ಸಾಧಕರು

ಹೆಡ್ ಮಾಸ್ಟರ್ ರಾಮಚಂದ್ರ ರಾವ್ ಸೇವಾನಿವೃತ್ತಿ, ಇಂದು ಬೀಳ್ಕೊಡುಗೆ

ರಾಮಚಂದ್ರ ರಾವ್ ಅವರ ಚಿತ್ರಕೃಪೆ: ಪದ್ಮನಾಭ ರಾವ್ (ರಾಮಚಂದ್ರ ರಾವ್ ಸಹೋದರ), ಪಲ್ಲವಿ ಸ್ಟುಡಿಯೋ, ಬಿ.ಸಿ.ರೋಡ್

ಗೂಡಿನಬಳಿ ಶಾಲೆಯ ಹೆಡ್ ಮಾಸ್ಟರ್ ಬಿ.ರಾಮಚಂದ್ರ ರಾವ್ ಬೀಳ್ಕೊಡುಗೆ ಸಮಾರಂಭ ಇಂದು ಬಿ.ಸಿ.ರೋಡಿನ ಗೂಡಿನಬಳಿ ಶಾಲೆಯ ಸಮುದಾಯ ಭವನದ ಸಭಾಂಗಣದಲ್ಲಿ ಇಂದು ಜುಲೈ 21 ಸಂಜೆ 4.30ಕ್ಕೆ ಶಿಕ್ಷಕ ವೃತ್ತಿಯಿಂದ ಸೇವಾ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯ ಬಿ.ರಾಮಚಂದ್ರ ರಾವ್ ಅವರ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಲಿದೆ. ಮಸ್ಜಿದ್ ಎ ಮುತ್ತಲಿಬ್, ಹಯಾತುಲ್ ಇಸ್ಲಾಂ ಸಂಘ, ಸಮಸ್ತ ಜಮಾಅತರು ಮತ್ತು ಹಯಾತುಲ್ ಇಸ್ಲಾಂ ವಿದ್ಯಾಸಂಸ್ಥೆಗಳ ವತಿಯಿಂದ ಈ ಕಾರ್ಯಕ್ರಮ ನಡೆಯಲಿದೆ. ಬಿ.ರಾಮಚಂದ್ರ ರಾವ್ ಅವರು ಹಯಾತುಲ್ ಇಸ್ಲಾಂ ವಿದ್ಯಾಸಂಸ್ಥೆಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕ, ಹೆಡ್ ಮಾಸ್ಟರ್ ಆಗಿ ಸುದೀರ್ಘ ಕಾಲ ಕರ್ತವ್ಯ ಸಲ್ಲಿಸಿದವರು. ಕಾರ್ಯಕ್ರಮ ನಿರೂಪಕರಾಗಿ, ಜೇಸಿ ರೋಟರಿಯಂಥ ಸ್ವಯಂಸೇವಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿರುವ ಅವರು ಉತ್ತಮ ಕಲಾವಿದರೂ ಹೌದು.

ಅವರ ಕುರಿತು ಹಳೆಯ ವಿದ್ಯಾರ್ಥಿ, ಪತ್ರಕರ್ತ ಫಾರೂಕ್ ಬಂಟ್ವಾಳ ಬರೆದಿರುವುದು ಹೀಗೆ.

ಜಾಹೀರಾತು

ಬದುಕು ಕಲಿಸುವ ಪಾಠ ಯಾವ ವಿಶ್ವವಿದ್ಯಾಲಯವೂ ಕಲಿಸದು ಎನ್ನುವ ಮಾತೊಂದಿದೆ. ಬದುಕು ಕೂಡ ಕೆಲವೊಂದನ್ನು ಬಚ್ಚಿಟ್ಟುಕೊಂಡು ನಮ್ಮನ್ನು ಎಡವಿಸುತ್ತದೆ. ಆದರೆ ವಿದ್ಯೆ ಕಲಿಸುವ ಗುರು ಎಂದೋ ಕೆಡಕು ಬಯಸಲಾರ ಎನ್ನುವುದು ಬದುಕು ಕಲಿಸಿದ ಪಾಠ. 

 ಈ ಮಾತು ಇಂದು ನಮ್ಮನ್ನೆಲ್ಲಾ ಬೀಳ್ಕೊಡಲಿರುವ ನಮ್ಮೆಲ್ಲರ ಗೌರವದ, ಪ್ರೀತಿಯ ಶ್ರೀಯುತ ರಾಮಚಂದ್ರ ರಾಯರಿಗೆ ಸಲ್ಲುತ್ತದೆ. ಓರ್ವ ಶಿಕ್ಷಕ, ಕೊನೆಯ ತನಕವೂ ಕೇವಲ ಒಬ್ಬ ಶಿಕ್ಷಕರಾಗಿ ಉಳಿಯಬಲ್ಲ; ಹಲವಾರು ಉದಾಹರಣೆಯ ನಡುವೆಯೂ ರಾಮಚಂದ್ರ ಮಾಸ್ತರರ ವ್ಯಕ್ತಿತ್ವ ವಿಭಿನ್ನವಾಗಿ ಕಾಣುವುದು.

