ಕಲ್ಲಡ್ಕ

ಕಲ್ಲಡ್ಕ ಶ್ರೀರಾಮ ಶಾಲೆಯಲ್ಲಿ ಮಳೆಕೊಯ್ಲು ಘಟಕ

ಕಲ್ಲಡ್ಕದಲ್ಲಿರುವ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಮಳೆಕೊಯ್ಲು ಘಟಕ ಆರಂಭಿಸುವ ಮೂಲಕ ಜಲಸಂರಕ್ಷಣಾ ಅಭಿಯಾನಕ್ಕೆ ಪೂರಕ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಜಾಹೀರಾತು

ಹನಿ ಹನಿ ನೀರೂ  ಪೋಲಾಗದಂತೆ ಶಾಲಾ ಕಟ್ಟಡದ ಮೇಲ್ಛಾವಣಿಗೆ ತಡೆಗೋಡೆ ನಿರ್ಮಿಸಿ 1 ಲಕ್ಷ ಲೀ.ನಷ್ಟು ನೀರು ಸಂಗ್ರಹಿಸಲಾಗಿದೆ ಇದನ್ನು ಇದ್ದಿಲು, ಮರಳು ಹಾಗೂ ಜಲ್ಲಿ ಬಳಸಿ ಮಾಡಿದ ಸಾಂಪ್ರದಾಯಿಕ ಶುದ್ಧೀಕರಣ ಘಟಕದ ಮೂಲಕ  ನೀರನ್ನು ಸಂಪ್‌ಗೆ ಹಾಯಿಸಲಾಗತ್ತದೆ. ಹೆಚ್ಚುವರಿ ನೀರು ಸಂಗ್ರಹಕ್ಕಾಗಿಯೇ 1.25 ಲಕ್ಷ ಲೀ ಸಾಮರ್ಥ್ಯದ ಪ್ರತ್ಯೇಕ ಸಂಪನ್ನು ಶಾಲಾ ಆವರಣದೊಳಗೆ ನಿರ್ಮಿಸಲಾಗಿದೆ. ಇದಲ್ಲದೆ ಸಂಪು ಭರ್ತಿಯಾದ ನಂತರ 2ಎಚ್.ಪಿ ಪಂಪ್‌ನ ಮೂಲಕ ನೀರು ಶೇಖರಿಸಲು 5 ಸಾವಿರ ಲೀ.ನ ಪ್ರತ್ಯೇಕ ಟ್ಯಾಂಕ್‌ನ ವ್ಯವಸ್ಥೆ ಮಾಡಲಾಗಿದೆ. ಈ ಮಳೆಕೊಯ್ಲು ಘಟಕದ ಮೂಲಕ ಅಲ್ಪ ಮಳೆಯಾದರೂ ಸಾಕಷ್ಟು ನೀರಿನ ಸಂಗ್ರಹವಾಗುತ್ತದೆ. ಮಳೆಗಾಲದಲ್ಲಿ ಕೊಳವೆ ಬಾವಿಯನ್ನು ಉಪಯೋಗಿಸಿದ ರೀತಿಯಲ್ಲಿ ನೀರಿನ ಸದ್ಭಳಕೆಯನ್ನು ಮಾಡಲಾಗುತ್ತದೆ. ಈ ಮೂಲಕ ಮಳೆಗಾಲ ಪೂರ್ತಿಯಾಗಿ ಯಾವುದೇ ಅಂತರ್ಜಲವನ್ನು ಬಳಸದ ರೀತಿಯಲ್ಲಿ ಯೋಜಿಸಲಾಗಿದೆ. ಮುಂದಿನ ಹಂತದಲ್ಲಿ ವಿದ್ಯಾಕೇಂದ್ರದ ಎಲ್ಲಾ ವಿಭಾಗಕ್ಕೂ ಸಮರ್ಪಕವಾಗಿ ಬಳಸಿಕೊಳ್ಳುವ ಚಿಂತನೆ ಕೈಗೊಳ್ಳಲಾಗಿದೆ, ಈ ಮೂಲಕ  ಪ್ರತಿಯೊಬ್ಬ ವಿದ್ಯಾರ್ಥಿಯೂ ಜಲಸಂರಕ್ಷಣೆಗಾಗಿ ಆದ್ಯತೆ ಕೊಡುವ ಕಾರ್ಯವನ್ನು ಕೈಗೊಳ್ಳಲಾಗಿದೆ.

ಉದ್ಘಾಟನೆ:

ಘಟಕವನ್ನು ಬಾಳ್ತಿಲ ಗ್ರಾಪಂ ಅಧ್ಯಕ್ಷ ವಿಠಲ ನಾಯ್ಕ್ ಉದ್ಘಾಟಿಸಿದರು.

