ಸಂಸದರಾಗಿ ಮೂರನೇ ಬಾರಿಗೆ ಆಯ್ಕೆಗೊಂಡಿರುವ ನಳಿನ್ ಕುಮಾರ್ ಕಟೀಲ್ ಅವರನ್ನು ಅಭಿನಂದಿಸುವ ಹಿನ್ನೆಲೆಯಲ್ಲಿ ಬಂಟ್ವಾಳ ಬಿಜೆಪಿ ಕ್ಷೇತ್ರ ಸಮಿತಿ ವತಿಯಿಂದ ವಿಜಯೋತ್ಸವ ಮೆರವಣಿಗೆ ಬಿ.ಸಿ.ರೋಡ್, ಬಂಟ್ವಾಳದಲ್ಲಿ ಶನಿವಾರ ಸಂಜೆ ನಡೆಯಿತು.
ಪೊಳಲಿ ಕೈಕಂಬ ದ್ವಾರದಿಂದ ಆರಂಭಗೊಂಡ ಮೆರವಣಿಗೆ ಬಿ.ಸಿ.ರೋಡ್ ಮೂಲಕ ಸಾಗಿ ಬಂಟ್ವಾಳ ಪೇಟೆಯುದ್ದಕ್ಕೂ ಸಂಚರಿಸಿ ಜಕ್ರಿಬೆಟ್ಟುವಿನ ಬಳಿಗೆ ಸಾಗಿತು. ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾಲೆ ಹಾಕಿ ಅಭಿನಂದಿಸಿದರು. ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಬಿಜೆಪಿ ಮುಖಂಡರಾದ ಕೆ.ಹರಿಕೃಷ್ಣ ಬಂಟ್ವಾಳ್, ಸುಲೋಚನಾ ಜಿ.ಕೆ.ಭಟ್, ಬಿ.ದೇವದಾಸ ಶೆಟ್ಟಿ, ದಿನೇಶ್ ಅಮ್ಟೂರ್, ರಾಮದಾಸ ಬಂಟ್ವಾಳ ಸಹಿತ ಪಕ್ಷದ ನಾನಾ ಜವಾಬ್ದಾರಿ ಹೊತ್ತ ನಾಯಕರು, ಜಿಪಂ, ತಾಪಂ, ಪುರಸಭೆ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡರು. ತೆರೆದ ಜೀಪಿನಲ್ಲಿ ನಳಿನ್ ಕುಮಾರ್ ಕಟೀಲ್ ಸಂಚರಿಸಿದ ಸಂದರ್ಭ, ಗೊಂಬೆ ಕುಣಿತ, ಚೆಂಡೆ, ಬ್ಯಾಂಡ್ ವಾದ್ಯಗಳೊಂದಿಗೆ ಸಂಗೀತದ ನಾದವೂ ಸೇರಿಕೊಂಡಿತ್ತು. ಇಡೀ ಮೆರವಣಿಗೆಗೆ ಬಂಟ್ವಾಳ ಪೊಲೀಸ್ ಎಸ್.ಐ. ಚಂದ್ರಶೇಖರ್ ನೇತೃತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ವಹಿಸಲಾಗಿತ್ತು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…