 ರಂಗಕರ್ಮಿಯಾಗಿ, ನಾಟಕ ನಿರ್ದೇಶಕರಾಗಿ, ಸಂಗೀತ ವಿದ್ವಾನ್ ಆಗಿ, ಆಟಗಾರರಾಗಿ, ಬರಹಗಾರರಾಗಿ, ಉದ್ಘೋಷಕರಾಗಿ, ನಿರೂಪಕರಾಗಿ, ಭಾಷಣಕಾರರಾಗಿ, ಕವನ ರಚನೆಕಾರರಾಗಿ, ತರಬೇತಿದಾರರಾಗಿ, ಸಂಘಟಕರಾಗಿ…. ವೃತ್ತಿ ಬದುಕಿನಿಂದ ಈಚೆ ಬಂದು ವ್ಯಕ್ತಿತ್ವವನ್ನು ವಿಸ್ತಾರಗೊಳಿಸಿದವರು. ಅದರಲ್ಲೂ ಮುಖ್ಯವಾದುದು ಅವರ ಕಂಚಿನಕಂಠ. ಹೀಗೆ ಬಹುಮುಖ ಸಾಧನೆಗಳ ನಾನಾ ಮಜಲುಗಳೂ, ಒಂದೊಂದು ವಿಶೇಷಣ ಹೊಂದಿದೆ.

 ತಮ್ಮ ಪಾಲಿನ ಕರ್ತವ್ಯ ಇರಲಿ, ತಮ್ಮ ಮೇಲಿನ ಜವಾಬ್ದಾರಿ ಇರಲಿ. ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ, ಎಲ್ಲರೂ ಮೆಚ್ಚಿ ಬೆರಗುಗೊಳಿಸುವುದೇ ರಾವ್ ವಿಶೇಷ. ವೃತ್ತಿ ಜೀವನದಲ್ಲೂ ಅಷ್ಟೇ ಸಂಹಿತೆ, ನೀತಿ-ಕ್ರಮ ಅಳವಡಿಸಿಕೊಂಡವರು.‌ ಶಾಲಾ ಪಠ್ಯಕ್ಕೂ ರಚನಾತ್ಮಕ ಚೌಕಟ್ಟು ನೀಡಿ, ಆಧುನಿಕತೆ ಸ್ಪರ್ಶ ನೀಡಿದವರು.

 ಅನುದಾನಿತ ಶಾಲಾ ಶಿಕ್ಷಕರ ಸಂಘವನ್ನು ಸಂಘಟಿಸಿದ ಅನುದಾನಿತ ವಿದ್ಯಾಸಂಸ್ಥೆಗಳು ಎದುರಿಸುತ್ತಿರುವ ಸವಾಲುಗಳನ್ನು ಸರಕಾರದ ಮಟ್ಟದಲ್ಲಿ ಗಮನ ಸೆಳೆಯಲು ಸಾಕಷ್ಟು ಪರಿಶ್ರಮ ಪಟ್ಟವರು. ಕನ್ನಡ ಸಾಹಿತ್ಯ ಪರಿಷತ್ತು, ಚುಟುಕು ಸಾಹಿತ್ಯ ಪರಿಷತ್ತು ಮತ್ತಿತರ ಸಂಘಟನೆಗಳನ್ನು ಮುನ್ನುಡೆಸಿ ಸಾಹಿತ್ಯ ಸೇವೆ, ಜೇಸಿಐ, ರೋಟರಿ, ಲಯನ್ ಕ್ಲಬ್ ಮೊದಲಾದ ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸಿ ಬೇಷ್ ಅನ್ನಿಸಿಕೊಂಡವರು‌.

 ಈ ಎಲ್ಲವನ್ನೂ ಹಿನ್ನೆಲೆಯಾಗಿಸಿಕೊಂಡರೆ ಇಡೀ ಶಿಕ್ಷಕರ ಸಮೂಹ ಅವರಿಗೆ ಋಣಿಯಾಗಿದೆ. ಶ್ರೀಯುತರ ವೃತ್ತಿ ಜೀವನದ ಸಾಧನೆ, ಅಪರಿಮಿತ ವ್ಯಾಪ್ತಿ ‘ರಾಷ್ಟ್ರ ಪ್ರಶಸ್ತಿ’ ಪಡೆಯುವ ಎಲ್ಲಾ ಮಾನದಂಡ, ಅರ್ಹತೆ ಹೊಂದಿದರೂ, ಪ್ರಶಸ್ತಿ, ಪುರಸ್ಕಾರಗಳನ್ನು ಅವರು ಹಿಂಬಾಲಿಸಿಕೊಂಡು ಹೋದವರಲ್ಲ. ಈ ವಿಷಾದದ ಮಧ್ಯೆಯೂ, ವೃತ್ತಿ ಜೀವನವನ್ನು ಕೊನೆಗೊಳಿಸಿದ ರಾವ್ ಅವರನ್ನು ಬೀಳ್ಕೊಡುವ ಮುನ್ನ ಒಂದು ಬಲಿಷ್ಠವಾದ ಅಪರಾಧ ಪ್ರಜ್ಞೆ ಕಾಡದೇ ಇರದು.

  • ( ಫಾರೂಕ್ ಬಂಟ್ವಾಳ ಅವರ ಫೇಸ್ಬುಕ್ ವಾಲಿನಿಂದ)
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.