ಪ್ರತಿ ವರ್ಷ ಹೆಚ್ಚು ಮಳೆಯಾಗುವ ನಮ್ಮ ಜಿಲ್ಲೆಯಲ್ಲಿ ನೀರಿನ ಕೊರತೆ ಎದುರಾಗಿದ್ದು, ಭವಿಷ್ಯದಲ್ಲಿ ನೀರಿನ ಹಾಹಕಾರಕ್ಕೆ ಪರಿಹಾರವಾಗಿ ಈಗಿನಿಂದಲೇ ಪ್ರತಿ ಮನೆಯಲ್ಲಿ ಮಳೆಕೊಯ್ಲು ಅಳವಡಿಸಿಕೊಳ್ಳಬೇಕು. ಪ್ರಸ್ತುತ ಜನರಲ್ಲಿ ಮಾಹಿತಿ ಹಾಗೂ ಆಸಕ್ತಿಯ ಕೊರತೆಯಿಂದ ಜೀವಜಲ ಸಮುದ್ರ ಸೇರುತ್ತಿದೆ. ಇಂತಹ ಸಂಗತಿಯನ್ನು ಮನಗಂಡು ಶ್ರೀರಾಮ ಶಾಲೆಯಲ್ಲಿ ಮಳೆಕೊಯ್ಲು ಆರಂಭಿಸಿದ್ದು ಇದು ಶಾಲೆ ಮಾತ್ರವಲ್ಲದೇ ಬಾಳ್ತಿಲ ಗ್ರಾಮಕ್ಕೇ ಹೆಮ್ಮೆ  ತರುವ ಸಂಗತಿಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಜಲಸಂರಕ್ಷಣೆಗೆ ಆದ್ಯತೆ ಕೊಡುವುದರೊಂದಿಗೆ ಇಂತಹ ಕ್ರಾಂತಿ ಮನೆ-ಮನೆಯಲ್ಲಿ ನಡೆಯಬೇಕು ಎಂದು ವಿಠ್ಠಲ್ ನಾಯ್ಕ್‌ ಹೇಳಿದರು.

ಮಳೆಕೊಯ್ಲು ವೈಯುಕ್ತಿಕವಾಗಿ ಅಳವಡಿಸಿಕೊಳ್ಳಲು ಖಾಸಗಿ ಬೋರುವೆಲ್‌ಗಳಿಗೆ ಜಲಪೂರಣ ಹಾಗೂ ಕೃಷಿ ಹೊಂಡದಂತಹ ಕಾರ್ಯಕ್ಕೆ ನರೇಗಾದಡಿಯಲ್ಲಿ ಸಿಗುವ ಅನುದಾನದ ಬಗ್ಗೆ ವಿಠ್ಠಲ್ ನಾಯ್ಕ್ ರವರು ಮಾಹಿತಿಯನ್ನು ನೀಡಿದರು. ಮುಂದಿನ ದಿನಗಳಲ್ಲಿ ಎಲ್ಲಾ ವಿಭಾಗದಲ್ಲಿಯೂ ಅಳವಡಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ನಿಂದ ಸಿಗುವ ಎಲ್ಲಾ ಸಹಕಾರವನ್ನು ಒದಗಿಸುವುದಾಗಿ ತಿಳಿಸಿದರು.

ವಿದ್ಯಾರ್ಥಿ ಸಮೂಹಕ್ಕೆ ಮಳೆಕೊಯ್ಲು ಯೋಜನೆ ಪ್ರೇರಣೆಯಾಗಿದೆ. ಈ ಸಂಗತಿಯನ್ನು ಮನೆಯಲ್ಲಿಯೂ ಕಡಿಮೆ ಖರ್ಚಿನಲ್ಲಿ ಅಳವಡಿಸುವ ಬಗ್ಗೆ ಪೋಷಕರೊಂದಿಗೆ ಚರ್ಚಿಸುತ್ತೇನೆ ಎಂದು ಶಾಲಾ ನಾಯಕ ದೀಕ್ಷಿತ್ ಅಭಿಪ್ರಾಯ ಹೇಳಿದರು.

ತಾಪಂ ಸದಸ್ಯರಾದ ಲಕ್ಷ್ಮೀ ಗೋಪಾಲಾಚಾರ್, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು, ಕುಲ್ಯಾರು ನಾರಾಯಣ ಶೆಟ್ಟಿ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಮತಾ ಶೆಟ್ಟಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಸಾಲ್ಯಾನ್, ಶಾಲೆಯ ಕುಡಿಯುವ ನೀರಿನ ಉಸ್ತುವಾರಿಯಾದ ಸುಧನ್ವ ಶಾಸ್ತ್ರೀ ಹಾಗೂ ಶಾಲಾ ಮುಖ್ಯಶಿಕ್ಷಕರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ಶಾಲಾ ಅಧ್ಯಾಪಕರಾದ ಸುಮಂತ್ ಆಳ್ವ ನಿರೂಪಿಸಿದರು. ವೇದಾವತಿ ಸ್ವಾಗತಿಸಿದರು. ರೇಷ್ಮಾ ವಂದಿಸಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.