್ಷಗಾನ ಎನ್ನುವುದು ಎಲ್ಲ ವರ್ಗದ ಪ್ರೇಕ್ಷಕರನ್ನು ತನ್ನತ್ತ ಸೆಳೆಯಲು ಸಮರ್ಥವಾಗಿದೆ. ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧಿ ಪಡೆದಿರುವ ಯಕ್ಷಗಾನವನ್ನು ಕಲಾವಿದರೆಲ್ಲಾ ಸೇರಿಕೊಂಡು ವಿದೇಶದಲ್ಲಿಯೂ ಪ್ರಸ್ತುತ ಪಡಿಸಿದ್ದಾರೆ. ಹೊಸ ಹೊಸ ಪ್ರಯೋಗಗಳನ್ನು ಯಕ್ಷಗಾನದಲ್ಲಿ ಮಾಡುತ್ತಲೇ ಇದ್ದಾರೆ. ಪೌರಾಣಿಕ, ಐತಿಹಾಸಿಕ ಕಥೆಗಳ ಜೊತೆಗೆ ಸಾಮಾಜಿಕ ಕಥೆಗಳನ್ನು ಕೂಡಾ ಯಕ್ಷಗಾನ ರೂಪದಲ್ಲಿ ತೋರಿಸುತ್ತಿದ್ದಾರೆ. ಯಕ್ಷಗಾನದಲ್ಲಿಯೂ ಚಲನಚಿತ್ರದಂತೆ ವಿಭಿನ್ನವಾದ ರಂಗಸಜ್ಜಿಕೆಯನ್ನು ಮಾಡಿ ಜನರನ್ನು ತಮ್ಮತ್ತ ಸೆಳೆಯುವ ಎಲ್ಲ ಕೆಲಸವನ್ನೂ ಮಾಡುತ್ತಿದ್ದಾರೆ.
ಜಾತಿ-ಮತಗಳನ್ನು ಮೀರಿ ನಿಂತಿದೆ ಯಕ್ಷಗಾನ. ಇದು ನಿಜವೇ ಆದರೂ ನಮ್ಮ ಸಮಾಜದಲ್ಲಿ ಅಲ್ಲಲ್ಲಿ ಒಂದೊಂದು ಸಮುದಾಯಕ್ಕೆ ಸಂಬಂಧಪಟ್ಟ ಸಂಘಟನೆಗಳಿವೆ. ಕರ್ನಾಟಕ ರಾಜ್ಯ ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಇಂತಹ ಸಂಘಟನೆಗಳಲ್ಲಿ ಒಂದಾಗಿದೆ. ಈ ಸಂಘಟನೆಯ ದಶಮಾನೋತ್ಸವದ ಅಂಗವಾಗಿ ಯಕ್ಷಗಾನವನ್ನು ಪ್ರದರ್ಶಿಸಬೇಕು ಎಂಬ ಹುಮ್ಮಸ್ಸು ಸಂಘಟಕರಲ್ಲಿ ಹುಟ್ಟಿಕೊಂಡಾಗ ಯಾವುದೇ ಒಂದು ಮೇಳದವರಿಂದ ಯಕ್ಷಗಾನ ಮಾಡುವುದರ ಬದಲು ಕುಲಾಲ ಸಮುದಾಯಕ್ಕೆ ಸೇರಿದ ಎಲ್ಲಾ ವೃತ್ತಿಪರ ಕಲಾವಿದರನ್ನೂ ಸೇರಿಸಿಕೊಂಡು ಅವರಿಂದ ಯಕ್ಷಗಾನವನ್ನು ಆಡಿಸಬೇಕು ಎಂಬ ನಿರ್ಧಾರ ಮಾಡಿದರು. ಪರಿಣಾಮವಾಗಿ ಕುಲಾಲ ಸಮುದಾಯಕ್ಕೆ ಸೇರಿದ ಬೇರೆ ಬೇರೆ ಮೇಳದಲ್ಲಿ ಕಲಾವಿದರಾಗಿದ್ದವರು ಮತ್ತು ಹವ್ಯಾಸಿ ಯಕ್ಷಗಾನ ಕಲಾವಿದರನ್ನೆಲ್ಲಾ ಒಟ್ಟು ಸೇರಿಸಲಾಯಿತು. ಪ್ರಸಂಗದ ಆಯ್ಕೆಯಾಗಬೇಕಾಗ ಹಿಂದೆ ಇರುವ ಪ್ರಸಂಗಗಳು ಬೇಡ. ನೂತನವಾದ ಪ್ರಸಂಗವೊಂದನ್ನು ತೆಗೆದುಕೊಳ್ಳಬೇಕು ಎಂದಾಗ ಇವರಿಗೆ ಒತ್ತಾಸೆಯಾದದ್ದು ಪ್ರಸಂಗಕರ್ತ ಶ್ರೀನಿವಾಸ ಸಾಲಿಯಾನ್.
ದೇಶಪ್ರೇಮ ಇಂದಿನ ಬಹುಮುಖ್ಯ ವಿಷಯ. ದೇಶದ ವಿಷಯ ಬಂದಾಗ ಪ್ರತಿಯೊಬ್ಬರಲ್ಲೂ ಹುಮ್ಮಸ್ಸು ಉಂಟಾಗುತ್ತದೆ. ದೇಶ ಸೇವಕರಾಗಬೇಕು ಎಂಬ ಬಯಕೆ ಎಲ್ಲರ ಮನಸ್ಸಿನ ಒಂದು ಮೂಲೆಯಲ್ಲಿ ಇದ್ದೇ ಇದೆ. ಇಂತಹ ದೇಶ ಪ್ರೇಮದ ಕಥಾವಸ್ತುವನ್ನಿಟ್ಟುಕೊಂಡು ವಂದೇ ಮಾತರಂ ಎನ್ನುವ ಪ್ರಸಂಗವನ್ನು ರಚಿಸಿದರು. ಕಲಾವಿದರ ಆಯ್ಕೆಯೂ ಆಯಿತು. ಹಿಮ್ಮೇಳ ಮತ್ತು ಮುಮ್ಮೇಳದಲ್ಲಿ ಎಲ್ಲ ಕುಲಾಲ ಸಮುದಾಯದವರನ್ನೇ ಸೇರಿಸಿಕೊಂಡು ಈ ಯಕ್ಷಗಾನ ನಡೆಯಲಿದೆ.

 

ಜಾಹೀರಾತು
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.